ದ್ವೇಷದಿಂದ ಹಾವು ಕಂಡಕಂಡವರಿಗೆ ಕಚ್ಚುತ್ತಿದೆಯಂತೆ!

ಈ ಎಲ್ಲ ಪ್ರಶ್ನೆಗಳಿಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ, ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೀನಕೇರಾ ಎಂಬ ಗ್ರಾಮದಲ್ಲಿ ದಲಿತ ಕೇರಿಯ 25ಕ್ಕೂ ಹೆಚ್ಚು ಜನರು ಹಾವಿನ ಕಡಿತಕ್ಕೊಳಗಾಗಿದ್ದಾರೆ. ಹಾವು ನಾಗರವಾವಾ ಅಥವಾ ಕೆರೆ ಹಾವಾ? ಹಾವು ದಲಿತರ ಕೇರಿಯಲ್ಲಿ ಜನರಿಗೇ ಏಕೆ ಕಚ್ಚುತ್ತಿದೆ? ಹಾವು ಯಾರ ಕಣ್ಣಿಗೂ ಏಕೆ ಬಿದ್ದಿಲ್ಲ? ಎಂಬ ಪ್ರಶ್ನೆಗಳಿಗೆ ಕೂಡ ಉತ್ತರ ದಕ್ಕಿಲ್ಲ.
ಒಟ್ಟಿನಲ್ಲಿ, ಜನರು ಹಾವಿನ ಕಡಿತಕ್ಕೊಳಗಾಗುತ್ತಿದ್ದಾರೆ ಎಂಬ ಸುದ್ದಿ ಜ್ವರದಂತೆ ಹಬ್ಬುತ್ತಿದೆ. ಮೀನಕೇರಾ ಗ್ರಾಮದ ಪಕ್ಕದಲ್ಲಿರುವ ಚಾಂಗಲೇರಾ ಎಂಬ ಹಳ್ಳಿಯಲ್ಲಿ ದೊರೆಯುತ್ತಿರುವ ಮದ್ದು ಸೇವಿಸಿ ಇವರೆಲ್ಲ ಜೀವ ಉಳಿಸಿಕೊಂಡಿದ್ದಾರೆ. ಈ ವಿದ್ಯಮಾನದಿಂದಾಗಿ ಗ್ರಾಮದ ಜನರೆಲ್ಲ ರಾತ್ರಿ ನಿದ್ದೆಯಿಲ್ಲದೆ ಕಾಲ ಕಳೆಯುವಂತಾಗಿದೆ.
ಇದು ಹಾವಿನ ಕಡಿತವಲ್ಲ, ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದೂ ಕೆಲವರು ಹೇಳುತ್ತಿದ್ದಾರೆ. ಆದರೆ, ಕಡಿಸಿಕೊಂಡವರು ಮಾತ್ರ ಈ ಮಾತನ್ನು ಒಪ್ಪಲು ತಯಾರಿಲ್ಲ. ಹಿಂದೆ ಮಾಡಿದ ತಪ್ಪಿಗಾಗಿ ಹಾವುಗಳು ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿವೆ ಎಂದು ಬಲವಾಗಿ ನಂಬಿದ್ದಾರೆ. ರಾತ್ರಿ ಸಮಯದಲ್ಲಿ ಮಲಗಲು ಮತ್ತು ಹೊಲಗದ್ದೆಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ.
ಇದಕ್ಕೆ ಕಾರಣವೇನು? : ಗ್ರಾಮಸ್ಥರ ಪ್ರಕಾರ, ಈಗಿರುವ ದಲಿತ ಕೇರಿಯಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರ ಇದ್ದ ಸ್ಥಳದಲ್ಲಿ ಹಿಂದೆ ನಾಗರಕಟ್ಟೆ ಮತ್ತು ನಂದಿಮೂರ್ತಿ ಇತ್ತು. ಈಗಲೂ ನಾಗರಕಟ್ಟೆ ಇದ್ದರೂ ಅದನ್ನು ನಿರ್ಲಕ್ಷಿಸಿದ್ದರಿಂದ ಪರಿಣಾಮ ಈ ಕೇರಿಯ ಜನರು ಎದುರಿಸಬೇಕಾಗುತ್ತಿದೆ ಎಂದು ಹೇಳುತ್ತಿದ್ದಾರೆ. ನಾಗರಕಟ್ಟೆಯನ್ನು ಸಂರಕ್ಷಿಸಿ ಮತ್ತೆ ನಾಗರ ಹಾವಿನ ಪೂಜೆ ಕೈಗೊಂಡರೆ ಮುಂದೆ ನಡೆಯುವ ಅನಾಹುತದಿಂದ ತಪ್ಪಿಸಿಕೊಳ್ಳಬಹುದು ಎಂದು ಗ್ರಾಮದ ಶಂಕ್ರಪ್ಪ ಅವರು ತಿಳಿಸಿದ್ದಾರೆ.
ಇದೆಲ್ಲದರ ಹಿಂದಿನ ಮರ್ಮವನ್ನು ತಿಳಿಯಲು ಪೊಲೀಸರು, ಮನಶ್ಶಾಸ್ತ್ರಜ್ಞರು, ವೈದ್ಯರು, ಉರಗತಜ್ಞರು ಈ ಗ್ರಾಮಕ್ಕೆ ತೆರಳಿ ಸತ್ಯವನ್ನು ತಿಳಿದುಕೊಳ್ಳಬೇಕಾಗಿದೆ. ಹಾಗೆಯೆ, ಗ್ರಾಮಸ್ಥರಿಗೆ ಧೈರ್ಯವನ್ನು ತುಂಬುವ ಕಾರ್ಯ ನಡೆಯಬೇಕಾಗಿದೆ. ಇದರ ಜೊತೆಗೆ, ಗ್ರಾಮದ ಧೈರ್ಯವಂತ, ವಿದ್ಯಾವಂತ ಯುವಕರು ಮುಂದೆಬಂದು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.












Click it and Unblock the Notifications