ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೂ ಬೇಡ್ವೇ ಬೇಡ- ಯಡಿಯೂರಪ್ಪ

ಕಳೆದ ಐದು ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಪಕ್ಷದ ಹಿತ ಸಾಧನೆ ಮುಖ್ಯ. ವೈಯಕ್ತಿಕ ಅಜೆಂಡಾ ಏನೂ ಇಲ್ಲ.
ಇತ್ತೀಚೆಗೆ ಪಕ್ಷದ ಹಿರಿಯ ನಾಯಕನಾಗಿ ಮತ್ತು ಪ್ರತಿಪಕ್ಷದ ಸದಸ್ಯನಾಗಿಯೂ ಜನಹಿತವನ್ನು ಕಾಪಾಡಲು ಅನೇಕ ಬಾರಿ ಗುಡುಗಿದ್ದೇನೆ. ಹೈಕಮಾಂಡ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೂ ನನಗೆ ಅದು ಬೇಡವೇ ಬೇಡ. ಜನತೆಯ ಆಶೀರ್ವಾದವೊಂದೇ ಸಾಕು.
ಇತ್ತೀಚೆಗೆ ಬರ ಪ್ರವಾಸ ಮಾಡಿದ್ದರಿಂದ ಜನರ ಸಂಕಷ್ಟಗಳನ್ನು ಆಲಿಸಲು ಸಾಧ್ಯವಾಯಿತು. ಪಕ್ಷದಲ್ಲಿ ಆಯಕಟ್ಟಿನ ಸ್ಥಾನ ಬಯಸಿ ಬರ ಪ್ರವಾಸ ಮಾಡುತ್ತಿದ್ದೇನೆ ಎಂದು ಬಿಂಬಿಸುತ್ತಿರುವ ಮಾಧ್ಯಮಗಳಿಗೆ ನನ್ನ ಕಿವಿಮಾತು - ನನಗೆ ಯಾವುದೇ ಸ್ಥಾನದ ಆಪೇಕ್ಷೆಯಿಲ್ಲ. ಸುಮ್ ಸುಮ್ನೆ ಪದವಿ ಆಕಾಂಕ್ಷಿ ಎಂದು ಬಿಂಬಿಸಬೇಡಿ.
ಪ್ರಧಾನಿ ಮನಮೋಹನ್ ಸಿಂಗ್ ಅವರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಸಂತೃಪ್ತಿಗೊಳಿಸಲು ರಾಜಕೀಯ ಮಾಡಿದ್ದಾರೆ. ಕಾವೇರಿ ಸಭೆ ಕರೆದು ಅಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ವಸ್ತುಸ್ಥಿತಿ ಮರೆಮಾಚಿ ರಾಜ್ಯಗಳ ನಡುವೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಗೆ ಪ್ರಧಾನಿ ಕಾರಣರಾಗಿದ್ದಾರೆ.
ಸಿದ್ದರಾಮಯ್ಯ ಸಂಪೂರ್ಣ ವಿಫಲ: ಮೊನ್ನೆ ಮುಖ್ಯಮಂತ್ರಿ ಶೆಟ್ಟರ್ ತಂಡಕ್ಕೆ ನಿರಾಶೆಯುಂಟುಮಾಡಿದ್ದಾರೆ. ಇನ್ನು ತಂಡದಲ್ಲಿದ್ದ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಪ್ರಧಾನಿಗೆ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡದೆ ರಾಜಕೀಯ ಮಾಡಿದ್ದಾರೆ. ಸಿದ್ದರಾಮಯ್ಯನವರು ಕೇಂದ್ರದ ಇತರೆ ಪ್ರಭಾವಿ ಮಂತ್ರಿಗಳ ಜತೆ ಮಾತುಕತೆ ನಡೆಸದೆ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಸಿದ್ದರಾಮಯ್ಯ ಸಂಪೂರ್ಣವಾಗಿ ವಿಫಲರಾಗಿದ್ದಾರೆ.












Click it and Unblock the Notifications