ದಸರಾದಂದು ಮುತಾಲಿಕ್ ಅವರ ದುರ್ಗಾಸೇನೆ ಅಸ್ತಿತ್ವಕ್ಕೆ

ರಾಷ್ಟ್ರದ್ರೋಹಿಗಳ ವಿರುದ್ದ ಧ್ವನಿ ಎತ್ತಿ ಹಿಂದೂಪರ ಶಕ್ತಿಯಾಗಿ ಹೊರಹೊಮ್ಮಲು ಇದೇ ದಸರಾ ಹಬ್ಬದಂದು ದುರ್ಗಾಸೇನೆ ಅಸ್ತಿತ್ವಕ್ಕೆ ಬರಲಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಭಾನುವಾರ (ಸೆ 9) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮುತಾಲಿಕ್, ಕೇಂದ್ರ ಸರಕಾರ ಮುಸ್ಲಿಮರನ್ನು ಓಲೈಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಅಕ್ರಮವಾಗಿ ದೇಶಕ್ಕೆ ನುಸುಳಿ ದೇಶದ್ರೋಹಿ ಕೆಲಸ ಮಾಡುತ್ತಿದ್ದವರಿಗೆ ವೀಸಾ ಸರಳಿಕೆ ಮಾಡಿ ಅವರಿಗೆ ರಾಜ ಮಾರ್ಗ ಕಲ್ಪಿಸಿದೆ.
ಮುಂಬೈ ಸ್ಪೋಟದ ಆರೋಪಿ ದಾವೂದ್ ಇಬ್ರಾಹಿಮ್ ಕರಾಚಿಯಲ್ಲಿ ಅಡಗಿದ್ದಾನೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಅವನ ಬಗ್ಗೆ ಚರ್ಚಿಸದೆ ವೀಸಾ ಕುರಿತ ಒಪ್ಪಂದ ಮಾಡಿಕೊಂಡು ಬಂದಿದ್ದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ ಎಂದು ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಕರ್ನಾಟಕದಿಂದ ಈ ಕೂಡಲೇ ನಿಷೇದಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಸಿಮಿ ಸಂಘಟನೆಯ ಇನ್ನೊಂದು ಮುಖವೇ ಪಿಎಫೈ. ಕೇಂದ್ರ ಸರಕಾರ ವೀಸಾ ಒಪ್ಪಂದ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಗಳು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಕರಾವಳಿ ಪಟ್ಟಣ ಭಟ್ಕಳ ಉಗ್ರರಿಗೆ ಇನ್ನೊಂದು ಪಾಕಿಸ್ತಾನದಂತಾಗಿದೆ. ಜಗನ್ನಾಥ ಶೆಟ್ಟಿ ನೀಡಿದ ವರದಿ ಆದರಿಸಿ ಅಸೆಂಬ್ಲಿಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುತಾಲಿಕ್ ಆಗ್ರಹಿಸಿದ್ದಾರೆ.
ಈಗ ಬಂಧಿತರಾಗಿರುವ ಶಂಕಿತ ಉಗ್ರರ ಬಗ್ಗೆ ಮೃದು ಧೋರಣೆ ತಾಳಬಾರದು. ಇವರ ಹಿಂದೆ ದೊಡ್ಡ ಜಾಲವೇ ಇದೆ. ಇವರಿಗೆ ತರಬೇತಿ ನೀಡಿ ಬ್ಯಾಚ್ ಪ್ರಕಾರ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿತ್ತು ಎನ್ನುವ ಮಾಹಿತಿಯಿದೆ. ಇವರನ್ನು ಸೆರೆ ಹಿಡಿದ ಕರ್ನಾಟಕ ಪೋಲೀಸರ ಕೆಲಸ ಶ್ಲಾಘನೀಯ ಎಂದು ಮುತಾಲಿಕ್ ಹೇಳಿದ್ದಾರೆ.












Click it and Unblock the Notifications