ಸೋನಿಯಾ ನಿವಾಸದ ಮುಂದೆ 'ನಾಳೆ ಬಾ' ಬೋರ್ಡ್

ಅದರೆ, ನಾಳೆ ಬಾ ಎಂಬ ಬೋರ್ಡ್ ತಗುಲಿಹಾಕಿಕೊಂಡಂತೆ ಲಿಂಗಾಯತ ಮುಖಂಡರ ಅಳಲು ಕೇಳಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿ ಇನ್ನೂ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಒತ್ತಡ ಹೇರಿ ಡಾ ಜಿ ಪರಮೇಶ್ವರ್ ಅವರ ಸ್ಥಾನಕ್ಕೆ ಲಿಂಗಾಯತ ಮುಖಂಡ ಶಾಮನೂರು ಶಿವಶಂಕರಪ್ಪ ಅವರನ್ನು ಕೂರಿಸಲು ಲಿಂಗಾಯತರು ಪಣತೊಟ್ಟಿದ್ದಾರೆ.
ಮೂಲಗಳ ಪ್ರಕಾರ ಬುಧವಾರ(ಸೆ.19) ಸೋನಿಯಾ ಮೇಡಂ ಭೇಟಿ ಸಾಧ್ಯವಾಗುವ ಲಕ್ಷಣಗಳು ಕಾಣಿಸಿದೆ. ಜಿ ಪರಮೇಶ್ವರ್ ಅವರ ಬದಲಾವಣೆ ಅಷ್ಟು ಸುಲಭವಾಗಿಲ್ಲ. ದಲಿತ ಸಮುದಾಯಕ್ಕೆ ಸೇರಿರುವ ಪರಮೇಶ್ವರ್ ಅವರನ್ನು ಕೆಳಗಿಳಿಸಲು ರಾಜ್ಯ ಕಾಂಗ್ರೆಸ್ ನಲ್ಲಿ ಒಮ್ಮತವಿಲ್ಲ.
ಎಲ್ಲಾ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನೆಡೆಸುವಲ್ಲಿ ಪರಮೇಶ್ವಾರ್ ವಿಫಲರಾಗಿದ್ದಾರೆ. ಅವರ ನಡೆತೆ ಬಗ್ಗೆ ಪಕ್ಷದಲ್ಲಿ ತೀವ್ರ ಅಸಮಾಧಾನವಿದೆ ಎಂದು ಶಿವಶಂಕರಪ್ಪ ಅವರ ನಿಯೋಗ ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಡಲಿದೆ.
ಸಿಎಂ ಪಟ್ಟಬೇಡ: ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾರನ್ನು ಬೇಕಾದರೂ ಹೈಕಮಾಂಡ್ ಆಯ್ಕೆ ಮಾಡಲಿ ಅದರೆ, ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ಮಾತ್ರ ಲಿಂಗಾಯತ ಮುಖಂಡರಿಗೆ ಸಿಗಬೇಕು. ವಿಧಾನಸಭಾ ಚುನಾವಣಾ ಹತ್ತಿರಾಗುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಬಹುಸಂಖ್ಯಾತ ಲಿಂಗಾಯತ ಮತಗಳು ಅತ್ಯವಶ್ಯಕ.
ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಿ. ಲಿಂಗಾಯತ ಮುಖಂಡರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದಾಗೆಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ಪರಮೇಶ್ವರ್ ಅವರ ವಿರೋಧಿಗಳಲ್ಲ. ಅವರ ಮೇಲೆ ಅಪಾರ ಗೌರವವಿದೆ ಎಂದು ಶಾಸಕ ಪಿಎಂ ಅಶೋಕ್ ನವದೆಹಲಿಯಲ್ಲಿ ಹೇಳಿದ್ದಾರೆ.
ನಿಯೋಗದಲ್ಲಿ ಯಾರಿದ್ದಾರೆ?: ಶಾಮನೂರು ಶಿವಶಂಕರಪ್ಪ, ಬಿಸಿ ಪಾಟೀಲ್, ಪಿಎಂ ಅಶೋಕ್, ಪ್ರಕಾಶ್ ಹುಕ್ಕೇರಿ, ಮಾಲಕ ರೆಡ್ಡಿ, ಈಶ್ವರ್ ಖಂಡ್ರೆ, ರಾಜಶೇಕರ್ ಪಾಟೀಲ್, ವಿಎಸ್ ಕೌಜಲಗಿ, ಬಿಆರ್ ಪಾಟೀಲ್, ಕೈಲಾಶನಾಥ್ ಪಾಟೀಲ್, ಎಚ್ ಎಸ್ ಮಹದೇವ ಪ್ರಸಾದ್,ಅಮರಗೌಡ ಭೈಯಾಪುರ ಸೇರಿದಂತೆ 30ಕ್ಕೂ ಅಧಿಕ ಜನಪ್ರತಿನಿಧಿಗಳಿದ್ದಾರೆ.
ಜೊತೆಗೆ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪ, ವಿಎಸ್ ಉಗ್ರಪ್ಪ, ಕೆಸಿ ಕೊಂಡಯ್ಯ ಕೂಡಾ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಲು ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೇ ಕಾರಣ ಎಂದು ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದು ನಡೆದಿದೆ.












Click it and Unblock the Notifications