ಬೇಲ್ ಗಾಗಿ ಡೀಲ್ : ಸೋಮಶೇಖರ ರೆಡ್ಡಿಗೆ ಜಾಮೀನು ಇಲ್ಲ

ಸೋಮಶೇಖರ ರೆಡ್ಡಿ, ಸುರೇಶ್ ಬಾಬು ಅಲ್ಲದೆ ಜಡ್ಜುಗಳಾದ ಪಟ್ಟಾಭಿ, ಚಲಪತಿರಾವ್, ಪ್ರಭಾಕರ ರಾವ್, ರೌಡಿಶೀಟರ್ ಯಾದಗಿರಿ ರಾವ್ ಅವರಿಗೂ ಜಾಮೀನು ಸಿಕ್ಕಿಲ್ಲ. ಎಲ್ಲಾ ಆರೋಪಿಗಳಿಗೆ ಸೆ.20ರ ತನಕ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಲಾಗಿದೆ.
ಶ್ರೀರಾಮುಲು ಅವರ ಅಣತಿಯಂತೆ ಬೇಲ್ ಗಾಗಿ ಡೀಲ್ ಕುದುರಿಸಲಾಯಿತು ಎಂಬ ಸುದ್ದಿಯಲ್ಲಿ ಹುರುಳಿಲ್ಲ ಎಂಬುದು ಶ್ರೀರಾಮುಲು ಅವರ ವಿಚಾರಣೆ ಬಳಿಕ ತಿಳಿದು ಬಂದಿದೆ.
ರೌಡಿಶೀಟರ್ ಯಾದಗಿರಿ ರಾವ್ ಗೆ 20 ಕೋಟಿ ರು ನೀಡುವಂತೆ ಶ್ರೀರಾಮುಲು ಹೇಳಿದ್ದರು. ನಂತರ ಉದ್ಯಮಿ ಸೂರ್ಯ ಪ್ರಕಾಶ್ ಬಾಬು ಅವರ ಮುಖಾಂತರ ಜಡ್ಜ್ ಗಳ ಸಂಪರ್ಕ ಸಾಧಿಸಲಾಯಿತು. ಯಾದಗಿರಿಗೆ 10 ಕೋಟಿ ರು ಅಡ್ವಾನ್ಸ್ ನೀಡಲಾಗಿತ್ತು ಎಂದು ಸುರೇಶ್ ಬಾಬು ಹೇಳಿದ್ದಾರೆ.
ಅದರಲ್ಲಿ 3 ಕೋಟಿ ರು ಗಳನ್ನು ಮಾತ್ರ ಜಡ್ಜ್ ಪಟ್ಟಾಭಿಗೆ ನೀಡಿದ್ದ ಉಳಿದ ಹಣವನ್ನು ಜೇಬಿಗಿಳಿಸಿಕೊಂಡಿದ್ದ. 20 ಕೋಟಿ ಡೀಲ್ ಪೈಕಿ ಎಸಿಬಿ ವಶಕ್ಕೆ 6.50 ಕೋಟಿ ರು ಸಿಕ್ಕಿದೆ. ಉಳಿದ ಹಣ ಹಾಗೂ ಡೀಲ್ ಕುದುರಿಸಲು ಹಣ ರವಾನೆ ಮಾಡಿದ ರೀತಿಯ ಬಗ್ಗೆ ಶ್ರೀರಾಮುಲು ಅವರನ್ನು ಎಸಿಬಿ ಪ್ರಶ್ನಿಸಿತ್ತು. ಆದರೆ, ಶ್ರೀರಾಮುಲು ಅವರು ಎಲ್ಲಾ ಆರೋಪಗಳಿಗೂ ಸಮರ್ಥ ಉತ್ತರ ನೀಡಿ ಹೊರ ಬಂದಿದ್ದರು.
ಈ ನಡುವೆ ಹೈದರಾಬಾದಿನ ಚೆರ್ಲಪಲ್ಲಿ ಜೈಲಿನಲ್ಲಿ ಬಂಧಿಯಾಗಿರುವ ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಜೈಲಲ್ಲೇ ಐಷಾರಾಮಿ ಜೀವನ ನಡೆಸಲು ಜೈಲು ಸಿಬ್ಬಂದಿಗೆ ಲಂಚ ನೀಡಲು ಇಟ್ಟುಕೊಂಡಿದ್ದ 15 ಸಾವಿರಕ್ಕೂ ಅಧಿಕ ನಗದು ವಶ ಪಡಿಸಿಕೊಂಡು ಕ್ಯಾಂಟೀನ್ ಊಟದ ವ್ಯವಸ್ಥೆ ರದ್ದುಪಡಿಸಲಾಗಿತ್ತು.
ಸೋಮಶೇಖರ ರೆಡ್ಡಿ ಅವರನ್ನು ನಾಲ್ಕು ದಿನಗಳ ವಿಚಾರಣೆಗಗಿ ಕರೆಸಿಕೊಂಡಿದ್ದಕ ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ ಸೋಮವಾರ (ಆ.6) ಸಂಜೆ ತನ್ನ ವಶಕ್ಕೆ ತೆಗೆದುಕೊಂಡಿತ್ತು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಡ್ಜುಗಳಾದ ಪಟ್ಟಾಭಿ, ಚಲಪತಿರಾವ್, ಪ್ರಭಾಕರ ರಾವ್, ಲಕ್ಷ್ಮಿನರಸಿಂಹ ರಾವ್, ಪಟ್ಟಾಭಿ ಪುತ್ರ ರವಿಚಂದ್ರ, ರೌಡಿಶೀಟರ್ ಯಾದಗಿರಿ ರಾವ್ ಅವರನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಿದ ನಂತರ ಪ್ರಕರಣದ ಆರೋಪಿಗಳಾದ ಕರ್ನಾಟಕ ಶಾಸಕರಾದ ಸೋಮಶೇಖರ ರೆಡ್ಡಿ, ಸುರೇಶ್ ಬಾಬು ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.
ಎಲ್ಲಾ ಆರೋಪಿಗಳ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(1)(ಸಿ) ಹಾಗೂ 13(1)(ಡಿ)(ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ), ಐಪಿಸಿ ಸೆಕ್ಷನ್ 120ಬಿ(ಒಳಸಂಚು, ಪಿತೂರಿ), 409(ವಿಶ್ವಾಸ ದ್ರೋಹ), 420(ವಂಚನೆ) ಹಾಗೂ 417(ವಂಚನೆಗೆ ಪ್ರೋತ್ಸಾಹ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications