ಮಂಗಳೂರು ದುಬೈ ಮಾರ್ಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ
ದುಬೈ, ಸೆ.24: ಮಂಗಳೂರು-ದುಬೈ ವಿಮಾನಯಾನ ಮಾರ್ಗವನ್ನು ಕೇಂದ್ರೀಯ ಮಟ್ಟದಲ್ಲಿ ಅನುಮೋದನೆಗೊಳಿಸಿ ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವನ್ನಾಗಿ ಮಾರ್ಪಡಿಸುವುದಾಗಿ ಕೇಂದ್ರ ಸಚಿವರು ಅಧಿಕೃತವಾಗಿ ಘೋಷಿಸಿದ್ದಾರೆ.

ಇದು ದುಬೈನಲ್ಲಿ ನೆಲೆಸಿರುವ ಮಂಗಳೂರು ಜನತೆಯ ಹಲವು ದಿನಗಳ ಕನಸಾಗಿತ್ತು. ಕೊಲ್ಲಿ ನಾಡಿನ ಕನ್ನಡ ಸಂಘಟನೆಗಳ ಅವಿರತ ಮನವಿಗೆ ಸ್ಪಂದಿಸಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಅವರ ಕೋರಿಕೆಯನ್ನು ಭಾರತ ವಿಮಾನ ಯಾನ ಸಚಿವ ಅಜಿತ್ ಸಿಂಗ್ ಮಾನ್ಯಗೊಳಿಸಿದ್ದಾರೆ.
ಈ ಬಗ್ಗೆ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಅವರು ಕೊಲ್ಲಿ ರಾಷ್ಟ್ರದ ಅನಿವಾಸಿ ಕನ್ನಡಿಗರಿಗೆ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ Protector of Emigrants (POE) ಆಪೀಸ್ ನ್ನು ಹಾಗೂ ಮಂಗಳೂರು ವಿಮಾನ ನಿಲ್ದಾಣ ಕಚೇರಿಯನ್ನು ಉನ್ನತ ಮಟ್ಟಕ್ಕೇರಿಸುವ ಸೂಚನೆಯಾಗಿ ಅಧಿಕಾರಿಗಳು, ತಂತ್ರಜ್ಞಾನ ವ್ಯವಸ್ಥೆಯನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ನೆರವೇರಿಸಲಿದೆ ಎಂದು ಅಬು ಧಾಬಿಯ ಸಂಘಟಕ ಸರ್ವೋತ್ತಮ ಶೆಟ್ಟಿ ಗಲ್ಪ ಮಾಹಿತಿ ನೀಡಿದ್ದಾರೆ.
ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆಯವರು ಏಪ್ರಿಲ್ 25ರಂದು ಈ ಬಗ್ಗೆ ಕೇಂದ್ರ ವಿಮಾನ ಯಾನ ಸಚಿವ ಅಜಿತ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಪತ್ರದ ಪರಿಶೀಲನೆಯ ಫಲವಾಗಿ ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂತರ್ರಾಷ್ಟ್ರೀಯ ಮಟ್ಟದ ಮನ್ನಣೆ ದೊರಕಿದೆ ಎಂದು ಅಜಿತ್ ಸಿಂಗ್ ತಿಳಿಸಿದ್ದಾರೆ.
ಭಾರತ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಹಾರಾಟ ನಡೆಸುವ ಎಲ್ಲಾ ಸರಕಾರಿ ಮತ್ತು ಖಾಸಾಗಿ ವಿಮಾನಗಳು ಮಂಗಳೂರಿನ ಸುಪರ್ದಿಗೆ ಬರಲಿದೆ. ಇದರಲ್ಲಿ ಜೆಟ್ ಏರ್ ವೇಸ್ ಈ ಹಿಂದೆಯೇ ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಸಂಪರ್ಕ ಹೊಂದಿಕೊಳ್ಳಲು ಕೇಂದ್ರವನ್ನು ಕೇಳಿಕೊಂಡಿದೆ. ಅದು ಈಗ ಪರಿಶೀಲನೆಯಲ್ಲಿದೆ ಎಂದಿರುವ ಅಜಿತ್ ಸಿಂಗ್, ಕಿಂಗ್ ಫಿಶರ್ ವಿಮಾನ ಸಂಸ್ಥೆ ಇದುವರೆಗೆ ಅಂತರ್ರಾಷ್ಟ್ರೀಯ ಹಾರಾಟದ ಬಗ್ಗೆ ಮನವಿ ಸಲ್ಲಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಲವು ವರ್ಷಗಳಿಂದ ಕೊಲ್ಲಿ ನಾಡಿನ ಕನ್ನಡಿಗರು ಅಪೇಕ್ಷಿಸಿದ್ದ ಸೌಲಭ್ಯ ಇದೀಗ ಒಲಿದು ಬಂದಿದೆ. ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಮತ್ತು ಕೊಲ್ಲಿ ನಾಡಿನ ಕನ್ನಡ ಸಂಘಟನೆ ಪದಾಧಿಕಾರಿಗಳ ಅವಿರತ ಶ್ರಮಕ್ಕೆ ಸಂದ ಮನ್ನಣೆ ಇದಾಗಿದೆ.












Click it and Unblock the Notifications