ಗುಂಡ್ಯ ವಿದ್ಯುತ್ ಯೋಜನೆ ಹಿಂದೆ ಬಿದ್ದ ಶೋಭಾ
ಶಿರಾಡಿ ಘಾಟಿಗೆ ಹೊಂದಿಕೊಂಡಂತೆ ಇರುವ ಗುಂಡ್ಯದಲ್ಲಿ ಜಲವಿದ್ಯುತ್ ಯೋಜನೆಗೆ ಪರಿಸರವಾದಿಗಳು ಹಿಂದಿನಿಂದ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಪರಿಸರ ಇಲಾಖೆಗೂ ಅನುಮತಿ ನೀಡಿಲ್ಲ. ಅದರೆ, ರಾಜ್ಯ ಸರ್ಕಾರ ಮಾತ್ರ ಹೇಗಾದರೂ ಈ ಜಲವಿದ್ಯುತ್ ಯೋಜನೆ ಜಾರಿಗೆ ತರುವ ಒತ್ತಡದಲ್ಲಿದೆ.
ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಗುಂಡ್ಯ ಜಲವಿದ್ಯುತ್ ಯೋಜನೆಗೆ ಶೀಘ್ರ ಪರಿಸರ ಇಲಾಖೆ ಸಮ್ಮತಿ ನೀಡಬೇಕು ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಖಾತೆ ಸಚಿವೆ ಜಯಂತಿ ನಟರಾಜನ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದಲ್ಲದೆ ಗೊದ್ಲಾ ಮತ್ತು ಯಡ್ಲಾಪುರ ಉಷ್ಣ ವಿದ್ಯುತ್ ಸ್ಥಾವರಕ್ಕೂ ಪರಿಸರ ಇಲಾಖೆಯಿಂದ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಛತ್ತೀಸ್ ಗಢದ ಗೋದ್ಲಾ ಉಷ್ಣ ವಿದ್ಯುತ್ ಸ್ಥಾವರದ ವಿದ್ಯುತ್ ಉತ್ಪಾದನೆಗೆ ಕರ್ನಾಟಕ ಸರ್ಕಾರ ಹಣ ತೊಡಗಿಸಿದೆ.
ಕಲ್ಲಿದ್ದಲು ಸಮಸ್ಯೆಯಿಂದ ಬಳಲುತ್ತಿರುವ ಯುಪಿಎ ಸರ್ಕಾರದ ಬಳಿ ಹೋಗಿ ಇಂಧನ ಸಚಿವೆ ಶೋಭಾ ಅವರು ಕಲ್ಲಿದ್ದಲು ಒದಗಿಸುವಂತೆ ಕೋರಿದ್ದಾರೆ. ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರನ್ನು ಭೇಟಿ ಮಾಡಿದ ಶೋಭಾ, ವಿದ್ಯುತ್ ಸ್ಥಾವರಕ್ಕೆ ಅಗತ್ಯ ಕಲ್ಲಿದ್ದಲು ಪೂರೈಸುವಂತೆ ಕೇಳಿದ್ದಾರೆ.
ನಂತರ ಕೇಂದ್ರ ಇಂಧನ ಸಚಿವ ಎಂ ವೀರಪ್ಪ ಮೊಯ್ಲಿ ಅವರನ್ನು ಭೇಟಿ ಮಾಡಿ, ರಾಯಚೂರು ಶೋಲಾಪುರ, ನರೇಂದ್ರ-ಕೊಲ್ಹಾಪುರ 765 ಕೆವಿ ಲೈನನ್ನು ಆದಷ್ಟು ಬೇಗ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಸುಮಾರು 800 ಕೋಟಿ ರು ವೆಚ್ಚದ ಈ ಜಲವಿದ್ಯುತ್ ಯೋಜನೆಯಲ್ಲಿ ಎರಡು 200 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕಗಳು ಮಳೆಗಾಲದಲ್ಲಿ ಮಾತ್ರ ಕಾರ್ಯ ನಿರ್ವಹಿಸಲಿದೆ.
ಹೊಂಗಡಹಳ್ಳಡ್ಯಾಂ ನಿರ್ಮಿಸುವುದರಿಂದ ಅಪಾರ ಪ್ರಮಾಣದ ಅರಣ್ಯ ಪ್ರದೇಶ ನಾಶವಾಗುತ್ತದೆ. ಶಿರಾಡಿ ಘಾಟ್, ಕೆಂಪು ಹೊಳೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿನ ಜೀವ ವೈವಿಧ್ಯತೆ ಧಕ್ಕೆ ಉಂಟಾಗಲಿದೆ ಎಂದು ಪರಿಸರವಾದಿಗಳು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.