ಹೆಚ್ಚುವರಿ ನೀರು ಬಿಟ್ಟು ಬೆಂಕಿಗೆ ತುಪ್ಪ ಸುರಿದ ಸರಕಾರ

ಕೆಆರ್ಎಸ್ನ ಎಲ್ಲ 24 ಕ್ರಸ್ಟ್ ಗೇಟುಗಳಿಂದ ನೀರು ಹರಿಬಿಡಲಾಗಿದೆ. ಯಾರನ್ನು ಮೆಚ್ಚಿಸಲು ಸರಕಾರ ಈ ಕ್ರಮ ತೆಗೆದುಕೊಂಡಿದೆ ಎಂಬ ಪ್ರಶ್ನೆ ಎದುರಾಗಿದೆ. ವಸ್ತುಸ್ಥಿತಿಯ ಅಧ್ಯಯನಕ್ಕೆಂದು ಕೇಂದ್ರದ ತಂಡ ಕರ್ನಾಟಕಕ್ಕೆ ಬಂದಿರುವ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಹರಿಯಬಿಟ್ಟಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಅಧ್ಯಯನಕ್ಕೆಂದು ಬಂದಿರುವ ಕೇಂದ್ರ ತಂಡವನ್ನು ಮೆಚ್ಚಿಸಲು ಈ ಕ್ರಮ ತೆಗೆದುಕೊಂಡಿದೆಯಾ ಅಥವಾ ಸುಪ್ರೀಂ ಕೋರ್ಟನ್ನು ಮೆಚ್ಚಿಸಲಾ?
ನಿರೀಕ್ಷಿಸದೇ ಇದ್ದ ಈ ವಿದ್ಯಮಾನದಿಂದ ಈ ಭಾಗದ ರೈತರು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ. ರೈತರ ಕಣ್ಣೀರು ಒರೆಸಿ ನೀರು ನಿಲ್ಲಿಸುತ್ತದೆಂದು ನಿರೀಕ್ಷಿಸಲಾಗಿದ್ದರೆ ಮತ್ತಷ್ಟು ನೀರು ಬಿಟ್ಟು ರೈತರ ಕಣ್ಣಲ್ಲಿ ರಕ್ತ ಕುದಿಯುವಂತೆ ಸರಕಾರ ಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ ನೀರಿಗೆ ಇಳಿದು ರೈತರು ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚುವರಿ ನೀರು ಬಿಟ್ಟಿದ್ದರಿಂದ 108 ಅಡಿ ಇದ್ದ ಕೆಆರ್ಎಸ್ ನೀರಿನಮಟ್ಟ 106ಕ್ಕೆ ಕುಸಿದಿದೆ.
ಕೇವಲ ಹದಿನೈದು ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೆ ಸೇತುವೆಯ ತಳಮಟ್ಟದಲ್ಲಿ ಹರಿಯುತ್ತಿದ್ದ ನೀರು ಈಗ ಸೇತುವೆಯ ಅರ್ಧಮಟ್ಟಕ್ಕೆ ಬಂದಿದೆ. ಶ್ರೀರಂಗಪಟ್ಟಣದ ಹೊರವಲಯದಲ್ಲಿರುವ ಈ ಸೇತುವೆ ಅರ್ಧ ಮುಳುಗಿರುವುದು ರೈತರ ಅನುಮಾನಕ್ಕೆ ಕಾರಣವಾಗಿದೆ. ನೀರಿನ ಪ್ರವಾಹದಲ್ಲಿ ಒಂದು ಆಟೋ ಕೊಚ್ಚಿಹೋಗಿದೆ. ಇದರಿಂದಾಗಿ ಶನಿವಾರ, ಅ.6ರಂದು 526 ವಿವಿಧ ಕನ್ನಡಪರ ಸಂಘಟನೆಗಳು ಕರೆಯಲಾಗಿರುವ ಕರ್ನಾಟಕ ಬಂದ್ ಮತ್ತಷ್ಟು ಉಗ್ರರೂಪ ಪಡೆಯುವ ಸಂಭವವಿದೆ.












Click it and Unblock the Notifications