ಒಕ್ಕಲಿಗ ಸಿಎಂಗಳೇ ಗ್ರೇಟ್ : ನಂಜಾವಧೂತ ಸ್ವಾಮೀಜಿ

ಒಕ್ಕಲಿಗರು ಅಧಿಕಾರಕ್ಕೆ ಬಂದಾಗಲೆಲ್ಲ ಕಿರುಕುಳ, ತುಳಿತ ತಪ್ಪಿಲ್ಲ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಸದಾನಂದ ಗೌಡರವರೆಗೂ ಇದು ನಡೆದುಕೊಂಡು ಬಂದಿದೆ. ಪ್ರಮಾಣಿಕ ರಾಜಕಾರಣಿಗಳನ್ನು ಅನಗತ್ಯವಾಗಿ ಪಿತೂರಿ ನಡೆಸಿ ಕೆಳಗಿಳಿಸಲಾಯಿತು. ಇಂಥಹದರ ವಿರುದ್ಧ ಹೋರಾಟ ನಡೆಸಬೇಕಾದ್ದು ಎಲ್ಲಾ ಒಕ್ಕಲಿಗರ ಕರ್ತವ್ಯ ಎಂದು ಸ್ವಾಮೀಜಿ ಹೇಳಿದರು.
ನಾಡು ಕಟ್ಟುವ ಕಾರ್ಯ ಒಕ್ಕಲಿಗರಲ್ಲದೆ ಬೇರಾರಿಂದಲೂ ಸಾಧ್ಯವಿಲ್ಲ. ನಮ್ಮಲ್ಲಿರುವ ಒಗ್ಗಟ್ಟು ಒಡೆಯುವ ಕಾರ್ಯಕ್ಕೆ ಒಕ್ಕಲಿಗರು ಸೊಪ್ಪು ಹಾಕಬಾರದು. ಒಕ್ಕಲಿಗರು ಎಲ್ಲಾ ವಿಚಾರದಲ್ಲೂ ಹೃದಯ ವೈಶಾಲ್ಯತೆ ತೋರುವುದಕ್ಕಿಂತ ಸ್ವಾಭಿಮಾನ ಮತ್ತು ಆತ್ಮಗೌರವಕ್ಕೆ ಪೆಟ್ಟು ಬಿದ್ದಾಗ ಹೋರಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು.
ಒಕ್ಕಲಿಗರು ನಾಡು ಹೆಮ್ಮೆಪಡುವಂಥ ಸೌಧಗಳನ್ನು ನಿರ್ಮಿಸಿದರು. ಕೆಂಗಲ್ ಹನುಮಂತಯ್ಯ ಅವರು ನಿರ್ಮಿಸಿದ ವಿಧಾನಸೌಧ, ಎಸ್ ಎಂ ಕೃಷ್ಣ ಕಾಲದ ವಿಕಾಸ ಸೌಧ ಹಾಗೂ ಉದ್ಯೋಗ ಸೌಧ ನಿರ್ಮಾಣಗೊಂಡಿತು. ಈಗ ಪೂರ್ಣಗೊಳ್ಳುತ್ತಿರುವ ಸುವರ್ಣಸೌಧ ಕುಮಾರಸ್ವಾಮಿ ಅವರ ಅಧಿಕಾರದಲ್ಲಿದ್ದಾಗ, ಆರಂಭಿಸಲಾಗಿತ್ತು.
ಬೆಂಗಳೂರಿಗೆ ಅಭಿವೃದ್ಧಿಗೆ ನೀಲಿ ನಕ್ಷೆ ಹಾಕಿಕೊಟ್ಟವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಎಂದು ವಿವರಿಸಿದರು. ಎಸ್ ಎಂ ಕೃಷ್ಣ ಅವರು ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಕೀರ್ತಿ ಬೆಳಗಿಸಿದ್ದಾರೆ. ಅದರೆ, ಒಕ್ಕಲಿಗರು ಅಧಿಕಾರ ಪೂರ್ಣಗೊಳಿಸಲು ಬಿಡದೆ ಷಡ್ಯಂತ್ರ ಹೂಡಿ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿ ಕೆಲವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದರು.
ರೈತರು ಸಂಕಷ್ಟದಲ್ಲಿ ಸಿಲುಕಿದ್ದಾಗ ರೈತರ ಸಾಲ ಮನ್ನಾ ಮಾಡುವಂತಹ ಧೈರ್ಯ ತೋರಿದವರು ಒಕ್ಕಲಿಗ ರಾಜಕೀಯ ನಾಯಕರು. ರಾಜ್ಯದಲ್ಲಿ ಇಂದು ಕೂಡ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರೈತರ ರಕ್ಷಣೆಗೆ ಬರುವುದು ಒಕ್ಕಲಿಗ ರಾಜಕಾರಣಿಗಳಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಒಕ್ಕಲಿಗರಾದ ಸದಾನಂದ ಗೌಡರನ್ನು ಅವಮಾನಕರ ರೀತಿಯಲ್ಲಿ ಕೆಳಗಿಳಿಸಿದ್ದನ್ನು ಸಹಿಸಲು ಸಾಧ್ಯವೇ ಇಲ್ಲ. ಒಕ್ಕಲಿಗರು ತಿರುಗಿಬಿದ್ದರೆ ಯಾರೂ ಉಳಿಯಲು ಸಾಧ್ಯವಿಲ್ಲ
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಎಂ.ಕೆ. ನಲ್ಲೂರು ಪ್ರಸಾದ್, ಗೌಡಾಸ್ ಯುವ ಕೂಟದ ಸಂಸ್ಥಾಪಕ ಅಧ್ಯಕ್ಷ ಜಿ. ಕೃಷ್ಣೇಗೌಡ, ಅಧ್ಯಕ್ಷ ಸಿದ್ದೇಗೌಡ, ಸಂಸ್ಥಾಪಕ ಕಾರ್ಯದರ್ಶಿ ಬಿ.ಕೃಷ್ಣೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ನೀಲಕಂಠ ಗೌಡ ಸೇರಿದಂತೆ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications