ಜೇಟ್ಲಿ ಬೆಂಗಳೂರಿಗೆ, ಯಡಿಯೂರಪ್ಪ ಶಿವಮೊಗ್ಗಕ್ಕೆ

ಮಹಾತ್ಮ ಗಾಂಧೀಜಿ ಹುಟ್ಟುಹಬ್ಬದ ದಿನ ಬೆಂಗಳೂರಿಗೆ ಬಿಜೆಪಿ ವರಿಷ್ಠರು ಬರುವ ಸೂಚನೆ ಸಿಗುತ್ತಿದ್ದಂತೆ ಇಂದೇ ರಾತ್ರಿ ಶಿವಮೊಗ್ಗ ಏಕ್ಸ್ ಪ್ರೆಸ್ ರೈಲು ಹತ್ತಲು ಬಿಎಸ್ ವೈ ರೆಡಿಯಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿದೆ.
ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಹೇಳಿ ಇಲ್ಲೇ ಬೆಂಗಳೂರಿನ ಮನೆಯಲ್ಲೇ ಕೂತು ಕ್ರಿಕೆಟ್ ಮ್ಯಾಚ್ ನೋಡಿದರೆ ನಾವು ಜವಾಬ್ದಾರಲ್ಲ.
ಅರುಣ್ ಜೇಟ್ಲಿ ಹಾಗೂ ಧರ್ಮೇಂದ್ರ ಪ್ರಧಾನ್ ಅವರು ಮಂಗಳವಾರ(ಅ.2) ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಇದೇ ವೇಳೆ ಗಾಯಗೊಂಡಿರುವ ಹಳೆ ಹುಲಿ ಯಡಿಯೂರಪ್ಪ ಅವರ ಗಾಯಕ್ಕೆ ಮುಲಾಮು ಹಚ್ಚಲು ಜೇಟ್ಲಿ ಸಿದ್ಧರಾಗಿ ಬರುತ್ತಿದ್ದಾರೆ ಎಂಬ ಸುದ್ದಿ ಇದೆ.
ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಹಾಗೂ ಹೈಕಮಾಂಡ್ ವಿರುದ್ಧ ಸೆಡ್ಡು ಹೊಡೆದಾಗೆಲ್ಲಾ ಅರುಣ್ ಜೇಟ್ಲಿ ಅವರು ನಿತಿನ್ ಗಡ್ಕರಿ ಪರವಾಗಿ ಬಂದು ಯಡಿಯೂರಪ್ಪ ಅವರ ಬೆನ್ನು ಸವರಿ ಸಮಾಧಾನ ಮಾಡಿ ಹೋಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಯಡಿಯೂರಪ್ಪ ಭೇಟಿ ಅನುಮಾನ: ಸದ್ಯದ ಪರಿಸ್ಥಿತಿ ನೋಡಿದರೆ, ಜೇಟ್ಲಿ ಅವರನ್ನು ಭೇಟಿ ಮಾಡುವುದು ಕಷ್ಟ. ಅಲ್ಲದೇ ಇನ್ಮುಂದೆ ಯಾವುದೇ ಬಿಜೆಪಿ ವರಿಷ್ಠರೊಡನೆ ಮಾತುಕತೆ ನಡೆಸುವುದೂ ಕಷ್ಟ ಎಂದು ಬಿಎಸ್ ವೈ ಆಪ್ತರು ಹೇಳಿದ್ದಾರೆ.
ಅದರೆ, ಬಿಜೆಪಿಗೆ ಗುಡ್ ಬೈ ಹೇಳಲು ಸಿದ್ಧರಾಗಿರುವ ಯಡಿಯೂರಪ್ಪ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡು ಇನ್ನಷ್ಟು ಅವರಿಂದ ಲಾಭ ಪಡೆಯುವ ಹಂಚಿಕೆಯಲ್ಲಿ ಕೇಂದ್ರದ ನಾಯಕರು ಸಜ್ಜಾಗಿ ಬರುತ್ತಿದ್ದಾರೆ.
ಅರುಣ್ ಜೇಟ್ಲಿ ಅವರನ್ನು ಬೆಂಗಳೂರಿನಲ್ಲೇ ಭೇಟಿ ಮಾಡಬೇಕಲೇ ಬೇಕೆಂಬ ನಿಯಮವಿಲ್ಲ. ಅವರ ಬಗ್ಗೆ ನಮ್ಮ ನಾಯಕರಿಗೆ ತುಂಬಾ ಗೌರವವಿದೆ. ಮಾತನಾಡಲೇಬೇಕೆಂದರೆ ದೆಹಲಿಗೆ ಕರೆಸಿಕೊಳ್ಳುತ್ತಾರೆ ಎಂದು ಯಡಿಯೂರಪ್ಪ ಆಪ್ತ ವಲಯ ಹೇಳಿದೆ. ಒಟ್ಟಾರೆ. ನಾಳೆ ಜೇಟ್ಲಿ ಜೊತೆ ಯಡಿಯೂರಪ್ಪ ಭೇಟಿ ಆಗದಿದ್ದರೆ, ಬಿಜೆಪಿಯಿಂದ ಯಡಿಯೂರಪ್ಪ ಒಂದು ಕಾಲು ಹೊರಗಿಟ್ಟಿರುವುದು ಖಾತ್ರಿಯಾಗಲಿದೆ.












Click it and Unblock the Notifications