ಕಾವೇರಿದ ಸುಪ್ರೀಂ ದೂರು: ತಮಿಳುನಾಡು ಪ್ರಲಾಪವೇನು?

ಆದರೆ ಅ. 8ರಂದು ಕರ್ನಾಟಕದ ಮನವಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠವು 'ಕರ್ನಾಟಕ ಕಾಲಕಾಲಕ್ಕೆ ನೀರನ್ನು ಬಿಡುತ್ತಿದೆಯಲ್ಲಾ, ಮತ್ಯಾಕೆ ಆಕ್ಷೇಪ?' ಎಂದು ತಮಿಳುನಾಡು ವಕೀಲ ವೈದ್ಯನಾಥನ್ ಅವರನ್ನು ಗದರಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈಗ ತಮಿಳುನಾಡು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಕೇಸನ್ನು ಅಂಗೀಕರಿಸುತ್ತದಾ? ಅಥವಾ ಅರ್ಜಿ ವಜಾಗೊಳಿಸುತ್ತಾದಾ? ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಅಂಗೀಕರಿಸಿದರೆ ಏನು ತೀರ್ಪು ಬರಬಹುದು ಎಂಬ ಕುತೂಹಲವೂ ಗರಿಗೆದರಿದೆ.
ಏಳು ಮಂದಿಯ ವಿರುದ್ಧ ಹದಿನೇಳು ಪುಟಗಳ ಅರ್ಜಿ:
ಕಾವೇರಿ ನೀರು ಬಿಡುಗಡೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಮತ್ತು ಇತರೆ ನಾಲ್ವರು ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ತಮಿಳುನಾಡು ಬುಧವಾರ ಸುಪ್ರೀಂ ಕೋರ್ಟ್ಗೆ ಎಂದು ಹದಿನೇಳು ಪುಟಗಳ ಅರ್ಜಿ ಸಲ್ಲಿಸಿದೆ.
ಕಾವೇರಿ ನದಿ ಪ್ರಾಧಿಕಾರ ಸೆ. 19ರಂದು ನೀಡಿದ್ದ ನಿರ್ದೇಶನ ಪಾಲಿಸುವಂತೆ ಸುಪ್ರೀಂ ಕೋರ್ಟ್ ಸಹ ಸೆ. 28ರಂದು ಆದೇಶಿಸಿತ್ತು. ಆದರೆ ಇದನ್ನು ಕರ್ನಾಟಕ ಉದ್ದೇಶಪೂರ್ವಕವಾಗಿ ಕಡೆಗಣಿಸಿದೆ. ಸರ್ವೋಚ್ಛ ನ್ಯಾಯಾಲದ ಆದೇಶಕ್ಕೆ ಬೆಲೆ ಕೊಡದೆ ಅ. 8ರಂದೇ ಜಲಾಶಯಗಳ ಗೇಟ್ ಬಂದ್ ಮಾಡಲಾಗಿದೆ ಎಂದು ನ್ಯಾಯಾಲಯ ನಿಂದನೆ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಡಿ. ಸತ್ಯಮೂರ್ತಿ, ಜಲ ಸಂಪನ್ಮೂಲ ಅಭಿವೃದ್ಧಿ ಸಂಘಟನೆ ಮುಖ್ಯ ಇಂಜಿನಿಯರ್ ಬಂಗಾರುಸ್ವಾಮಿ, ಕೆಆರ್ಎಸ್ ಅಣೆಕಟ್ಟೆ ಸುಪರಿಂಟೆಂಡಿಂಗ್ ಇಂಜಿನಿಯರ್ ಶಂಕರಗೌಡ, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ವಿಜಯ ಕುಮಾರ್ ಅವರ ಮೇಲೆ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ತಮಿಳುನಾಡು ಮನವಿ ಮಾಡಿದೆ.
ಒಂದು ವೇಳೆ ಪ್ರತಿವಾದಿಗಳ ಮೇಲೆ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳದೆ ಹೋದರೆ, ಅದು ದೇಶದ ಪ್ರಜಾಪ್ರಭುತ್ವಕ್ಕೆ ಕೆಟ್ಟ ದಿನವಾಗಲಿದೆ. ದೇಶದ ಒಕ್ಕೂಟ ವ್ಯವಸ್ಥೆ ಮುರಿದು ಬೀಳಲಿದೆ. ಅಲ್ಲದೆ, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಗೌರವ ಕಡಿಮೆಯಾಗಲಿದೆ ಎಂದು ತಮಿಳುನಾಡು ದೂರಿನಲ್ಲಿ ಪ್ರಲಾಪಿಸಿದೆ.
ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನೇತೃತ್ವದಲ್ಲಿ ನಡೆದ ಅವಲೋಕನಾ ಸಭೆಯಲ್ಲಿ ಕರ್ನಾಟಕದ ಕ್ರಮದ ವಿರುದ್ಧ ಸುಪ್ರೀಂ ಮೊರೆ ಹೋಗುವ ನಿರ್ಣಯ ಕೈಗೊಂಡಿದೆ.












Click it and Unblock the Notifications