ಶೆಟ್ಟರ್ ಸರ್ಕಾರಕ್ಕೆ ಸವಾಲ್ ಹಾಕಿದ ಯಡಿಯೂರಪ್ಪ

ನಂತರ ಬಿಜೆಪಿ ವಕ್ತಾರರಾಗಿದ್ದ ಧನಂಜಯ್ ಕುಮಾರ್ ಹಾಗೂ ಅಯನೂರು ಮಂಜುನಾಥ್ ಅವರನ್ನು ವಜಾಗೊಳಿಸಿ ಶೆಟ್ಟರ್ ಅವರು ಕೈಗೊಂಡಿರುವ ಕ್ರಮವನ್ನು ಯಡಿಯೂರಪ್ಪ ಖಂಡಿಸಿದರು. ಶೆಟ್ಟರ್ ಅವರಿಗೆ ಒಂದೇ ಕಿವಿ ಮಾತು ಹೇಳುತ್ತೇನೆ 7-8 ಜನ ಸಚಿವರಿದ್ದರೆ ಅವರನ್ನು ಕೈ ಬಿಟ್ಟರೆ ಚುನಾವಣೆಗೆ ಹೋಗಬಹುದು ಎಂದು ಸವಾಲು ಹಾಕಿದ್ದಾರೆ.
ನಗರದ ಕೆಂಗೇರಿ ಶ್ರೀಕೃಷ್ಣಪ್ರಿಯ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀವಾಲ್ಮೀಕಿ ನಾಯಕ ಸೇವಾ ಟ್ರಸ್ಟ್ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ಪಾಲ್ಗೊಂಡಿದ್ದರು.
ಈ ಸಮಾರಂಭದಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಸಚಿವ ರಾಜೂಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ ಶಿವನಗೌಡ ನಾಯಕ ಮುಂತಾದವರು ಉಪಸ್ಥಿತರಿದ್ದರು.
ಬಿಎಸ್ ವೈ ಆಪ್ತರ ಸಭೆ: ತಮ್ಮ ಆಪ್ತರಾದ ಧನಂಜಯ್ ಕುಮಾರ್ ಹಾಗೂ ಆಯನೂರು ಮಂಜುನಾಥ್ ವಿರುದ್ಧ ಶೆಟ್ಟರ್ ಹಾಗೂ ಈಶ್ವರಪ್ಪ ಅವರು ತೆಗೆದುಕೊಂಡಿರುವ ಕ್ರಮ ಹಾಗೂ ನೀಡಿರುವ ಹೇಳಿಕೆಗಳನ್ನು ವಿಶ್ಲೇಷಿಸಲು ಸೋಮವಾರ(ಸೆ.24) ಯಡಿಯೂರಪ್ಪ ಅವರು ತಮ್ಮ ಆಪ್ತರೊಡನೆ ಸಭೆ ಸೇರಲಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ತಮ್ಮ ಮುಂದಿನ ತಂತ್ರ ಪ್ರತಿತಂತ್ರಗಳ ಬಗ್ಗೆ ಆಪ್ತರೊಡನೆ ಚರ್ಚಿಸಲು ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ. ಪ್ರಮುಖವಾಗಿ ಕೆಎಸ್ ಈಶ್ವರಪ್ಪ ಅವರು ಉಪ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆರಾಜೀನಾಮೆ ನೀಡಬೇಕು. ಜಗದೀಶ್ ಶೆಟ್ಟರ್ ಅವರು ಸಂಪುಟ ಪುನರ್ ರಚನೆ ಮಾಡಿ ತಮ್ಮ ಬಣದವರಿಗೆ ಹೆಚ್ಚಿನ ಖಾತೆ ನೀಡಬೇಕು ಎಂದು ಯಡಿಯೂರಪ್ಪ ಅವರು ಆಗ್ರಹಿಸುವ ಸಾಧ್ಯತೆ ನಿಚ್ಚಳವಾಗಿದೆ.
ಆಯನೂರು ಅಳಲು: 'ಕಾರ್ಮಿಕರ ಪರ ಧ್ವನಿ ಎತ್ತಿದ್ದು ತಪ್ಪಾ? ನಾನು ಯಾರ ವಿರುದ್ದವೂ ಹೇಳಿಕೆ ನೀಡಿಲ್ಲ. ಈ ಮೊದಲು ಕೂಡಾ ಅನೇಕ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ನನ್ನ ಮೇಲೆ ಮಾತ್ರ ಕ್ರಮ ಜರುಗಿಸಿದ್ದು ಏಕೆ? ಈಶ್ವರಪ್ಪ ಅವರ ಸರ್ವಾಧಿಕಾರಿ ಧೋರಣೆ ಸಹಿಸಲು ಸಾಧ್ಯವಿಲ್ಲ. ನನ್ನನ್ನು ವಜಾಗೊಳಿಸಿದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.












Click it and Unblock the Notifications