ಬೇಲೇಕೇರಿ ಅದಿರು ಅಕ್ರಮ: ಶರದ್ ಪವಾರಿಗೂ ಸಿಬಿಐ ಕಾಟ

ಹೌದು, ಕೇಂದ್ರದ ಸನ್ಮಾನ್ಯ ಕೃಷಿ ಸಚಿವ ಮತ್ತು ಅತ್ಯಂತ ಪ್ರಭಾವಿ ರಾಜಕಾರಣಿ ಶರದ್ ಪವಾರ್ ಮತ್ತು ಆತನ ಕುಟಂಬಸ್ಥರೂ ಬೇಲೇಕೇರಿ ಅದಿರು ಅಕ್ರಮ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ.
ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ಇತ್ತೀಚೆಗೆ ಸಿಬಿಐಗೆ ನೇರವಾಗಿ ಸುಪ್ರೀಂಕೋರ್ಟ್ ಹೇಳಿದೆ. ಆದ್ದರಿಂದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೂ ಸಿಬಿಐ ಕಂಟಕ ಎದುರಾಗಲಿದೆ.
ಶರದ್ ಪವಾರ್ ಮತ್ತು ಅಜಿತ್ ಪವಾರ್ ವಿರುದ್ಧ ಸಿಬಿಐ ತನಿಖೆ ಶರುವಾದರೆ ಇಬ್ಬರ ಸಚಿವ ಸ್ಥಾನಕ್ಕೂ ಕುತ್ತು ಬರುವುದು ಖಚಿತ. ಅದಿರು ಕಳ್ಳತನ ಆರೋಪ ಎದುರಿಸುತ್ತಿರುವ ಮೆಟಕೆಮ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಕಂಪನಿ ಸದರಿ ಪವಾರ್ ಕುಟುಂಬಕ್ಕೆ ಸೇರಿದ್ದಾಗಿದೆ.
ಸಚಿವ ಅಜಿತ್ ಪವಾರ್ ಅವರ ಸೋದರ ಜಯಂತ್ ಪವಾರ್ ಕಂಪನಿಯ ನಿರ್ದೇಶಕ. ಕಳೆದ ವರ್ಷ ಪ್ರಕರಣದ ತನಿಖೆ ಕೈಗೆತ್ತಿಕೊಂಡ ರಾಜ್ಯದ ಸಿಐಡಿ ಅಧಿಕಾರಿಗಳು ನ. 4ರಂದು ಉತ್ತರ ಕನ್ನಡದ ಆಂಕೋಲಾ ನ್ಯಾಯಾಲಯದಲ್ಲಿ ಮೆಟಕೆಮ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಕಂಪನಿ ವಿರುದ್ಧ FIR ದಾಖಲಿಸಿದ್ದರು.
ಪ್ರಕರಣದ ಸಂಬಂಧ ತಮ್ಮೆದುರು ಹಾಜರಾಗುವಂತೆ ಜಯಂತ್ ಪವಾರ್ ಗೆ ಲೋಕಾಯುಕ್ತ ಅಧಿಕಾರಿಗಳು 2 ಬಾರಿ ನೋಟಿಸ್ ನೀಡಿದ್ದರು. ಆದರೆ ಅವರು ಕ್ಯಾರೇ ಅಂದಿಲ್ಲ. ಇತರೆ ಕಂಪನಿಗಳ ಅಧಿಕಾರಿಗಳು ನಿರೀಕ್ಷಣಾ ಜಾಮೀನು ಪಡೆದರೂ ಮೆಟಕೆಮ್ ಕಂಪನಿಯ ಯಾವೊಬ್ಬರೂ ಇತ್ತ ಸುಳಿದಿಲ್ಲ.
ಬೇಲೇಕೇರಿಯಲ್ಲಿ ಅದಾನಿ ಕಂಪನಿಯ ಜೆಟ್ಟಿಯಲ್ಲಿ ಪ್ಲಾಟ್ ಹೊಂದಿದ್ದ ಮೆಟಕೆಮ್ ಕಂಪನಿಯ ಅದಿರನ್ನೂ ಲೋಕಾಯುಕ್ತ ಅಧಿಕಾರಿಗಳು ಜಪ್ತಿ ಮಾಡಿದ್ದರು. ಇದರಲ್ಲಿ 7312 ಮೆಟ್ರಿಕ್ ಟನ್ ಅದಿರನ್ನು ಬೆಳಗಾವಿ ಮೂಲದ ಡಿಬಿ ಬ್ರದರ್ಸ್ ಎಂಬ ಕಂಪನಿಗೆ ಮೆಟಕೆಮ್ ಮಾರಾಟ ಮಾಡಿದೆ.
ಅದಕ್ಕೆ ಪ್ರತಿಯಾಗಿ ಡಿಬಿ ಬ್ರದರ್ಸ್ ಕಂಪನಿಯು ಪವಾರ್ ಒಡೆತನದ ಕಂಪನಿಗೆ 3.72 ಕೋಟಿ ರೂ. ಮೊತ್ತವನ್ನು ಪುಣೆಯ ಸಂಗಮವಾಡಿಯಲ್ಲಿ ಶಾಖೆ ಹೊಂದಿರುವ ಸಾರಸ್ವತ ಕೋ ಆಪರೇಟೀವ್ ಸೊಸೈಟಿ ಮೂಲಕ ಸಂದಾಯ ಮಾಡಿರುವುದು ಬೆಳಕಿಗೆ ಬಂದಿದೆ.
ಬೇಲೇಕೇರಿ ಮತ್ತು ಕಾರವಾರ ಬಂದರುಗಳಿಂದ 2,000 ಕೋಟಿ ರೂ, ಗೂ ಅಧಿಕ ಮೌಲ್ಯದ ಕಬ್ಬಿಣದ ಅದಿರು ಅಕ್ರಮವಾಗಿ ವಿದೇಶಿ ಕಂಪನಿಗಳ ಪಾಲಾಗಿವೆ ಎಂಬುದು ಪ್ರಕರಣದ ತಿರುಳು.












Click it and Unblock the Notifications