ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರದ ಹೋಟೆಲಲ್ಲಿ ನಡೆದ ಒಂದು ಘಟನೆ

By ಸುನೀಲ್ ಕುಮಾರ್, ಬೆಂಗಳೂರು
|
Google Oneindia Kannada News

Why did Assam people come back to Bangalore
ಶನಿವಾರ, ಸೆಪ್ಟೆಂಬರ್ 8ರ ಮಧ್ಯಾಹ್ನ ಬೆಂಗಳೂರಿನ ಜಯನಗರದ 3ನೇ ಬ್ಲಾಕಿನಲ್ಲಿರುವ ಒಂದು ಹೋಟೆಲಿ(ದರ್ಶಿನಿ)ಗೆ ಊಟ ಮಾಡಲೆಂದು ಹೋಗಿದ್ದೆ. ಸಿಕ್ಕಾಪಟ್ಟೆ ರಶ್ಶು, ನಿಲ್ಲಲು ಕಾಲು ಇಡದಷ್ಟು ಜನಸಂದಣಿ. ಆ ಜನಸಂದಣಿಯ ನಡುವೆಯೂ ಪ್ಲಾಸ್ಟಿಲ್ ಟಬ್ಬನ್ನು ಹಿಡಿದುಕೊಂಡು ಓಡಾಡುತ್ತಿದ್ದ ಕೆಲ ಹುಡುಗರು ಕಣ್ಣಿಗೆ ಬಿದ್ದರು.

ಅನುಮಾನವೇ ಇಲ್ಲ, ಅವರೆಲ್ಲರೂ ಈಶಾನ್ಯ ಭಾರತದ ಅಸ್ಸಾಂ ರಾಜ್ಯದ ಹುಡುಗರು. ಪ್ಲಾಸ್ಟಿಕ್ ಟಬ್ಬನ್ನು ಹಿಡಿದು ಜನರು ಊಟ ಮಾಡಿ ಬಿಟ್ಟು ಪ್ಲೇಟುಗಳನ್ನು ಎತ್ತಿಕೊಳ್ಳುತ್ತ, ವಸ್ತ್ರದಿಂದ ಟೇಬಲ್ಲನ್ನು ಕ್ಲೀನ್ ಮಾಡುತ್ತ, ಒಂದು ಮೂಲೆಯಲ್ಲಿ ಇಟ್ಟ ತಿಂದಿಟ್ಟ ಪಾತ್ರೆ, ಲೋಟಗಳನ್ನು ತೊಳೆಯಲು ಒಯ್ಯುವ ಕೆಲಸದಲ್ಲಿ ನಿರತರಾಗಿದ್ದರು.

ಒಂದು ಹಂತದಲ್ಲಿ ಪ್ಲೇಟುಗಳು ಟೇಬಲ್ ಮೇಲೆ ಹಾಗೆಯೇ ಬಿದ್ದಿದ್ದವು, ಇತರರು ಅಲ್ಲಿ ತಮ್ಮ ತಟ್ಟೆ ಇಟ್ಟುಕೊಳ್ಳಲು ಕಾಯುತ್ತಿದ್ದರು. ಒಬ್ಬ ತಾಳ್ಮೆ ಕಳೆದುಕೊಂಡು ಕ್ಯಾಶಿಯರ್‌ನನ್ನು ಕರೆದು ದೂರು ನೀಡಿದ. ತಗಳ್ಳಪ್ಪ ಶುರುವಾಯಿತು ಕ್ಯಾಶಿಯರ್ ಬಾಯಿಯಿಂದ ಬೈಗುಗಳಗಳ ಬಹುಪರಾಕ್! "ಯಾಕಾದ್ರೂ ಬರ್ತಾರೋ ಈ ಬೋ... ನನ್ ಮಕ್ಳು, ಸರಿಯಾಗಿ ಕೆಲಸ ಮಾಡಲ್ಲ ಏನಿಲ್ಲ." ನಿಂತರೂ ಬೈಗುಳ, ಕುಂತರೂ ಬೈಗುಳ, ಸುಮ್ಮನಿದ್ದರೂ ಬೈಗುಳ!

ಸುಮ್ಮನೆ ಬೈಸಿಕೊಳ್ಳುತ್ತ ನಿಂತಿದ್ದ ಆ ಯಾರ ಮುಖದಲ್ಲಿಯೂ ಉತ್ಸಾಹ, ಕಳೆ ಇರಲಿಲ್ಲ. ಯಾಕೋ ಪಿಚ್ಚೆನಿಸಿತು. ಅಲ್ಲಿ ಬೈಸಿಕೊಂಡ ಯಾವ ಹುಡುಗರಿಗೂ ಕನ್ನಡ ಅರ್ಥವಾಗುತ್ತಿರಲಿಲ್ಲ. ಆದರೆ ಕ್ಯಾಶಿಯರ್ ಬಾಯಿಯಿಂದ ಬರುತ್ತಿದ್ದುದು ಮಾತ್ರ ಬೈಗುಳ ಎಂದು ಅರ್ಥವಾಗುವಂತಿತ್ತು ಅವರ ಮುಖದ ಭಾವ. ಯಾವ ಪುರುಷಾರ್ಥಕ್ಕೆ ಇವರೆಲ್ಲ ಬೆಂಗಳೂರಿಗೆ ವಾಪಸ್ ಬರಬೇಕಾಗಿತ್ತು ಅಂತ ಅಲ್ಲಿ ಕೆಲವರಿಗಾದರೂ ಅನ್ನಿಸಿರದಿದ್ದರೆ ಕೇಳಿ.

ನಿಜ, 'ಭಯೋತ್ಪಾದಕರ' ಬೆದರಿಕೆಗೆ ಅಂಜಿ ಅಸ್ಸಾಂಗೆ ವಾಪಸ್ ಹೋಗಿದ್ದ ಸಾವಿರಾರುಗಟ್ಟಲೆ ಜನ ತಂಡೋಪತಂಡವಾಗಿ ವಾಪಸ್ ಬರುತ್ತಿದ್ದಾರೆ. ಅವರಲ್ಲಿ ಅನೇಕರು ತಮ್ಮ ಹಳೆಯ ಕೆಲಸಗಳನ್ನು ಗಿಟ್ಟಿಸಿಕೊಂಡಿದ್ದರೆ, ಹಲವಾರು ಈಶಾನ್ಯ ಭಾರತದ ನಾಗರಿಕರು ಕೆಲಸಕ್ಕೆ ಇನ್ನೂ ಒದ್ದಾಡುತ್ತಿದ್ದಾರೆ. ಇವರಲ್ಲಿ ಅನೇಕರು ಹೋಟೆಲುಗಳಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದಾರೆ, ಅನೇಕರಿಗೆ ಹೋಟೆಲಲ್ಲಿ ಟೇಬರ್ 'ಸಾಪ್' ಮಾಡುವ ಕೆಲಸ. ವಸ್ತುಸ್ಥಿತಿ ಇದೇನಾ?

ಇವರೆಲ್ಲ ವಾಪಸ್ ಹೋಗಿದ್ದರಿಂದ ಬೇರೆ ವಿಧಿಯಿಲ್ಲದೆ ಅನೇಕ ಹೋಟೆಲುಗಳಲ್ಲಿ, ಕಾರ್ಖಾನೆಗಳಲ್ಲಿ, ಸೆಕ್ಯೂರಿಟಿ ಸಂಸ್ಥೆ ಮುಂತಾದವುಗಳಲ್ಲಿ ಅನ್ಯರನ್ನು ನೇಮಿಸಿಕೊಂಡಿದ್ದಾರೆ. ಇದರಿಂದಾಗಿ ಇವರು ಮರಳಿ ಬಂದಾಗ ಸಹಜವಾಗಿ ನಿರುದ್ಯೋಗಿಗಳಾಗಿದ್ದಾರೆ. ವಾಪಸ್ಸಂತೂ ಬಂದಾಗಿದೆ, ಹೊಟ್ಟೆಹೊರೆಯಲು ಏನಾದರೂ ಮಾಡಬೇಕಲ್ಲ ಎಂದು ಕಂಡಕಂಡ ಕೆಲಸಗಳಲ್ಲಿ, ಇಷ್ಟವಿರಲಿ ಇಲ್ಲದಿರಲಿ ಸೇರಿಕೊಳ್ಳುತ್ತಿದ್ದಾರೆ. ಬಹುತೇಕ ಅಸ್ಸಾಮೀಯರು ಹೋಟೆಲುಗಳಲ್ಲಿ ಮಾಣಿಗಳಾಗಿ, ಪಾತ್ರೆ ತೊಳೆಯುವವರಾಗಿ ದುಡಿಮೆಯಲ್ಲಿ ತೊಡಗಿದ್ದಾರೆ.

ವಾಪಸ್ ಬಂದ ಈಶಾನ್ಯ ಭಾರತದ ಜನರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರಾ ಎಂಬ ಭಾವನೆ ಬಂದರೆ ಆಶ್ಚರ್ಯವಿಲ್ಲ. ಪರಿಸ್ಥಿತಿ ಹೀಗಿದ್ದಾಗ, ಏನು ಮಾಡಬೇಕೆಂದು ಗೊತ್ತಾಗದೆ ತ್ರಿಶಂಕು ಸ್ಥಿತಿಯಲ್ಲಿ ಅನೇಕರು ಕಾಲ ಕಳೆಯುತ್ತಿದ್ದಾರೆ. ಕೆಲ ಸಂಸ್ಥೆಗಳು ಅವರಿಗೆ ಕೆಲಸ ಕೊಡಲು ಮುಂದೆ ಬಂದಿದ್ದರೂ, ಬಂಧು ಬಾಂಧವರನ್ನೆಲ್ಲ ಅಸ್ಸಾಂನಲ್ಲಿ ಬಿಟ್ಟುಬಂದಿರುವ ಇವರ ಬದುಕಿಗೆ ಬೆಂಗಳೂರಿನಲ್ಲಿ ಒಂದು ಅರ್ಥವಾದರೂ ಸಿಗುವುದಾ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ನೀವೇನಂತೀರಿ?

English summary
Why did Assam people come back to Bangalore? This question came to my mind when I saw few Assam people were subjected to insult by a hotel cashier in Jayanagar in Bangalore. It is true that the returned Assam young guys are not getting required job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X