ಯಡಿಯೂರಪ್ಪಗೆ ತಾಕತ್ ಇದ್ರೆ ಬಿಜೆಪಿ ಬಿಟ್ಟು ತೊಲಗಲಿ

ಒಟ್ಟಿನಲ್ಲಿ ಬಿಜೆಪಿ ಪಕ್ಷ ಯಡಿಯೂರಪ್ಪನವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದರೆ, ಯಡಿಯೂರಪ್ಪನವರೇ ಬಿಜೆಪಿ ಹೈಕಮಾಂಡಿಗೆ ಬಿಸಿ ತುಪ್ಪವಾಗಿ, ಉಗುಳಲೂ ಆಗದೆ ನುಂಗಲೂ ಆಗದಂತಾಗಿದ್ದಾರೆ. ಬಿಜೆಪಿಯಿಲ್ಲದೆ ರಾಜ್ಯದಲ್ಲಿ ಯಡಿಯೂರಪ್ಪನವರಿಗೆ ರಾಜಕೀಯ ಅಸ್ತಿತ್ವ ಇಲ್ಲದಂತಾಗಿದೆ. ಹಾಗೆಯೆ, ಯಡಿಯೂರಪ್ಪನವರಿಲ್ಲದೆ ಬಿಜೆಪಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯ.
ಯಡಿಯೂರಪ್ಪನವರಿಗೆ ನಿಜವಾಗಿಯೂ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಬೇಡವಾಗಿದ್ದರೆ, ತಮ್ಮ ಮುಖವಾಣಿಯಂತಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಮುಖಾಂತರ, ಯಡಿಯೂರಪ್ಪನವರೇ ಪಕ್ಷದ ರಾಜ್ಯಾಧ್ಯಕ್ಷರಾಗಬೇಕು ಎಂದು ಪದೇಪದೇ ಹೇಳಿಸುತ್ತಿರುವುದೇಕೆ? ರಾಜ್ಯಾಧ್ಯಕ್ಷ ಪಟ್ಟ ಸಾಕಾಗಿದ್ದರೆ ರೇಣುಕಾಚಾರ್ಯ ಬಾಯಿ ಮುಚ್ಚಿಕೊಂಡು ಇರಲು ಹೇಳುವುದು ಯಡಿಯೂರಪ್ಪನವರಿಗೆ ಸಾಧ್ಯವಿಲ್ಲವೆ?
ಯಡಿಯೂರಪ್ಪನವರಿಗೆ ಬಿಜೆಪಿಯ ನಾಯಕರ ಸಹವಾಸ ಸಾಕಾಗಿದೆ, ಸದ್ಯದಲ್ಲಿಯೇ ಹೊಸ ಪಕ್ಷ ಕಟ್ಟಲಿದ್ದಾರೆ ಅಥವಾ ಬೇರೆ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಹೊಸದೇನಲ್ಲ. ಶುಕ್ರವಾರ ವಿನಾಕಾರಣ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪನವರು ಪರೋಕ್ಷವಾಗಿ ತಮ್ಮ ಇಂಗಿತವನ್ನು ಹೊರಹಾಕಿದ್ದಾರೆ. ಮತ್ತೆ ಅದೇ ರಾಗ ಅದೇ ಹಾಡನ್ನು ಹಾಡಿದ್ದಾರೆ.
"ನಾನು ರಾಜ್ಯಾಧ್ಯಕ್ಷ ಪಟ್ಟದ ಆಕಾಂಕ್ಷಿ ಅಲ್ಲವೇ ಅಲ್ಲ. ನನ್ನ ಪರವಾಗಿ ಕೇಂದ್ರದ ನಾಯಕರಲ್ಲಿ ಲಾಬಿ ನಡೆಸದಿರುವಂತೆ ನನ್ನ ಬೆಂಬಲಿಗರನ್ನು ಕೇಳಿದ್ದೇನೆ. ಒಂದು ವೇಳೆ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುವುದೇ ಆಗಿದ್ದರೆ ಜನರ ಆಶೀರ್ವಾದ ಪಡೆದೇ ಬರುತ್ತೇನೆ" ಎಂದು ಬೆಂಗಳೂರಿನಲ್ಲಿ ತುತ್ತೂರಿ ಊದಿದ್ದಾರೆ ಯಡಿಯೂರಪ್ಪ. ಅವರು ಗೋಷ್ಠಿ ನಡೆಸಿದ ಕೆಲವೇ ಗಂಟೆಗಳಲ್ಲಿ ಯಡಿಯೂರಪ್ಪ ಬೆಂಬಲಿಗ ಶಾಸಕರು ರಹಸ್ಯವಾಗಿ ಭೇಟಿಯಾಗಿ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ರೇಣುಕಾಚಾರ್ಯರ ಹಳೆ ಮಂತ್ರ : ಸಭೆಯ ನಂತರ ರೇಣುಕಾಚಾರ್ಯ ಅವರು ಯಡಿಯೂರಪ್ಪನವರನ್ನೇ ರಾಜ್ಯದ ಅಧ್ಯಕ್ಷರನ್ನಾಗಿ ಮಾಡಬೇಕು. ರಾಜ್ಯದಲ್ಲಿ ಸಾಮೂಹಿಕ ನಾಯಕತ್ವ ಇಲ್ಲವೇ ಇಲ್ಲ. ನಾಯಕರೇನಿದ್ದರೂ ಯಡಿಯೂರಪ್ಪನವರು ಮಾತ್ರ. ಅವರೊಬ್ಬರೇ ಬಿಜೆಪಿಯ ಸಮರ್ಥ ನಾಯಕರು. ಮುಂದಿನ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮತ್ತೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಲಿದ್ದಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭಿನ್ನಮತದ ದಾಳಗಳನ್ನು ಉರುಳಿಸಿದ್ದಾರೆ.
ಮೈಮೇಲೆ ಎಳೆದುಕೊಂಡಿರುವ ಹತ್ತಾರು ಕ್ರಿಮಿನಲ್ ಕೇಸುಗಳಿಂದ ಖುಲಾಸೆ ಆಗುವವರೆಗೆ ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಯಡಿಯೂರಪ್ಪನವರನ್ನು ದೆಹಲಿ ನಾಯಕರು ಹತ್ತಿರ ಕೂಡ ಸೇರಿಸುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಯಡಿಯೂರಪ್ಪನವರಿಗೆ ಇರುವುದು ಎರಡೇ ಅವಕಾಶ. ಒಂದು ಕೇಸುಗಳಿಂದ ಮುಕ್ತರಾಗುವವರೆಗೆ ಬಾಯಿ ಮುಚ್ಚಿ ಕೂತಿರಬೇಕು ಇಲ್ಲದಿದ್ದರೆ ಹೊಸ ಪಕ್ಷ ಸ್ಥಾಪಿಸಿ ಬಿಜೆಪಿಯಿಂದ ಹೊರಗೆ ಬರಬೇಕು. ಅಧಿಕಾರದ ರುಚಿಯನ್ನು ಕಂಡಿರುವ ಯಡಿಯೂರಪ್ಪನವರಿಗೆ ಈ ಎರಡೂ ಮಾಡಲು ಆಗುತ್ತಿಲ್ಲ.
ಆದರೆ, ಎರಡನೇ ಹಂತದ ರಾಜ್ಯ ಪ್ರವಾಸವನ್ನು ಮುಗಿಸಿದ ನಂತರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದಾಗಿ ಯಡಿಯೂರಪ್ಪನವರು ಹಿರಿಯ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಯಾವ ಮಾತನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಡಿ.27ರಂದು ಹರ್ಯಾಣಾದಲ್ಲಿ ನಡೆಯಲಿರುವ ಬಿಜೆಪಿಯ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸಭೆಯಲ್ಲಿ ಭಾಗವಹಿಸದಿರುವ ನಿರ್ಧಾರವನ್ನು ಯಡಿಯೂರಪ್ಪ ತೆಗೆದುಕೊಂಡಿದ್ದಾರೆ. ಹಾಗಿದ್ರೆ ಯಡಿಯೂರಪ್ಪನವರ ಮುಂದಿನ ನಡೆ ಏನು? ಎಲ್ಲವೂ ನಿಗೂಢ ನಿಗೂಢ.












Click it and Unblock the Notifications