ಕೆಎಸ್ಆರ್ಟಿಸಿಗೆ ಕೋಟ್ಯಂತರ ನಷ್ಟ, ಸಂಬಳವಿಲ್ಲ
ಬೆಂಗಳೂರು, ಅ.9: ಕಾವೇರಿ ನದಿ ನೀರು ಹೋರಾಟದಲ್ಲಿ ರಾಜ್ಯದ ಜನತೆಗೆ ಆಗುತ್ತಿರುವ ನಾನಾ ನಷ್ಟಗಳ ನಾನಾ ಮುಖಗಳು ಅನಾವರಗೊಳ್ಳುತ್ತಿವೆ. ಮೂಲತಃ ತಮಿಳುನಾಡಿಗೆ ನೀರು ಬಿಟ್ಟು ರೈತ ಬದುಕು ಸಂಕಷ್ಟಕ್ಕೆ ಈಡಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ತತ್ಸಂಬಂಧಿತ ಹೋರಾಟದಲ್ಲಿ ಪರೋಕ್ಷವಾಗಿಯೂ ರಾಜ್ಯ ಸಂತ್ರಸ್ತವಾಗುತ್ತಿದೆ. ಚಳಿವಳಿ, ಹೋರಾಟ, ಬಂದ್ ಅಂದರೆ ಮೊದಲ ಕಲ್ಲು ಬೀಳುವುದೇ ಸಂಚಾರ ವ್ಯವಸ್ಥೆಗೆ. ಹಾಗಾಗಿ ಕೆಎಸ್ಆರ್ ಟಿಸಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಇದು ಪ್ರಯಾಣಿಕರ ಮೇಲೆ ದೂರಗಾಮಿ ಪರಿಣಾಮ ಬೀಳುವುದು ಖಂಡಿತ. ಆದರೆ ಸದ್ಯಕ್ಕೆ ಇದು ಸಾರಿಗೆ ಸಂಸ್ಥೆಯ ಹೊಟ್ಟೆಗೆ ಹೊಡೆದಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ಸೇ ಸಂಚರಿಸುತ್ತಿಲ್ಲ ಎಂದಾದ ಮೇಲೆ ಡ್ರೈವರ್, ಕಂಡಕ್ಟರ್ ಗೇನೂ ಕೆಲಸ. ಹಾಗಾಗಿ ಸಂಸ್ಥೆ ಅವರಿಗೆ ಬಲವಂತದ ಮಾಘ ಸ್ನಾನ ಮಾಡಿಸುತ್ತಿದೆ. ಅಂದರೆ ರಜೆ ಹಾಕಿ ಮನೆಯಲ್ಲಿರಲು ಹೇಳಿ, ಸಂಬಳ ಕಟ್ ಮಾಡುತ್ತಿದೆ. ಉಪ ಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಆರ್. ಅಶೋಕ್ ಅವರೇ ತಮ್ಮ ಸಂಸ್ಥೆಯ ವಿಚಿತ್ರ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾರೆ.
ಮಂಡ್ಯ-ಮೈಸೂರು ಕಾವೇರಿ ಚಳವಳಿ:
15 ದಿನಗಳಿಂದ ನಡೆಯುತ್ತಿದ್ದ, ಮಂಡ್ಯ-ಮೈಸೂರುಗಳಲ್ಲಿ ಕಾವೇರಿ ಚಳವಳಿ ತೀವ್ರಗೊಂಡಿರುವುದರಿಂದ ಬೆಂಗಳೂರು-ಮೈಸೂರು ಮಧ್ಯೆ ಬಸ್ ಸಂಚಾರ ಕಡಿಮೆಯಾಗಿದೆ. ಇದರಿಂದ ಸಂಸ್ಥೆಗೆ ಪ್ರತಿನಿತ್ಯ 30 ಲಕ್ಷ ರೂ. ನಷ್ಟ ಉಂಟಾಗುತ್ತದೆ ಎಂದರು.
ಇನ್ನು ಮಂಡ್ಯ ಜಿಲ್ಲಯಾದ್ಯಂತ 10 ದಿನಗಳಿಂದ ಸಾರಿಗೆ ನಿಗಮದ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ. ಸಂಸ್ಥೆಯ 350ಕ್ಕೂ ಹೆಚ್ಚು ಸಿಬ್ಬಂದಿಗೆ ನಿತ್ಯವೂ ಕಡ್ಡಾಯ ರಜೆ ಹಾಕಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಅವರಿಗೆ ಸಂಬಳ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ ನಿತ್ಯ 460 ಬಸ್ಗಳು ಬೇರೆ, ಬೇರೆ ಮಾರ್ಗದಲ್ಲಿ (ರೂಟ್) ಸಂಚರಿಸುತ್ತವೆ. ಅದರಲ್ಲಿ ಅರ್ಧದಷ್ಟು ಮಾರ್ಗಗಳಲ್ಲಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲ್ಲೂಕಿನಲ್ಲಿ ಬಸ್ ಸಂಚಾರ ಹೆಚ್ಚೂ ಕಡಿಮೆ ಸ್ತಬ್ಧವಾಗಿದೆ.
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಜಿಲ್ಲೆಯ ವಿವಿಧೆಡೆ ರಸ್ತೆ ತಡೆ ನಡೆಸಲಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಇದನ್ನು ಗಮನಿಸಿರುವ ರಸ್ತೆ ಸಾರಿಗೆ ನಿಗಮವು ಹಲವೆಡೆ ಬಸ್ ಸಂಚಾರವನ್ನು ರದ್ದುಗೊಳಿಸಿದೆ. ಬಸ್ ಮೇಲೆ ಕಲ್ಲು ತೂರಿ ಹಾನಿ ಉಂಟುಮಾಡಬಹುದು ಎನ್ನುವುದೂ ಸೇರಿಕೊಂಡಿದೆ.
ಬಸ್ಗಳ ಸಂಚಾರ ಮಾರ್ಗ ರದ್ದುಪಡಿಸುವುದರಿಂದ ನಿಗಮದ ಆದಾಯದಲ್ಲಿ ನಿತ್ಯ 12 ರಿಂದ 15 ಲಕ್ಷ ರೂಪಾಯಿವರೆಗೆ ನಷ್ಟ ಉಂಟಾಗುತ್ತಿದೆ. ಈವರೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಆ.7 ರಂದು 32.17 ಲಕ್ಷ ರೂಪಾಯಿ ಆದಾಯ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, ಕೇವಲ 14.48 ಲಕ್ಷ ರೂಪಾಯಿ ಸಂಗ್ರಹವಾಗಿದೆ. 31.33 ಲಕ್ಷ ರೂಪಾಯಿ ವೆಚ್ಚವಾಗಿದ್ದು, 16.85 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಸಂಸ್ಥೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications