ಕ್ರೂರಿ ಮೋದಿ ಪ್ರಧಾನಿ ಆದರೆ ನಾಚಿಕೆಗೇಡು: ಅ.ಮೂರ್ತಿ

ಕ್ರೂರಿ ಮೋದಿಗೆ ಟಾಟಾ, ಬಿರ್ಲಾರಂಥವರೇ ಹಿಂಬಾಲಕರಾಗಿದ್ದು, ಅವರನ್ನು ಪ್ರಧಾನಿ ಮಾಡುವ ಹುನ್ನಾರ ನಡೆಯುತ್ತಿದೆ. ಇದಕ್ಕಿಂತ ನಾಚಿಕೆ ಸಂಗತಿ ಬೇರೊಂದಿಲ್ಲ' ಎಂದು ಅನಂತಮೂರ್ತಿ ಅವರು ಹೇಳಿದ್ದಾರೆ. ಇಲ್ಲಿನ ಪುರಭವನದಲ್ಲಿ ಶುಕ್ರವಾರ 'ವಾರ್ತಾಭಾರತಿ' ದೈನಿಕದ 10ನೆ ವರ್ಷದ ವಿಶೇಷಾಂಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಅಸೃಶ್ಯರಂತೆ ಕಂಡು ಹತ್ತಿರವೂ ಸೇರಿಸಬಾರದು. ಮೋದಿ ವಿರುದ್ಧ ಇಂತ ಸಿಟ್ಟಿದ್ದರೆ ಮಾತ್ರ ನಾವು ಒಳ್ಳೆಯ ನಾಗರಿಕರಾಗಲು ಸಾಧ್ಯ. ನಾವಿಲ್ಲಿ ಮೂರನೆ ದರ್ಜೆಯ ನಾಗರಿಕರಂತೆ ಬದುಕುತ್ತಿದ್ದೇವೆ' ಎಂದು ಮೂರ್ತಿ ಕಿಡಿಕಾರಿದರು.
ಮೋದಿ ಕುರಿತು ಸುದ್ದಿಗಳನ್ನು ಪ್ರಕಟಿಸುವಾಗ ಪತ್ರಿಕೆ, ಮಾಧ್ಯಮಗಳಲ್ಲಿ ಮೋದಿ ಫೋಟೋ ಹಾಕಬೇಡಿ. ಅವನ ಫೋಟೋ ನೋಡಿದ ತಕ್ಷಣ ಸಿಟ್ಟು ಬರುತ್ತದೆ. ಮೋದಿ ಬಗ್ಗೆ ಮಾತನಾಡಲೇಬೇಡಿ. ಎಲ್ಲರೂ ವಿನಾಕಾರಣ ಮಾತನಾಡಿ ಮೋದಿಯನ್ನು ದೊಡ್ಡವರನನ್ನಾಗಿ ಮಾಡಿದ್ದಾರೆ ಎಂದು ಕುಹಕವಾಡಿದರು.
'ನೆಹರು ಇದ್ದಾಗ ರಾಜಕೀಯ ಚೆನ್ನಾಗಿತ್ತು. ಕಲ್ಲಿದ್ದಲು, ತರಂಗಾತರಂಗ ಹಂಚಿಕೆ ಪ್ರಕರಣಗಳನ್ನು ನೋಡಿದರೆ ರಾಜಕೀಯದಲ್ಲಿ ಯಾಋನ್ನೂ ನಂಬುವ ಸ್ಥಿತಿಯಲ್ಲಿಲ್ಲ. 10 ವರ್ಷಗಳ ಕಾಲ ಗಣಿಗಾರಿಕೆಯನ್ನು ಮಾಡಬಾರದು. ಇದರಿಂದಾಗಿಯೇ ರಾಜಕೀಯ ಹಾಳಾಗಿದ್ದು' ಎಂದು ಕೆಂಡಾಮಂಡಲರಾದರು.
ಮಾಧ್ಯಮ ಪೂಸಿ ಹೊಡೆಯುತ್ತದೆ: ಲಿಬಿಯಾದ ಸರ್ವಾಧಿಕಾರಿ ಮುಹಮ್ಮದ್ ಗಡಾಫಿಯನ್ನು ಅಮೇರಿಕ ಅತ್ಯಂತ ಅಸಹ್ಯವಾಗಿ ಕೊಲೆ ಮಾಡಿತ್ತು. ಅದನ್ನು ಪಾಶ್ಚಾತ್ಯ ಮಾಧ್ಯಮಗಳು ಅಶ್ಲೀಲವಾಗಿ ತೋರಿಸಿವೆ. ಭಾರತದಲ್ಲಿ ಅಂತಹವರನ್ನು ಕೊಲೆ ಮಾಡಿದರೂ ಅದಕ್ಕೊಂದು ಮರ್ಯಾದೆ ಇರುತ್ತದೆ. ಆದರೂ ಭಾರತದ ಕೆಲವು ಮಾಧ್ಯಮಗಳೂ ಪಾಶ್ಚಾತ್ಯ ಮಾಧ್ಯಮದ ದಾರಿಯನ್ನು ಹಿಡಿದಿದೆ. ಆದಾಗ್ಯೂ ಮಾಧ್ಯಮಗಳು ತೋರಿಸಿದ್ದೇ ದಾರಿ ಎಂಬಂತಾಗಬಾರದು. ಅದನ್ನು ಅನುಮಾನದಿಂದ ನೋಡಲು ಓದುಗರು ಕಲಿಯಬೇಕು ಎಂದರು.
ಕನ್ನಡಿಗರ ಪತ್ರಿಕೆ: ಸತ್ಯವನ್ನು ಎಲ್ಲೆಡೆಗೆ ಪಸರಿಸುವ 'ವಾರ್ತಾಭಾರತಿ' ಸಮಗ್ರ ಕನ್ನಡಿಗರ ಪತ್ರಿಕೆ ಎಂದ ಡಾ. ಅನಂತಮೂರ್ತಿ, ಒಬ್ಬ ಮುಸ್ಲಿಂ ಪತ್ರಿಕೆ ನಡೆಸಿದರೆ ಅದು ಮುಸ್ಲಿಮರ ಮತ್ತು ಒಬ್ಬ ಕ್ರಿಶ್ಚಿಯನ್ ಪತ್ರಿಕೆ ನಡೆಸಿದರೆ ಅದು ಕ್ರೈಸ್ತರ ಪತ್ರಿಕೆಯಾಗುತ್ತದೆ. ಆದರೆ, ಮೇಲ್ವರ್ಗದ ಒಬ್ಬ ಪತ್ರಿಕೆ ನಡೆಸಿದರೆ ಅದು ಎಲ್ಲರ ಪತ್ರಿಕೆಯಾಗುತ್ತದೆ ಎಂದು ವ್ಯಂಗ್ಯವಾಡುವ ಮೂಲಕ ಇಂದಿನ ಕೆಲವು ಜನರ ಮನಸ್ಥಿತಿಯನ್ನು ತೆರೆದಿಟ್ಟರು.
ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಮಹೇಶ್ ಭಟ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ಬೆಂಗಳೂರು ವಿವಿ, ಎಐಸಿಟಿಇಯ ಮಾಜಿ ಸದಸ್ಯ ಆಗಾ ಸುಲ್ತಾನ್, ಮಾಧ್ಯಮ ಕಮ್ಯೂನಿಕೇಶನ್ ಲಿಮಿಟೆಡ್ನ ನಿರ್ದೇಶಕ ಎಚ್.ಎಂ.ಅಪ್ರೋಝ್ ಅಸ್ಸಾದಿ, ಶಿರೂರು ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ನ ಆಡಳಿತ ಟ್ರಸ್ಟಿ ಸಯ್ಯದ್ ಅಬ್ದುಲ್ಖಾದರ್ ಬಾಶು ಉಪಸ್ಥಿತರಿದ್ದರು.












Click it and Unblock the Notifications