ಕುಮಾರಸ್ವಾಮಿ-ಶೆಟ್ಟರ್ ಮಧ್ಯೆ ಹಾಟ್ Hotline ಸಂಪರ್ಕ

ನೋಡಿ, JDSನ ಅಧಿನಾಯಕ ಕುಮಾರಸ್ವಾಮಿ ಅವರನ್ನು ನಂಬುವುದಾದರೆ ಈ ದೂರ ಸಂಪರ್ಕ ಏರ್ಪಟ್ಟಿದೆ. ಇದಕ್ಕೆ ಅವರು ಸೋದಾಹರಣ ಸಾಕ್ಷಿಯನ್ನೂ ಒದಗಿಸಿದ್ದಾರೆ. ಜತೆಗೆ, ಖುದ್ದಾಗಿ ಅವರೇ ಇದನ್ನು ಖಚಿತಪಡಿಸಿರುವುದು. ಆದರೆ ಇದರಿಂದ ಪೀಕಲಾಟಕ್ಕೆ ಸಿಕ್ಕಿಕೊಂಡಿರುವ ಹಾಲಿ ಮುಖ್ಯಮಂತ್ರಿಗಳು ಮಾತ್ರ ತಮ್ಮ ಜನ್ಮದತ್ತ ಮೌನಕ್ಕೆ ಶರಣಾಗಿದ್ದರೆ, ಅಶೋಕ್ ಗಪ್ ಚುಪ್ ಆಗಿದ್ದಾರೆ.
ವಿಷಯವೇನಪ್ಪಾ ಅಂದರೆ... ಮೊನ್ನೆ ನಡೆದ ಕೆಎಸ್ಸಾರ್ಟಿಸಿ ಬಸ್ ನೌಕರರ ಮುಷ್ಕರ ಮುಖ್ಯಮಂತ್ರಿಯಾದಿಯಾಗಿ ಎಲ್ಲರನ್ನೂ ಹೈರಾಣಗೊಳಿಸಿದ್ದು ಇಡೀ ನಾಡಿಗೆ ತಿಳಿದ ವಿಚಾರ. ಆದರೆ ಈ ಸಮಸ್ಯೆ ಕೊನೆಗಾಣಿಸಿ ಎಂದು ಸನ್ಮಾನ್ಯ ಮುಖ್ಯಮಂತ್ರಿಗೆ ಸದರಿ ಮಾಜಿ ಸಿಎಂ ಅವರೇ ಫೋನಾಯಿಸಿದ್ದರಂತೆ.
'ಈ ಸಾರಿಗೆ ಸಚಿವ ನನ್ನ ಮಾತನ್ನೇ ಕೇಳುತ್ತಿಲ್ಲ ಏನ್ಮಾಡೋದು ಕುಮಾರಸ್ವಾಮಿಗಳೇ' ಎಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಜಗದೀಶ್ ಶೆಟ್ಟರ್ ಅವರು ಕುಮಾರಸ್ವಾಮಿ ಅವರಿಗೆ ಅಲವತ್ತುಕೊಂಡರಂತೆ. ಇದನ್ನು ಖುದ್ದು ಕುಮಾರಸ್ವಾಮಿಯೇ ನಿನ್ನೆ ಹುಬ್ಬಳ್ಳಿಯಲ್ಲಿ ಹೇಳಿಕೊಂಡಿದ್ದಾರೆ.
ಸಂದರ್ಭಸಹಿತ ವಿವರಿಸಿ: ಸಾರಿಗೆ ಸಂಸ್ಥೆ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರಿಂದ ಸಿಎಂ ಶೆಟ್ಟರ್ ಅವರಿಗೆ ದೂರವಾಣಿ ಮಾಡಿ ಮಾತುಕತೆಗೆ ಮುಂದಾಗಿ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದೆ. ಆಗ, 'ಈ ವಿಷಯದಲ್ಲಿ ಸಾರಿಗೆ ಸಚಿವರು ನನ್ನ ಮಾತು ಕೇಳ್ತಾ ಇಲ್ಲ' ಎಂದು ಮುಖ್ಯಮಂತ್ರಿ ಉತ್ತರ ನೀಡಿದರು. ಸ್ವತಃ ಮುಖ್ಯಮಂತ್ರಿಯೇ ಈ ರೀತಿ ಹೇಳ್ತಾರೆ ಅಂದರೆ ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿರಬಹುದು ಎಂದು ಊಹಿಸಬಹುದಾಗಿದೆ ಎಂದೂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಅಶೋಕ ಮಹಾರಾಜಗೂ ಕುಮಾರಣ್ಣ ಫೋನ್: ಸಿಎಂ ಶೆಟ್ಟರ್ ಹೀಗೆ ಪ್ರತಿಕ್ರಿಯಿಸುತ್ತಿದ್ದಂತೆ ಖುದ್ದು ಸಾರಿಗೆ ಸಚಿವರಿಗೇ ಫೋನಾಯಿಸಿದ ಕುಮಾರಸ್ವಾಮಿ, ಅಧಿಕಾರ ಶಾಶ್ವತವಲ್ಲ. 10 ನಿಮಿಷದಲ್ಲಿ ಬಗೆಹರಿಸುವ ಸಮಸ್ಯೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ, ತಕ್ಷಣವೇ ಮಾತುಕತೆಗೆ ಮುಂದಾಗಿ' ಎಂದು ಸೂಚಿಸಿದ ನಂತರವೇ ಅವರು ಮಾತುಕತೆಗೆ ಮುಂದಾಗಿದ್ದು ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.












Click it and Unblock the Notifications