ಈ ಬಾರಿ ಯಡಿಯೂರಪ್ಪ ನಿಖಾಲಿ: ಅನಂತ್ ಪಡೆ

ಅದಕ್ಕೂ ಮುನ್ನ.... ರಾಜ್ಯಾಧ್ಯಕ್ಷರ ನೇಮಕ ಸೇರಿದಂತೆ ಅನೇಕ ವಿಚಾರಗಳಲ್ಲಿ ವರಿಷ್ಠರು ತೋರಿದ ಅಪಾರ ಅಸಡ್ಡೆ/ ನಿಷ್ಕ್ರಿಯತೆಯಿಂದ ಬೇಸತ್ತು ಯಡಿಯೂರಪ್ಪನವರು ಸುಮಾರು 75 ಶಾಸಕರನ್ನು ಸಾಲಾಗಿ ನಿಲ್ಲಿಸಿಕೊಂಡು ಬಿಜೆಪಿಗೆ ಗುಡ್ ಬೈ ಹೇಳುತ್ತಾರೆ ಎಂಬ ಸುಳಿವು ಸಿಕ್ಕಿದ್ದೇ ತಡ ಕೊನೆ ಗಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಭಾರಿ ಕಸರತ್ತು ನಡೆಸಿತು.
ಕುದಿಯುತ್ತಿದ್ದ ಸೂರಜ ಕುಂಡದಿಂದ ಸಿದಾ ಎದ್ದು ಬಂದ ಅರುಣ್ ಜೇಟ್ಲಿಯಂತೂ ಇನ್ನಿಲ್ಲದ ಕಸರತ್ತು ನಡೆಸಿದರು. ಆದರೆ ಮನೆಯ ಹಿರಿಯ ಯಡಿಯೂರಪ್ಪ ಅವರು ಜೇಟ್ಲಿಯೊಂದಿಗಿದ್ದ ಬಾಕಿ ಸಮೇತ ಸೇಡು ತೀರಿಸಿಕೊಂಡರು. ಜೇಟ್ಲಿ ಆಟ ಏನೂ ನಡೆಯಲಿಲ್ಲ.
ಈ ಮಧ್ಯೆ, ಯಡ್ಡಿಯ ಪುರಾತನ ವಿರೊಧಿ ಪಡೆಯು ಸಮಯಸಾಧಿಸಿ, ದುಬಾಷಿ ಅನಂತ್ ಕುಮಾರ್ ಮೂಲಕ ಹಿಂದಿಯಲ್ಲಿ ಯಡಿಯೂರಪ್ಪ ವಿರುದ್ಧ ಎಷ್ಟು ಬೇಕೋ ಅಷ್ಟೂ ದೂರು ಸಲ್ಲಿಸಿತು. ಖುದ್ದು ಅನಂತ್ ಹೆಚ್ಚು ಮುತುವರ್ಜಿ ತೋರಿದರು. ಆದರೂ ಯಾಕೋ ಅಸಮಾಧಾನಗೊಳ್ಳದ ಜೇಟ್ಲಿ, ಯಡಿಯೂರಪ್ಪಜೀ ಮನದಿಂಗಿತ ಅರಿತುಕೊಳ್ಳಲು ಕೊನೆಯ ಅಸ್ತ್ರವಾಗಿ ಯಡಿಯೂರಪ್ಪ ಪಟಾಲಂಗೆ 'ಬಂದು, ನನ್ನ ನೋಡಿಕೊಂಡು ಹೀಗಿ' ಎಂದು ಆಹ್ವಾನವಿತ್ತರು.
ಹೀಗೆ ಜೇಟ್ಲಿ ಆಮಂತ್ರಣ ನೀಡಿದ್ದಾರೆ ಎಂಬ ವಿಷಯ ಗೊತ್ತಾದಾಗ ಯಡಿಯೂರಪ್ಪನವರು ತಮ್ಮ ಅತ್ಯಾಪ್ತರಾದ ಶೋಭಾ ಕರಂದ್ಲಾಜೆ ಅವರನ್ನು ಜೇಟ್ಲಿ ಉಳಿದುಕೊಂಡಿದ್ದ ಪಂಚತಾರಾ ಹೋಟೆಲಿಗಟ್ಟಿದರು. ಮತ್ತು ಯಾವುದೇ ಕಾರಣಕ್ಕೂ ತಾನಿನ್ನು ಬಿಜೆಪಿಯಲ್ಲಿ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುವಂತೆ ಶೋಭಾ ಕೈಯಲ್ಲಿ ಹೇಳಿಸಿದರು.
ಅನಂತ್ ಪಡೆ ಡಂಗುರ: ಇದರಿಂದ ಜೇಟ್ಲಿಗೆ ಒಂದಂತೂ ಸ್ಪಷ್ಟವಾಯಿತು, ಯಡಿಯೂರಪ್ಪಜೀ ಇನ್ನು ಬಿಜೆಪಿಯಿಂದ ಹೊರಕ್ಕೇ ಎಂಬುದು ಶ್ರುತಪಟ್ಟಿತು. ಆದರೆ ಅವರಾಗೇ ಹೊರಹೋಗಲೋ/ ಅಥವಾ ತಾವೇ ಹೊರದಬ್ಬುವುದೋ ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ಪಕ್ಷ ನಿರತವಾಗಿದೆ. ತಾನಾಗೇ ಯಡಿಯೂರಪ್ಪನವರು ಪಕ್ಷದಿಂದ ಉಚ್ಚಾಟಿಸಿದರೆ 'ಕೊನೆಗೂ ಭ್ರಷ್ಟ ಮಾಜಿ ಸಿಎಂನನ್ನು ಬಿಜೆಪಿ ಹೊರದಬ್ಬಿತು' ಎಂಬ ಸಂದೇಶ ರವಾನೆಯಾಗುತ್ತದೆ ಎಂಬ ದೂರಗಾಮಿ ಸದಾಶಯ ಪಕ್ಷದ್ದು.
ಆದರೆ ಪಕ್ಷಕ್ಕೆ ಈಗ ಧುತ್ತನೆ ಎದುರಾಗಿದ್ದು ಯಡಿಯೂರಪ್ಪಜೀ ಅಕ್ಕಪಕ್ಕ ಸಾಲಾಗಿ ನಿಂತಿದ್ದ ಸುಮಾರು 75 ಶಾಸಕರು. ಇನ್ನು ಶಾಸಕರ ಪಡೆಯಾಚೆಗೆ ದೃಷ್ಟಿ ಹರಿಸಿದಾಗ ವಿಧಾನಸಭೆ ಚುನಾವಣೆ ಕಾಣಿಸಿಕೊಂಡಿದೆ. ಹಾಗಾಗಿ ಏನೂ ಮಾಡಲಾಗದೆ ಕೈಕೈ ಹಿಸುಕಿಕೊಳ್ಳುವಂತಾಗಿದೆ ಬಿಜೆಪಿ ಹೈಕಮಾಂಡ್ ಸ್ಥಿತಿ. ಆದರೂ ಈ ಬಾರಿ ಯಡಿಯೂರಪ್ಪ ನಿಖಾಲಿ ಎಂದು ಅತ್ತ ಜೇಟ್ಲಿ ವಿಮಾನ ಹತ್ತುತ್ತಿದ್ದಂತೆ ಇತ್ತ ಅನಂತ್ ಪಡೆ ಬೆಂಗಳೂರಿನಲ್ಲಿ ಡಂಗುರ ಹೊಡೆಯುತ್ತಿದೆ.












Click it and Unblock the Notifications