'ಕಾವೇರಿ ನಿಲ್ಲಿಸಲಿದ್ದರೆ ರಾಜ್ಯ ಹೊತ್ತಿ ಉರಿದೀತು ಎಚ್ಚರ!'

ತಡವಾಗಿಯಾದರೂ ಇದು ಕರ್ನಾಟಕದ ಜನತೆ ಸ್ವಾಗತಿಸಬೇಕಾದ ಕ್ರಮ. ಕೇಂದ್ರ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಡಿ.ಬಿ. ಸಿಂಗ್ ಅವರ ನೇತೃತ್ವದ ತಂಡ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾವೇರಿ ನೀರಿನ ಶೇಖರಣೆ ಬಗ್ಗೆ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ. ಗುರುವಾರ ತಮಿಳುನಾಡಿನಲ್ಲಿ ಅಧ್ಯಯನ ನಡೆಸಲಿದ್ದರೆ, ಶುಕ್ರವಾರ ಕರ್ನಾಟಕಕ್ಕೆ ಕೇಂದ್ರದ ತಂಡ ಆಗಮಿಸಲಿದೆ.
ಕೇಂದ್ರಕ್ಕಾಗಲಿ, ಸುಪ್ರೀಂ ಕೋರ್ಟಿಗಾಗಲಿ ಕರ್ನಾಟಕದಲ್ಲಿನ ಅಣೆಕಟ್ಟೆಗಳಲ್ಲಿ ಶೇಖರಣೆಯಾಗಿರುವ ನೀರಿನ ದಾಸ್ತಾನು ಕುರಿತಂತೆ ಸರಿಯಾದ ವಿವರಣೆ ನೀಡಿಲ್ಲ ಮತ್ತು ವಸ್ತುಸ್ಥಿತಿ ಸೂಕ್ತವಾಗಿ ವಿವರಿಸಿಲ್ಲ ಎಂಬ ಕೂಗು ಕನ್ನಡಿಗರದು. ರಾಜ್ಯದಲ್ಲಿರುವ ಬರಪರಿಸ್ಥಿತಿ ಮತ್ತು ನೀರಿನ ವಸ್ತುಸ್ಥಿತಿಯ ಚಿತ್ರಣವನ್ನು ಕೇಂದ್ರಕ್ಕೆ ಮಾಡಿಸಿದ್ದೇ ಆದಲ್ಲಿ ಕನ್ನಡಿಗರ ಹೋರಾಟದ ಅರಿವು ಆಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಗುರುವಾರ ರಾಜ್ಯದ ಮೇಲ್ಮನವಿ : ಕಾವೇರಿ ನೀರು ಬಿಡುಗಡೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮರುಪರಿಶೀಲನಾ ಅರ್ಜಿಯನ್ನು ಗುರುವಾರ ಸಲ್ಲಿಸುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಗೃಹ ಕಚೇರಿ ಕೃಷ್ಣಾದಲ್ಲಿ ಸಂಪುಟ ಸಭೆ ನಡೆಸಿದ ನಂತರ ಬುಧವಾರ ಹೇಳಿದರು. ಸರಕಾರ ಜನರ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಪ್ರತಿಭಟನಾಕಾರರು ಯಾವುದೇ ಹಿಂಸಾತ್ಮಕ ಕ್ರಿಯೆಗೆ ಇಳಿಯಬಾರದು ಎಂದು ಅವರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು.
ರಾಜ್ಯ ಸರಕಾರ ಕಾವೇರಿಗಾಗಿ ಮಂಡ್ಯ, ಮೈಸೂರು, ಚಾಮರಾಜನಗರ ರೈತರು ನಡೆಸುತ್ತಿರುವ ಹೋರಾಟಕ್ಕೆ ಪ್ರತಿಸ್ಪಂದಿಸಲಿದ್ದರೆ ಗುರುವಾರದಿಂದ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವುದಾಗಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು ಎಚ್ಚರಿಕೆ ನೀಡಿದ್ದರು. ಈಗ ಮೇಲ್ಮನವಿ ಸಲ್ಲಿಸುವುದಾಗಿ ರಾಜ್ಯ ಸರಕಾರ ಹೇಳಿದ್ದರಿಂದ ಮಾದೇಗೌಡರು ಉಪವಾಸ ಮುಂದೂಡುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಕರವೇ ಬೃಹತ್ ಸಭೆ : ಕೇಂದ್ರದ ಕಾವೇರಿ ನೀತಿ ವಿರೋಧಿಸಿ ಅ.6ರಂದು ಕರ್ನಾಟಕ ಬಂದ್ ಕರೆಯಲಾಗಿದ್ದರೆ, ಅ.5ರಂದು ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಹೇಳಿದ್ದಾರೆ. ಮಂಡ್ಯದಲ್ಲಿ ಕಾವೇರಿಗಾಗಿ ರೈತರು ಸಾಯುತ್ತಿದ್ದರೂ ಬೆಂಗಳೂರಿನ ಜನತೆ ಇನ್ನೂ ನಿದ್ದೆಯಲ್ಲಿ ಮಲಗಿದ್ದಾರೆ. ಸತ್ತಂತಿಹ ಜನರನ್ನು ಬಡಿದೆಬ್ಬಿಸುವ ಉದ್ದೇಶದಿಂದ ಈ ಬೃಹತ್ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಶೇ.80ರಷ್ಟು ಜನರು ಕಾವೇರಿ ನೀರನ್ನು ಕುಡಿಯುತ್ತಿದ್ದಾರೆ. ಮಂಡ್ಯದಲ್ಲಿ ಕಾವೇರಿಗಾಗಿ ರೈತರು ಪ್ರಾಣತ್ಯಾಗಕ್ಕೂ ಸಿದ್ಧರಾಗಿದ್ದರೆ, ಇಲ್ಲಿ ಬೆಂಗಳೂರಿನಲ್ಲಿ ಹೋರಾಟ ತೀವ್ರಗೊಳ್ಳದಿರುವುದು ಅಚ್ಚರಿಯ ಸಂಗತಿ ಎಂದು ನಾರಾಯಣ ಗೌಡ ವಿಷಾದ ವ್ಯಕ್ತಪಡಿಸಿದರು. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸುಮಾರು 25 ಸಾವಿರ ಜನರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಮಾಯಿಸಲಿದ್ದು, ಅಲ್ಲಿಂದ ರಾಜ್ಯಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಬೆಂಗಳೂರಿನ ಕನ್ನಡಿಗರಿಗೆ ಮತ್ತು ಕನ್ನಡೇತರರಿಗೆ ಕನ್ನಡದ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ಈ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಅವರು ಮನವಿ ಮಾಡಿದರು.
ಹೋರಾಟ ಇನ್ನೂ ತೀವ್ರ : ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಶುಕ್ರವಾರ ಆಗಮಿಸುತ್ತಿದ್ದರೂ, ಮಂಡ್ಯದಲ್ಲಿ ಕಾವೇರಿಗಾಗಿ ಹೋರಾಟವನ್ನು ಇನ್ನೂ ತೀವ್ರಗೊಳಿಸಲು ಕಾವೇರಿ ಹಿತರಕ್ಷಣಾ ಸಮಿತಿಯ ಸದಸ್ಯರು ನಿರ್ಧರಿಸಿದ್ದಾರೆ. ಮೊದಲು ಕೆಆರ್ಎಸ್ನಿಂದ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು. ನಂತರವೇ, ಕೇಂದ್ರದ ತಂಡದಿಂದ ಅಧ್ಯಯನ ನಡೆಸಬೇಕು ಎಂದು ರೈತರ ಸಮೂಹ ಹೇಳಿದೆ. ನಾರಾಯಣ ಗೌಡರು ಕೂಡ ಇದೇ ಮಾತನ್ನು ಹೇಳಿದ್ದು, ತಕ್ಷಣ ನೀರು ನಿಲ್ಲಿಸದಿದ್ದರೆ, ಉಪವಾಸ ಕುಳಿತುಕೊಳ್ಳಲಿರುವ ಮಾದೇಗೌಡರ ಆರೋಗ್ಯ ಏರುಪೇರಾದರೆ ಇಡೀ ರಾಜ್ಯವೇ ಹೊತ್ತಿ ಉರಿಯಲಿದೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications