ಡಿಕೆಶಿ,ಸೋಮಣ್ಣ ಒಬ್ರನ್ನೊಬ್ರು ಹೊಗಳಿ ಕೊಂಡಾಡಿದ್ರು
ಗುಡಿಸಲು ರಹಿತ ಕ್ಷೇತ್ರವನ್ನಾಗಿಸಲು ಕನಕಪುರ ತಾಲೂಕನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಮೊದಲು ರಾಜ್ಯ ಸರಕಾರ ಮತ್ತು ವಸತಿ ಸಚಿವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅದರಲ್ಲೂ ಸಚಿವ ಸೋಮಣ್ಣ ಅವರು ಈ ಯೋಜನೆ ಜಾರಿಗೆ ಬರುವಲ್ಲಿ ತುಂಬು ಹೃದಯದ ಸಹಕಾರ ನೀಡುತ್ತಿದ್ದಾರೆ.
ಈ ಯೋಜನೆಯಡಿಯಲಿ 13 ಸಾವಿರ ಮನೆಗಳು ನಿರ್ಮಾಣಗೊಳ್ಳುತ್ತಿವೆ. ಅಲ್ಲದೆ ರಾಯಸಂದ್ರ ಗ್ರಾಮದ ಬಳಿ 400 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮಾದರಿ ಬಡಾವಣೆ ರೂಪುಗೊಳ್ಳುತ್ತಿವೆ. ಈ ಎಲ್ಲಾ ಕೆಲಸಗಳಿಗೆ ಹಣಕಾಸಿನ ತೊಂದರೆಯಾಗದಂತೆ ಸಚಿವ ಸೋಮಣ್ಣ ಮುತುವರ್ಜಿ ವಹಿಸಿಕೊಂಡಿದ್ದಾರೆ. ಆವರಿಗೆ ನನ್ನ ಮತ್ತು ನನ್ನ ಕ್ಷೇತ್ರದ ಮತದಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಸೋಮಣ್ಣ ಹೇಳಿಕೆ: ವಿಪಕ್ಷದಲ್ಲಿರುವ ಡಿ ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಪೂರ್ವ ಬೆಂಬಲ ನೀಡಿ ಸಹಕರಿಸಿದ್ದಾರೆ. ಯಾವುದೇ ಪಕ್ಷವಾಗಲಿ, ಅಭಿವೃದ್ದಿ ನಡೆಸುವವರಿಗೆ ಬಿಜೆಪಿ ಸಹಕಾರ ಇದ್ದೇ ಇರುತ್ತದೆ.
ಕನಕಪುರ ಕ್ಷೇತ್ರದಲ್ಲಿ ಡಿ ಕೆ ಶಿವಕುಮಾರ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರು ಮಾಡುವ ಉತ್ತಮ ಕೆಲಸಕ್ಕೆ ಸರಕಾರದ ಬೆಂಬಲವಿದೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಶಿವಕುಮಾರ್ ಮಾತ್ರ ಕನಕಪುರ ಕ್ಷೇತ್ರದಿಂದ ಜಯ ಗಳಿಸುತ್ತಾರೆ ಎಂದು ಸೋಮಣ್ಣ ಹೇಳಿಕೆ ನೀಡಿದ್ದಾರೆ.
ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪನವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ರಾಜಕೀಯವಾಗಿ ಅವರನ್ನು ಯಾರೂ ತುಳಿಯಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ಯಡಿಯೂರಪ್ಪ ಅವರನ್ನು ನೆನೆಯಲು ಸೋಮಣ್ಣ ಮರೆಯಲಿಲ್ಲ.
ಕೆಲ ದಿನಗಳ ಹಿಂದೆ ಬಿಜೆಪಿಯ ಮೂವರು ಸಚಿವರಾದ ವಿ ಸೋಮಣ್ಣ, ಸಿ ಪಿ ಯೋಗೀಶ್ವರ್ ಮತ್ತು ಬಿ ಎನ್ ಬಚ್ಚೇಗೌಡ ಬಿಜೆಪಿಗೆ ವಿದಾಯ ಹೇಳಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ.