'ಹಳೆ ಹೆಂಡ್ತಿ' ಡೈಲಾಗ್ ಬಿಟ್ಟ ಜೈಸ್ವಾಲ್ ಗೆ ಶಿಕ್ಷೆ ಭೀತಿ

'ಪತ್ನಿಯರು ಹಳತಾದಂತೆ ರಸಿಕತೆ ಕಳೆದುಕೊಳ್ಳುತ್ತಾರೆ' ಎಂಬ ಶ್ರೀಪ್ರಕಾಶ್ ಜೈಸ್ವಾಲ್ ಅವರ ಹೇಳಿಕೆ ಈಗ ವಿವಾದಕ್ಕೆ ಗುರಿಯಾಗಿದೆ. ಕಾನ್ಪುರ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ(ಅ.3) ದೂರು ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತೆ ಅನಿತಾ ದುವಾ ಅವರು ಎನ್ ಜಿಒ ಲಕ್ಷ್ಯಾ ಪರವಾಗಿ ಈ ದೂರು ದಾಖಲಿಸಿದ್ದಾರೆ. ಜೈಸ್ವಾಲ್ ವಿರುದ್ಧ ಮಾನನಷ್ಟ ಪರಿಹಾರ ಕೋರಿ, ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ನೀಡದಂತೆ ವಾಗ್ದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಜೈಸ್ವಾಲ್ ಹೇಳಿಕೆ ಇರುವ ಪತ್ರಿಕಾ ಪ್ರಕಟಣೆಗಳು, ವಿಡಿಯೋ ಸಿಡಿಗಳನ್ನು ಕೋರ್ಟಿಗೆ ಸಲ್ಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅ.8 ರಂದು ಅನಿತಾ ಅವರ ಹೇಳಿಕೆಯನ್ನು ಪಡೆಯಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಜೈಸ್ವಾಲ್ ಮೇಲಿನ ಆರೋಪ ಸಾಬೀತಾದರೆ ಗರಿಷ್ಠ 2 ವರ್ಷಗಳ ಸಜೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ 3 ತಿಂಗಳು ಶಿಕ್ಷೆ ಪಡೆಯುವ ಸಾಧ್ಯತೆಯಿದೆ.
ರಾಷ್ಟ್ರೀಯ ಮಹಿಳಾ ಆಯೋಗ, ಬಿಜೆಪಿ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಜೈಸ್ವಾಲ್ ವಿರುದ್ಧ ಗರಂ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಕೋಪಗೊಂಡಿತ್ತು.
ಜೈಸ್ವಾಲ್ ಸಮರ್ಥನೆ: ನಾನು ಹೇಳಿದ್ದು ತೀರಾ ಸಾಮಾನ್ಯವಾದ ಮಾತು. ಮದುವೆಯಾಗಿ ಕೆಲವು ವರ್ಷಗಳು ಉರುಳಿದಂತೆ ಸಂಭ್ರಮದ ಮನಸ್ಥಿತಿಗಳು ಮಸುಕಾಗುತ್ತವೆ. ನನ್ನ ಹೇಳಿಕೆಯ ಸಂದರ್ಭ ಮತ್ತು ಅರ್ಥವನ್ನು ತಿರುಚಲಾಗಿದ್ದು, ರಾಜಕೀಯ ಬಣ್ಣ ಬಳಿಯಲಾಗುತ್ತಿದೆ.
ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು 68 ವರ್ಷದ ಜೈಸ್ವಾಲ್ ಕ್ಷಮೆಯಾಚಿಸಿದ್ದರು. ಆದರೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನಂತರ ಜೈಸ್ವಾಲ್ ಸಮರ್ಥಿಸಿಕೊಂಡಿದ್ದರು.
ವಿಶ್ವ ಟಿ20 ಯಲ್ಲಿ ಪಾಕಿಸ್ತಾನವನ್ನು ಭಾರತ ಸೋಲಿಸಿದ ಸುದ್ದಿ ಕೇಳಿದ ತಕ್ಷಣ ನಾನು ಕವಿತಾ ಕಾರ್ಯಕ್ರಮ ನಿಲ್ಲಿಸಿ ಸಂಭ್ರಮಾಚರಣೆ ಕರೆ ನೀಡಿದೆ. ಈ ಸಂದರ್ಭದಲ್ಲಿ "Nayi nayi jeet aur nayi nayi shaadi, iska apna alag mahatva hota hai... jaise jaise samay beetega..jeet ki yaadein purani hoti jayegi; jaise jaise samay beet ta hai, patni purani hoti chali jati hai, vo maza nahi rehta hai." ಎಂದು ಹೇಳಿದ್ದು ನಿಜ
ಮದುವೆ ಹಳತಾದಂತೆ ಗೆಲುವೂ ಹಳತಾಗಿ ಬಿಡುತ್ತದೆ ಎಂಬ ಹೋಲಿಕೆ ನೀಡಿ ಮಾತನಾಡಿದ್ದೆ ಅಷ್ಟೆ ಎಂದು ಜೈಸ್ವಾಲ್ ಸ್ಪಷ್ಟೀಕರಣ ನೀಡಿದ್ದರು. ಈ ಹಿಂದೆ ಉತ್ತರ ಪ್ರದೇಶ ಚುನಾವಣೆ ಪ್ರಚಾರ ಸಂದರ್ಭದಲ್ಲೂ ಬಾಯಿಗೆ ಬಂದಂತೆ ಮಾತನಾಡಿ ಜೈಸ್ವಾಲ್ ವಿವಾದಕ್ಕೆ ಗುರಿಯಾಗಿದ್ದರು. ರಾಹುಲ್ ಗಾಂಧಿ ಯಾವಾಗ ಬೇಕಾದರೂ ಪ್ರಧಾನಿಯಾಗಬಹುದು ಎಂಬ ಹೇಳಿಕೆ ನೀಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು.












Click it and Unblock the Notifications