ಮಾಲ್ಯವಂತನ ಹಂಪಿ ಗೋಪುರದ ಮೌಲ್ಯ ಗೊತ್ತೇನು?
ಆದರೆ, ಪದೇ ಪದೇ ನಾಡಿನ ಐತಿಹಾಸಿಕ ಗುಡಿ ಗೋಪುರಗಳ ಮೇಲೆ ಈ ರೀತಿ ದಾಳಿ ನಡೆಯುತ್ತಿದ್ದರು ಸ್ಥಳೀಯ ಆಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲದಿರುವುದು ದುರಂತ ಸತ್ಯ. ಮಾಲ್ಯವಂತ ಬೆಟ್ಟದ ಬಗ್ಗೆ ಇರುವ ಪೌರಣಿಕ ಹಿನ್ನೆಲೆ, ಐತಿಹಾಸಿಕ ಮಹತ್ವದತ್ತ ಒಂದು ಕಣ್ಣೋಟ ಇಲ್ಲಿದೆ...
ಮಾಲ್ಯವಂತ ಅಥವಾ ಮಲಯವಂತ ರಘುನಾಥ ದೇಗುಲ ಅಯೋಧ್ಯಾ ಶ್ರೀರಾಮಚಂದ್ರಮೂರ್ತಿಗೆ ಅರ್ಪಿತವಾಗಿದೆ. ಹಾಲಿ ದೇಗುಲ ಇರುವ ಕಡೆ ತ್ರೇತಾಯುಗದಲ್ಲಿ ಸೀತೆಯನ್ನು ಅರಸುತ್ತಾ ಬಂದ ಶ್ರೀರಾಮಚಂದ್ರ ಹಾಗೂ ಸೋದರ ಲಕ್ಷ್ಮಣ ಇಬ್ಬರಿಗೂ ಮುಂಗಾರು ಮಳೆ ಆಹ್ವಾನಿಸುತ್ತದೆ.
ಮಳೆ ಚಳಿಗಾಳಿ ಲೆಕ್ಕಿಸದೆ ವೈದೇಹಿ ಏನಾದಳು ಎಂದು ಅರಸುತ್ತಿದ್ದ ಶ್ರೀರಾಮನಿಗೆ ಮುಂಗಾರು ಮಳೆ ಯಲ್ಲಿ ಪ್ರಯಾಣ ಹಿತಕರವಲ್ಲ ಎಂದು ಎನಿಸಿ ಇಲ್ಲೇ ತಂಗಲು ನಿರ್ಧರಿಸುತ್ತಾರೆ. ನಂತರ ಸುಗ್ರೀವನ ಬಂಟ ಅಂಜನೇಯ ಈ ಇಬ್ಬರು ಆಗುಂತಕರನ್ನು ಕಂಡು ಮಾತನಾಡಿಸಿ ತನ್ನ ರಾಜನ ಬಳಿಗೆ ಕರೆದೊಯ್ಯುತ್ತಾನೆ. ನಂತರ ವಾನರ ಸೈನ್ಯದ ಸಹಾಯದಿಂದ ಲಂಕೆಗೆ ತೆರಳಿ ರಾವಣನ ಸಂಹಾರ ಮಾಡಿದ್ದು ರಾಮಾಮಣದ ಕಥೆಯಲ್ಲಿ ಬಂದಿದೆ.
ಐತಿಹಾಸಿಕವಾಗಿ 1528ರಲ್ಲಿ ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ರಘುನಾಥ ಸ್ವಾಮಿ ದೇವಸ್ಥಾನ ನಿರ್ಮಿಸಿದ್ದಾನೆಂದು ಶಾಸನಗಳು ಹೇಳುತ್ತಿವೆ.ಹೀಗಾಗಿ ದೇಗುಲದ ಮುಂದಿನ ಗಾಳಿ ಗೋಪುರ ಕೂಡಾ ಇದೇ ಕಾಲದ್ದಾಗಿದೆ. ಇದು ಪಂಚಕೂಟಗಳ ಸ್ಥಳ ಎಂದು ಪ್ರಸಿದ್ಧಿಯಾಗಿದೆ ಎಂದು ತಿಳಿದು ಬರುತ್ತದೆ.
ಈ ದೇವಸ್ಥಾನದಲ್ಲಿ ರಾಮತೀರ್ಥ ಬಾವಿ ಇದೆ. ದೇವಸ್ಥಾನದ ಹಿಂದೆ ಲಕ್ಷ್ಮಣ ತೀರ್ಥ ಇದೆ. ಉತ್ತರ ಭಾರತದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಬರುತ್ತಾರೆ. ನೆಲದಿಂದ 110 ಅಡಿ ಎತ್ತರದ ಬೆಟ್ಟದ ಮೇಲೆ ಈ ದೇವಾಲಯವಿದೆ.
ನಾಲ್ಕು ಕಲ್ಲು ಕಂಭಗಳ ಮೇಲೆ ಗೋಪುರ ದೇವಸ್ಥಾನಕ್ಕೆ ತೆರಳುವ ಬೆಟ್ಟದ ಅನತಿ ದೂರದಲ್ಲಿ ಗಾಳಿಗೋಪುರ ಇತ್ತು. ನಾಲ್ಕು ಕಲ್ಲು ಕಂಭಗಳ ಮೇಲೆ ಗೋಪುರ ಕಟ್ಟಲಾಗಿತ್ತು. 18 ಅಡಿ ಎತ್ತರದ 6 ಆಡಿ ವಿಸ್ತೀರ್ಣದ ಈ ಗೋಪುರದಲ್ಲಿ ನಿಧಿ ಇರಬಹುದು ಎಂದು ಶಂಕಿಸಿ ನಿಧಿಚೋರರು ಈ ಗೋಪುರ ಧ್ವಂಸಗೊಳಿಸಿದ್ದಾರೆ.
ಈ ಗೋಪುರದ ಬಳಿಯೇ ಕುಡಿಯುವ ನೀರಿನ ಅರವಟ್ಟಿಗೆ ಇದ್ದು, ಭಕ್ತರು ಅಲ್ಲಿ ನೀರು ಕುಡಿದು ವಿಶ್ರಮಿಸುತ್ತಿದ್ದರು. ನಂತರ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಕಮಲಾಪುರದಿಂದ ಕಂಪ್ಲಿಗೆ ಹೋಗುವ ಮಾರ್ಗದಲ್ಲಿರುವ ಹಂಪಿಯ ಮಾಲ್ಯವಂತ ದೇವಸ್ಥಾನಕ್ಕೆ ಶ್ರೀಕೃಷ್ಣದೇವರಾಯ ಆಗಾಗ ಭೇಟಿ ನೀಡಿ ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದ ಎನ್ನಲಾಗಿದೆ.













Click it and Unblock the Notifications