ದಸರೆಗೂ ಮುನ್ನ ಕಾವೇರದ ಪ್ರವಾಸೋದ್ಯಮ
ಬೆಂಗಳೂರು, ಅ.8: ಕಾವೇರಿ ವಿವಾದದ ಹೋರಾಟದ ಬಿಸಿ ಪ್ರವಾಸೋದ್ಯಮಕ್ಕೂ ತಟ್ಟಿದೆ. ಶನಿವಾರ ಬಂದ್ ಗೆ ಮೈಸೂರಿನ ಪ್ರವಾಸಿ ತಾಣಗಳು ಕೂಡಾ ಕೈ ಜೋಡಿಸಿ ಬೆಂಬಲ ಸೂಚಿಸಿತ್ತು. ಆದರೆ, ದಸರೆಗೂ ಮುನ್ನ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿರುವುದು ಸ್ಥಳೀಯ ಉದ್ಯಮಿಗಳಿಗೆ ಆತಂಕ ತಂದಿದೆ.
ಮಂಡ್ಯ, ಮೈಸೂರು, ಚಾಮರಾಜ ನಗರ ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಮೇಲೆ ಕಾವೇರಿ ಹೋರಾಟ ಗಂಭೀರ ಪರಿಣಾಮ ಬೀರಿದೆ.ಇಡೀ ವರ್ಷ ಕಾಯ್ದು ದಸರಾ ಸಂದರ್ಭದಲ್ಲಿ ನಾಲ್ಕು ಕಾಸು ಮಾಡಿಕೊಳ್ಳುವ ನಿರೀಕ್ಷೆ ಹೊಂದಿದ್ದ ಚನ್ನಪಟ್ಟಣದ ಗೊಂಬೆ ಮಾರಾಟಗಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಹೋಟೆಲ್ ಗಳು ಖಾಲಿ ಖಾಲಿ: ದಸರಾ ಆರಂಭಕ್ಕೂ ತಿಂಗಳಿಗೂ ಮುಂಚೆ ಪ್ರಮುಖ ಹೋಟೆಲ್ ಗಳು ಮುಂಗಡ ಬುಕ್ಕಿಂಗ್ ಆಗಿ ಬಿಡುತ್ತಿತ್ತು. ಆದರೆ, ಈಗ ಪ್ರವಾಸಿಗರಿಲ್ಲದೆ ಪ್ರವಾಸಿ ತಾಣಗಳು ಸೊರಗಿವೆ. ಹೊಟೇಲ್ಗಳು ಖಾಲಿ ಖಾಲಿಯಾಗಿವೆ. ಪ್ರವಾಸಿಗರನ್ನೇ ನಂಬಿ ಬದುಕುತ್ತಿರುವವರು ಕಂಗಾಲಾಗಿದ್ದಾರೆ.
ಹೋಟೆಲ್ ಉದ್ಯಮಕ್ಕೆ ಈಗಾಗಲೇ ಸುಮಾರು 10 ಲಕ್ಷ ರು ನಷ್ಟ ತಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕಷ್ಟ ಎನ್ನುತ್ತಾರೆ ಸುಧಾಕರ್ ಶೆಟ್ಟಿ
ಮೈಸೂರಿನ ಚಾಮುಂಡೇಶ್ವರಿ, ಮೈಸೂರು ಮೃಗಾಲಯ, ಮೈಸೂರಿನ ಅರಮನೆಗಳು, ಬೃಂದಾವನ ಗಾರ್ಡನ್, ಕೆರೆಗಳು, ನಂಜನಗೂಡು, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟ, ಬಿಳಿ ರಂಗನಾಥಸ್ವಾಮಿ ಬೆಟ್ಟ ಮತ್ತಿತರ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ.
ಸರಳ ದಸರಾವೇ ಕಾರಣ?: ಬರದಿಂದ ನಾಡು ತತ್ತರಿಸುತ್ತಿರುವುದರಿಂದ ಮೈಸೂರು ದಸರಾ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಕಾವೇರಿ ಕೊಳ್ಳದ ಜನ ತಾಯಿ ಕಾವೇರಿ ರಕ್ಷಣೆಗಾಗಿ ಹಗಲು ಇರುಳು ಹೋರಾಟ ನಡೆಸಿದ್ದಾರೆ.
ಕಾವೇರಿ ಹೋರಾಟದಿಂದಾಗಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಬಗ್ಗೆ ಜನ ಇನ್ನೂ ನಿರ್ಧರಿಸಿಲ್ಲ. ಮಡಿಕೆರಿ ದಸರಾ ಉತ್ಸವದ ಬಗ್ಗೆಯೂ ನಿರ್ಧರಿಸಿಲ್ಲ.
ಮಂಡ್ಯ ಜಿಲ್ಲೆಯಲ್ಲಿ ಕಳೆದ ತಿಂಗಳಿಂದ ನಡೆಯುತ್ತಿರುವ ಕಾವೇರಿ ಜಲ ವಿವಾದ ಹೋರಾಟದಿಂದಾಗಿ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಯ ಪ್ರವಾಸೋದ್ಯಮದ ಪ್ರಕೃತಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ.ಟಿಪ್ಪು ಬೇಸಿಗೆ ಅರಮನೆ, ಶ್ರೀರಂಗನಾಥ ದೇವಾಲಯ, ರಂಗನತಿಟ್ಟು ಪಕ್ಷಿಧಾಮ, ಬಲಮುರಿ, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಕೃಷ್ಣರಾಜ ಸಾಗರದ ಬೃಂದಾವನ ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ.
ಅಲ್ಲದೆ, ಶ್ರೀರಂಗಪಟ್ಟಣ ದಸಾರಕ್ಕೂ ಮುಂಚೆಯೇ ಮಂಜು ಮುಸುಕಿದಂತಾಗಿದೆ. ಕಳೆದ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ರಂಗನತಿಟ್ಟಿಗೆ 4 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು, 3 ಲಕ್ಷ 54 ಸಾವಿರ ರೂಪಾಯಿಗೂ ಹೆಚ್ಚು ಆದಾಯ ಬಂದಿತ್ತು. ಈ ವರ್ಷ ಇದೇ ಅವಧಿಗೆ ಹೋಲಿಸಿದಲ್ಲಿ ಕೇವಲ 69 ಸಾವಿರ ರೂಪಾಯಿ ಮಾತ್ರ ಆದಾಯ ಬಂದಿದ್ದು, ಆದಾಯದಲ್ಲಿ 2 ಲಕ್ಷರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.
ಕೆಆರ್ಎಸ್ನ ಬೃಂದಾವನ ಗಾರ್ಡನ್ಗೆ ಸಾರ್ವಜನಿಕರ ಪ್ರವೇಶ ನಿಷೇಧದಿಂದ ಕಳೆದ 8ದಿನಗಳಲ್ಲಿ 12 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ದಸರಾ ಸಂದರ್ಭದಲ್ಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೃಂದಾವನ ಗಾರ್ಡನ್ಗೆ ಭೇಟಿ ನೀಡುವ ನಿರೀಕ್ಷೆ ಇಲ್ಲವಾಗಿದೆ.












Click it and Unblock the Notifications