ಯಡಿಯೂರಪ್ಪರಿಂದ ಇಂದು ಮತ್ತೊಂದು ಆಟ

ಅತ್ತ ಅಧಿಕಾರ ಕಳೆದುಕೊಂಡ ನಂತರ ವಿಲಿವಿಲಿ ಅಂತಾಗಿರುವ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಮೊನ್ನೆ ಪರೋಕ್ಷವಾಗಿ 'ಸ್ವಲ್ಪ ಸುಮ್ಕಿರಿ' ಎಂದು ಪರೋಕ್ಷವಾಗಿ ತಮಗೇ ಬುದ್ಧಿವಾದ ಹೇಳಿದ್ದನ್ನು ಸಹಿಸದಾದ ಸನ್ಮಾನ್ಯ ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಮೊದಲು ಕೆ.ಎಸ್. ಈಶ್ವರಪ್ಪನನ್ನು ಕೆಳಗಿಳಿಸಿ, ನನ್ನನ್ನು/ಇಲ್ಲವೇ ನಾನು ಸೂಚಿಸುವ ವ್ಯಕ್ತಿಯನ್ನು ನೇಮಿಸಿ ಎಂದು ಅದೇ ಹಳೇ ಗ್ರಾಮಫೋನ್ ಪ್ಲೇಟ್ ಹಾಕುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ಗಡುವು ವಿಧಿಸುವ ಸೂಚನೆಗಳಿವೆ.
ಈ ಹಿಂದೆಯೂ ಯಡಿಯೂರಪ್ಪ ಇಂತಹ ರೋಷಾವೇಶದ 'ಡೆಡ್'ಲೈನುಗಳನ್ನು ಕೊಟ್ಟಿದ್ದಾರೆ. ಆದರೆ ಅವೆಲ್ಲ ಠುಸ್ಸೆಂದಿವೆ. ಆದರೂ ಇಂದು ಕರೆದಿರುವ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ತಮ್ಮ ನಿರ್ಧಾರ ಏನೆಂಬುದನ್ನು ಬಹಿರಂಗಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ.
'ಪಕ್ಷದಲ್ಲಿ ನನ್ನ ಮಾತಿಗೆ ಬೆಲೆ ಇಲ್ಲ. ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ' ಎಂದು ಇತ್ತೀಚಿನ ದಿನಗಳಲ್ಲಿ ಹತ್ತಾರು ಬಾರಿ ಹೇಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆಯೂ ವೀರಪ್ಪ ಅವರ ವಿಷಯದಲ್ಲಿ ಅದೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹೈಕಾಂಡ್ ಎದುರು ಅಗ್ನಿಕುಂಡವಾಗಿರುವ ಯಡಿಯೂರಪ್ಪ ಕೊತಕೊತನೆ ಕುದಿಯುವುದನ್ನು ತಣ್ಣಗಾಗಿಸಲು ಧರ್ಮೇಂದ್ರ ಪ್ರಧಾನ್ ಈಗಾಗಲೇ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಬುಧವಾರ ಬೆಳಗ್ಗೆಯೇ ಆಗಮಿಸಿರುವ ಪ್ರಧಾನ್ ಅವರು ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರೆ ಜತೆ ಸತತವಾಗಿ ಮಾತುಕತೆಯಲ್ಲಿ ನಿರತರಾಗಿದ್ದಾರೆ.
ಗೌರಿ-ಗಣೇಶನ ಹಬ್ಬಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಹೊಸಬರನ್ನು ಪ್ರತಿಷ್ಠಾಪಿಸುವುದಾಗಿ ಹೈಕಮಾಂಡ್ ಈ ಹಿಂದೆ ಸುಳಿವು ನೀಡಿತ್ತು. ಆದರೆ ಹಬ್ಬ ಮುಗಿದರೂ ವರಿಷ್ಠರು ಹರಿ-ಶಿವ ಅನ್ನದಿರುವುದು ಯಡಿಯೂರಪ್ಪನವರ ಪಿತ್ತ ಕೆರಳಿಸಿದೆ.
ಅಕ್ಟೋಬರ್ ಆರಂಭಕ್ಕೆ ಅಧ್ಯಕ್ಷ ಹುದ್ದೆ ನೀಡದೇ ಹೋದರೆ ಗಾಂಧಿ ಜಯಂತಿ ದಿನದಂದು ಮತ್ತೊಂದು ಸುತ್ತಿನ ರಾಜ್ಯ ಪ್ರವಾಸ ಮಾಡುವುದು. ಅಲ್ಲಿಂದ ವಾಪಸಾಗುತ್ತಿದ್ದಂತೆ ರಾಜಕೀಯ ಲೆಕ್ಕಾಚಾರ ಹಾಕಿ, ತಮ್ಮ ಅಂತಿಮ ನಿರ್ಣಯವೇನು ಎಂಬುದನ್ನು ಬಹಿರಂಗಪಡಿಸುವುದು ಯಡಿಯೂರಪ್ಪನವರ ಇರಾದೆಯಾಗಿದೆ.












Click it and Unblock the Notifications