ಅಂತ್ಯಕ್ರಿಯೆ ಮುಗಿಸಿ ವಾಪಸ್ಸಾಗುತ್ತಿದ್ದ ಕುಟುಂಬ ನಾಶ

ಮೃತರು ಜೇವರ್ಗಿ ತಾಲೂಕಿನ ಹರನೂರ ಗ್ರಾಮಕ್ಕೆ ಸೇರಿದವರು. ಶುಕ್ರವಾರ ರಾತ್ರಿ 7.30ರಲ್ಲಿ ಸೊನ್ನ ಕ್ರಾಸ್ ಬಳಿ ಈ ಭೀಕರ ಅಪಘಾತ ನಡೆದಿದೆ. ಡಿಕ್ಕಿಯ ವೇಗಕ್ಕೆ ಜೀಪ್ ನಜ್ಜುಗುಜ್ಜಾಗಿ ಪಕ್ಕದ ಹೊಲಕ್ಕೆ ಉರುಳಿದೆ. ಮೃತ 5 ಮಂದಿಯ ದೇಹವು ರಸ್ತೆಗೆ ಬಿದ್ದರೆ 7 ಮಂದಿಯ ದೇಹದ ಅವಯವಗಳು ಜೀಪಿನ ಬಿಡಿಭಾಗದೊಂದಿಗೆ ಜಜ್ಜಿ ಹೋಗಿವೆ. ಒಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.
ಸಿಂಧಗಿ ತಾಲೂಕು ಯರಗಲ್ಲ ಗ್ರಾಮದಲ್ಲಿ ಸಂಬಂಧಿಕರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಒಟ್ಟು 19 ಮಂದಿ ತಮ್ಮ ಸಂಬಂಧಿಕರ ಶವ ಸಂಸ್ಕಾರಕ್ಕೆಂದು ಒಂದೇ ಜೀಪ್ ನಲ್ಲಿ ತೆರಳಿದ್ದರು.
ಸಿಂಧಗಿ ತಾಲೂಕು ಯರಗಲ್ಲ ಗ್ರಾಮದಲ್ಲಿ ಸಂಬಂಧಿಕರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ ಮಧುಕರ ಪವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಜೇವರ್ಗಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹಾಗೂ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ನೇಲೋಗಿ ದುರ್ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಮೃತರು ಜೀಪ್ ಚಾಲಕ ಯಲ್ಲಪ್ಪ ಶರಣಪ್ಪ (40), ಸಾವಿತ್ರಿ ಯಲ್ಲಪ್ಪ (35), ಶಂಕ್ರಪ್ಪ ಶರಣಪ್ಪ ಸಾಸಬಾಳ (50), ಯಮನಪ್ಪ ಚಂದ್ರಾಮ (30), ನಾಗಪ್ಪ ಹುಲೆಪ್ಪ ಚೆನ್ನಗುಂಡಿ (45), ಸಕ್ರೆಪ್ಪ ಹುಲೆಪ್ಪ ಚನ್ನಗುಂಡಿ (45), ಅಯ್ಯಮ್ಮ ಬೀರಪ್ಪ ಮುದನೂರ (55), ಅವ್ವಮ್ಮ ಶೇಖಪ್ಪ ಮುದನೂರ (35), ಚಂದವ್ವ ಸಕ್ರೆಪ್ಪ ಪೂಜಾರಿ (50), ಸಿದ್ಧವ್ವ ಕರೆಪ್ಪ ಪೂಜಾರಿ (30), ಲಕ್ಷ್ಮಿಬಾಯಿ ದೊಡ್ಡಯಲ್ಲಪ್ಪ ಗೋಗಿ (60), ಸಕ್ರೆಮ್ಮ ಶಂಕ್ರಪ್ಪ ಚನ್ನಗುಂಡಿ (35) ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಗಾಯಗೊಂಡ 6 ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಕಲಬುರ್ಗಿ ಆಸ್ಪತ್ರೆಗೆ ಸೇರಿಸಲಾಗಿದೆ.












Click it and Unblock the Notifications