ಬೆಂಗಳೂರು ಪೊಲೀಸರ ಸಂಪರ್ಕಿಸಲು Facebook, Twitter
ಬೆಂಗಳೂರು, ಅ.11: ಸಾರ್ವಜನಿಕರೊಂದಿಗೆ ಹೆಚ್ಚು ಸಂಪರ್ಕ ಸಾಧಿಸುವಂತಾಗಲು ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲ ತಾಣಗಳ ಬಳಕೆಗೆ ಮೊರೆ ಹೋಗಿದ್ದಾರೆ.
ದೇಶದಲ್ಲಿ ಅತಿ ಹೆಚ್ಚು Facebook ಬಳಕೆದಾರರಲ್ಲಿ ಬೆಂಗಳೂರಿಗೆ 2ನೆಯ ಸ್ಥಾನ. 29 ಲಕ್ಷಕ್ಕೂ ಅಧಿಕ ಮಂಧಿ Facebook ಬಳಸುತ್ತಿದ್ದಾರೆ. ಅಗ್ರಸ್ಥಾನದಲ್ಲಿರುವ ಮುಂಬೈನಲ್ಲಿ 37 ಲಕ್ಷ ಮಂದಿ Facebookಗೆ ಅಂಕಿತರಾಗಿದ್ದಾರೆ. ವಿಶ್ವದಲ್ಲಿ ಬೆಂಗಳೂರಿಗೆ 16ನೆಯ ಸ್ಥಾನ. ಬ್ಯಾಂಕಾಕಿನಲ್ಲಿ ಗರಿಷ್ಠ 80 ಲಕ್ಷ ಮಂದಿ Facebook ಬಳಕೆದಾರರಿದ್ದಾರೆ.

ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಈ ನೂತನ ಯೋಜನೆಗೆ ಚಾಲನೆ ದೊರೆತಿದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾಹಿತಿ ವಿನಿಮಯಕ್ಕೆ ಅಲ್ಲದೇ ಪರಸ್ಪರರ ನಡುವಿನ ಬಾಂಧವ್ಯ ಸುಧಾರಣೆಗೂ ಉತ್ತಮ ವೇದಿಕೆಯಾಗಲಿದೆ ಎಂದು ಗೃಹ ಸಚಿವ ಆರ್ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ನಿನ್ನೆ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ, ರಾಜ್ಯ ಪೊಲೀಸ್ ಮಹಾನಿರ್ದೇಶಕ (ಹಂಗಾಮಿ) ಲಾಲ್ ರೋಕುಮ ಪಚಾವೊ, ಡಿಜಿಪಿ ಸುಶಾಂತ್ ಮಹಾಪಾತ್ರ, ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ಕುಮಾರ್ ಅವರ ಸಮ್ಮುಖದಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ.
ಸಾರ್ವಜನಿಕರು ನಿರ್ಭೀತಿಯಿಂದ ಪೊಲೀಸ್ ಠಾಣೆಗಳಿಗೆ ಬಂದು ದೂರು ನೀಡುವ ಹಾಗೂ ಅಧಿಕಾರಿಗಳೊಂದಿಗೆ ಮುಕ್ತವಾಗಿ ಮಾತನಾಡುವಂತಹ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಪ್ರಯತ್ನ ನಡೆಸಬೇಕು. ಅಂತರ್ಜಾಲ ಬಳಕೆಯ ಬಗ್ಗೆ ಸಿಬ್ಬಂದಿ ಹೆಚ್ಚು ಗಮನಹರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಈ ಯೋಜನೆಯ ನಿರ್ವಹಣೆಗಾಗಿ ವಿಶೇಷ ಸಿಬ್ಬಂದಿ ತಂಡವನ್ನು ರಚಿಸಲಾಗಿದೆ. ಆ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮಾಹಿತಿ ನೀಡಿದರು.
Facebook ಮತ್ತು Twitter ಸಾಮಾಜಿಕ ಜಾಲ ತಾಣಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ನಾಗರಿಕರೊಂದಿಗೆ ಸಂಪರ್ಕ ಸಾಧಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಅಂರ್ತಜಾಲದ ಮೂಲಕ ಮಾಡುತ್ತಿರುವ ಈ ಪ್ರಯತ್ನ ಪೊಲೀಸ್ ಇಲಾಖೆಯನ್ನು ಪ್ರತಿಯೊಬ್ಬ ನಾಗರೀಕನ ಸಾಮಿಪ್ಯಕ್ಕೆ ಕೊಂಡೊಯ್ದು ಅದರ ಸೇವೆಗಳನ್ನು ಹೆಚ್ಚು ದಕ್ಷತೆಯಿಂದ ಕೈಗೊಳ್ಳುವಲ್ಲಿ ಸಹಕಾರಿಯಾಗಿರುತ್ತದೆ. ಈ ವಿನೂತನ ಪ್ರಯೋಗದಿಂದ ಸಾರ್ವಜನಿಕರು ಇಲಾಖೆಯಿಂದ ಬಯಸುವ ಮಾಹಿತಿಗಳನ್ನು ಅತ್ಯಂತ ಸುಲಭವಾಗಿ ಪಡೆಯುವಲ್ಲಿ ಸಹಕಾರಿಯಾಗಿರುತ್ತದೆ.
ಹಾಗೆಯೇ ಜನರು ಪೊಲೀಸರ ಕಾರ್ಯವಿಧಾನಗಳನ್ನು ತಿಳಿದುಕೊಳ್ಳಲು ಮತ್ತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಲ್ಲಿ ಇದೊಂದು ಉತ್ತಮ ವೇದಿಕೆಯಾಗಿರುತ್ತದೆ. ಈ ಒಂದು ಪ್ರಯೋಗ ತಮ್ಮೆಲ್ಲರ ಸಹಕಾರದಿಂದ ಅತ್ಯಂತ ಯಶಸ್ಸನ್ನು ಕಂಡು ಬೆಂಗಳೂರು ನಗರ ಪೊಲೀಸ್ ಇಡಿ ದೇಶಕ್ಕೆ ಮುಂಚೂಣಿಯಲ್ಲಿರಲಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಹಂಗಾಮಿ) ಲಾಲ್ ರೋಕುಮ ಪಚಾವೊ ಆಶಿಸಿದ್ದಾರೆ.












Click it and Unblock the Notifications