ಯಡಿಯೂರಪ್ಪ ಪಕ್ಷ ಬಿಡಲ್ಲ, ಈಶ್ವರಪ್ಪ ಸೀಟು ಬೀಡಲ್ಲ

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಓರ್ವ ಚತುರ ರಾಜಕಾರಣಿಯಾಗಿದ್ದು, ಸಂದರ್ಭಕ್ಕೆ ತಕ್ಕಂತೆ ರಾಜಕೀಯ ಪಟ್ಟುಗಳನ್ನು ಬಳಸುತ್ತಿರುತ್ತಾರೆ.
ಅವರು ಬಿಜೆಪಿ ಪಕ್ಷ ತೊರೆಯುತ್ತಾರೆಂದು ಯಾರಾದರೂ ತಿಳಿದಿದ್ದರೆ ಅದು ತಪ್ಪು ಅಭಿಪ್ರಾಯ. ಅವರು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಅವರೊಬ್ಬ ಪ್ರಭಾವಿ ರಾಜಕಾರಣಿಯಾಗಿದ್ದು, ಪಕ್ಷವನ್ನು ಬೆಳೆಸಲು ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಅವರ ಗುರಿಯಾಗಿದೆ. ಅದಕ್ಕಾಗಿ ಅವರು ಶ್ರಮಿಸುತ್ತಿದ್ದು, ಆಗಾಗ ಆಂತರಿಕ ಸಂಘರ್ಷಗಳು ನಡೆಯುತ್ತಿರುತ್ತಿದೆ ಎಂದು ರವಿ ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷರಾಗಲು ಯಾರು ಬೇಕಾದರೂ ಅಪೇಕ್ಷೆ ಪಡಬಹುದು. ಬಿಜೆಪಿಯಲ್ಲಿ ಸಂಸದೀಯ ಸಮಿತಿ ಇದ್ದು, ಯಾರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಕುರಿತು ಅನುಭವದ ಆಧಾರದಲ್ಲಿ ಪಕ್ಷದ ವರಿಷ್ಠರು ಸೇರಿ ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆ. ಈ ರೀತಿ ವ್ಯವಸ್ಥೆ ಬಿಜೆಪಿಯಲ್ಲಿ ಮಾತ್ರ ಸಾಧ್ಯ.
ಈಶ್ವರಪ್ಪ ಸ್ಥಾನ ಭದ್ರ: ಡಿಸೆಂಬರ್ವರೆಗೆ ಈಶ್ವರಪ್ಪನವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದು ನಂತರದ ದಿನಗಳಲ್ಲಿ ಇತರೆ ಆಯ್ಕೆ ಕುರಿತು ಚರ್ಚಿಸಲಾಗುವುದು ಎಂದರು. ಬಿಜೆಪಿಯಲ್ಲೂ ಗೊಂದಲ ಇರುವುದು ನಿಜ. ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಗೊಂದಲವಿರುವುದು ಸಾಮಾನ್ಯ ಸಂಗತಿ. ಆದರೆ ಭಿನ್ನಮತವಾಗಲಿ, ಬಣವಾಗಲಿ ಪಕ್ಷದಲ್ಲಿಲ್ಲ. ಇಲ್ಲಿರುವುದು ಕೇವಲ ಅಭಿಪ್ರಾಯ ಬೇಧ ಅಷ್ಟೇ ಎಂದರು.
ಕೇವಲ ಬಿಜೆಪಿಗೆ ಸೀಮಿತವಲ್ಲ. ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳಲ್ಲೂ ಸಾಕಷ್ಟು ಗೊಂದಲಗಳಿದೆ. ಒಟ್ಟಾರೆಯಾಗಿ ರಾಜಕೀಯದಲ್ಲೇ ಗೊಂದಲವಿದೆ ಎಂದು ನಗೆಯಾಡಿದರು.
ನಕ್ಸಲರು ಶರಣಾಗಬೇಕಿತ್ತು: ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು ನಾವು ಅವಕಾಶ ನೀಡಿದ್ದೆವು. ಅದರೆ, ನಕ್ಸಲರು ಶರಣಾಗುತ್ತೇವೆಂದು ಹೇಳಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ವಿಧಿ ಇಲ್ಲದೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಯುತ್ತದೆ.
ವಿದೇಶಿ ಶಕ್ತಿಗಳ ಜತೆ ಕೈ ಜೋಡಿಸಿ ದೇಶದ್ರೋಹಿ ಕೆಲಸ ಮಾಡುತ್ತಿರುವ ನಕ್ಸಲರು ರಾಷ್ಟ್ರೀಯ ವಾಹಿನಿಗೆ ಬರಬೇಕು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಬ್ಯಾಲೆಟ್ ಹಿಡಿದು ಹೋರಾಟ ಮಾಡುತ್ತಾರೆ. ಇಲ್ಲದವರು ಬುಲೆಟ್ ಮೂಲಕ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜನರ ಬೆಂಬಲ ಇರುವವರು ಜನರ ನಡುವೆ ಹೋರಾಟ ನಡೆಸುತ್ತಾರೆ. ಜನ ಬೆಂಬಲ ಇಲ್ಲದವರು ಶಸ್ತ್ರಾಸ್ತ್ರಗಳ ಮೊರೆ ಹೋಗುತ್ತಾರೆ. ನಕ್ಸಲರು ಜನಬೆಂಬಲವಿಲ್ಲದವರಾಗಿದ್ದು, ಶಸ್ತ್ರಗಳಿಂದಲೇ ಅವರು ಉತ್ತರ ಕೊಡುವುದಾದರೆ ಅವರನ್ನು ಮಟ್ಟ ಹಾಕಲು ಸರ್ಕಾರ ಎಲ್ಲ ರೀತಿಯಲ್ಲೂ ಸಿದ್ಧವಿದೆ. ಜನರಲ್ಲಿ ಭಯದ ವಾತಾವರಣ ಉಂಟು ಮಾಡಿ ಸಂವಿಧಾನಕ್ಕೆ ಸವಾಲು ಹಾಕುವವರ ಬಗ್ಗೆ ಕರುಣೆ ತೋರಿಸಲು ಸಾಧ್ಯವಿಲ್ಲ ಎಂದು ರವಿ ಹೇಳಿದರು.












Click it and Unblock the Notifications