ಯಡಿಯೂರಪ್ಪ ಸಂಧಾನ ಸಫಲ, ಸಿರಿಗೆರೆ ಶ್ರೀ ನಿವೃತ್ತಿ ಹಿಂದಕ್ಕೆ?

ಆದರೆ, ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ ಮುಂದಿನ ಉತ್ತರಾಧಿಕಾರಿಗಳನ್ನು ನೇಮಿಸುವ ತನಕ ಹಂಗಾಮಿಯಾಗಿ ಪೀಠಾಧ್ಯಕ್ಷರಾಗಿ ಇರಲು ಒಪ್ಪಿಗೆ ಸೂಚಿಸಿದ್ದಾರೆ. ಮಠದ ಸಂಪ್ರದಾಯದಂತೆ ಎಲ್ಲವೂ ನಡೆದಿದೆ. ಇಷ್ಟಕ್ಕೂ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ ನಿರ್ಧಾರಕ್ಕೆ ಬದ್ಧರಾದರೆ ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಸಾಣೆಹಳ್ಳಿ ಶ್ರೀ ಮಠದ ಶ್ರೀ ಪಂಡಿತಾರಾಧ್ಯರು ಸ್ಪಷ್ಟಪಡಿಸಿದ್ದಾರೆ.
ಚಿತ್ರದುರ್ಗದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪರಂಪರೆಯ 21ನೇ ಜಗದ್ಗುರುಗಳಾದ ಶ್ರೀಮದುಜ್ಜಯನಿ ಸದ್ಧರ್ಮ ಸಿಂಹಾಸನಧೀಶ ತರಳಬಾಳು ಜಗದ್ಗುರು ಶ್ರೀಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಠದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸೋಮವಾರ ಮಧ್ಯಾಹ್ನ ನಿವೃತ್ತಿ ಘೋಷಿಸಿದ್ದರು.
ಈ ಸುದ್ದಿ ತಿಳಿಯುತ್ತಿದ್ದಂತೆ ಸಮಾರಂಭದಲ್ಲಿ ನೆರೆದಿದ್ದ ಸಾವಿರಾರು ಮಂದಿ ಭಾವೋದ್ವೇಗಕ್ಕೆ ಒಳಗಾಗಿ, ಸ್ವಾಮೀಜಿ ಅವರು ನಿವೃತ್ತಿ ನಿರ್ಧಾರ ಹಿಂಪಡೆಯಲಿ ಎಂದು ಆಗ್ರಹಿಸತೊಡಗಿದರು.
ನಂತರ ಪ್ರಮುಖ ಲಿಂಗಾಯತ ನಾಯಕರಾದ ಯಡಿಯೂರಪ್ಪ ಅವರು ಕೂಡಾ ಶಿವಾಚಾರ್ಯ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿ ಸಾರ್ವಜನಿಕ ಹಿತಾಸಕ್ತಿಯನ್ನು ಮನಗಂಡು ನಿವೃತ್ತಿ ಹಿಂಪಡೆಯುವಂತೆ ವಿನಂತಿಸಿದ್ದರು.
ಜನರ ಪ್ರೀತ್ಯಾದರ ಹಾಗೂ ಯಡಿಯೂರಪ್ಪ ಅವರ ವಿನಯಪೂರ್ವಕ ಮನವಿಗೆ ಓಗೊಟ್ಟು ಕಣ್ಣೀರು ಹಾಕಿದ ಶಿವಾಚಾರ್ಯ ಸ್ವಾಮೀಜಿಗಳು ತಾವು ನಿವೃತ್ತಿ ಹಿಂಪಡೆಡೆಯುವ ಬಗ್ಗೆ ಜನರೇ ನಿರ್ಧರಿಸಿದಲಿ ಹೇಳಿದ್ದಾರೆ. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಶೆಟ್ಟರ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದರು.
ಬರದ ನಾಡಿನ ಅಮೃತ ಚಿಲುಮೆ : ಮಾತೃಭಾಷೆ ಕನ್ನಡ, ಸಂಸ್ಕೃತ, ಇಂಗ್ಲೀಷ್, ಜರ್ಮನ್ ಭಾಷೆಗಳಲ್ಲಿ ಡಾ. ಶಿವಾಚಾರ್ಯ ಸ್ವಾಮೀಜಿಗಳು ಅಪಾರ ಪಾಂಡಿತ್ಯ ಹೊಂದಿದ್ದಾರೆ. ಪಾಣಿನಿ ಅಷ್ಟಾಧ್ಯಾಯಿ ವ್ಯಾಕರಣವನ್ನು ತಂತ್ರಾಂಶ ಭಾಷೆಗೆ ತಂದು ತಮ್ಮ ಕಂಪ್ಯೂಟರ್ ಜ್ಞಾನದ ಪರಿಚಯವನ್ನು ಜಗತ್ತಿಗೆ ನೀಡಿದ್ದಾರೆ.
ಬೃಹನ್ಮಠದಲ್ಲಿ ಸಾಕ್ಷಿ. ಸದ್ಧರ್ಮ ನ್ಯಾಯಪೀಠ, ಕೃಷಿ, ಕಾನೂನು, ಲೆಕ್ಕ ಪರಿಶೋಧನೆ ಮತ್ತು ಹಾಸ್ಟೆಲ್ ಎಂಬ ವಿವಿಧ ರೀತಿಯ ಸಮಿತಿಗಳ ಕಾರ್ಯನಿರ್ವಹಿಸುತ್ತಿದೆ. ಯಾವದೇ ಹಣ ಮತ್ತು ಕಾಲ ವ್ಯಯವಿಲ್ಲದೆ ಸರ್ವ ಸಮ್ಮತವಾದ ನ್ಯಾಯ ಭಕ್ತರಿಗೆ ನೀಡುವ ಸದ್ಧರ್ಮ ನ್ಯಾಯಪೀಠ ಪ್ರತಿ ಸೋಮವಾರ ತಪ್ಪದೇ ನಡೆದುಕೊಂಡು ಬರುತ್ತಿದೆ.
ಸ್ವಾಮೀಜಿಗಳು ಸ್ವತಃ ನಾಟಕ ರಚಿಸಿ, ನಿರ್ದೇಶಿಸಿ ರಂಗಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಸಿರಿಗೆರೆಯ ತರಳಬಾಳು ಕಲಾ ಸಂಘ ಬೇಸಿಗೆ ಕಾಲದ ರಜಾದಿನಗಳಲ್ಲಿ ರಂಗಾಸಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನಡೆಸುತ್ತಾ ಬಂದಿದೆ.
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ 77 ಪ್ರೌಢಶಾಲೆ,15 ಪದವಿ ಪೂರ್ವ ಕಾಲೇಜುಗಳು, 5 ಪದವಿ ಕಾಲೇಜುಗಳು, ಒಂದು ಬಿ.ಇಡಿ. ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜು, 4 ಸಂಸ್ಕೃತ ಪಾಠಶಾಲೆಗಳು, 9 ನರ್ಸರಿ ಶಾಲೆಗಳು, 9 ಪ್ರಾಥಮಿಕ ಶಾಲೆಗಳು, ಒಂದು ಅಂಗನವಾಡಿ ತರಬೇತಿ ಸಂಸ್ಥೆ, 2 ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು, 8 ಅನಾಥ ಮಕ್ಕಳ ಕುಟೀರ ಹಾಗು 40 ವಿದ್ಯಾರ್ಥಿ ನಿಲಯಗಳು. ಒಟ್ಟಾರೆ 175 ವಿದ್ಯಾ ಸಂಸ್ಥೆಗಳ ಆಡಳಿತ ನಿರ್ವಹಣೆ 8 ಜಿಲ್ಲೆಗಳಲ್ಲಿ ಸಾಂಗವಾಗಿ ನಡೆದುಕೊಂಡು ಬರುತ್ತಿದ್ದು ಇದರ ಹಿಂದೆ ಡಾ ಶಿವಾಚಾರ್ಯ ಸ್ವಾಮೀಜಿ ಅವರ ದೂರದೃಷ್ಟಿ ಎದ್ದು ಕಾಣುತ್ತದೆ.












Click it and Unblock the Notifications