ಛೀ! ಶಾಸಕರ ಮೋಜಿನ ಟೂರಿಗೆ ಗ್ರೀನ್ ಸಿಗ್ನಲ್

ಇನ್ಮುಂದೆ ಯಾವುದೇ ಶಾಸಕರ ಪ್ರವಾಸಕ್ಕೆ ಹೋಗದಂತೆ ತಡೆಯಬೇಕು ಎಂದು ಸಮಿತಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದರು. ಆದರೆ, ಈ ಪ್ರಕರಣ ಶೆಟ್ಟರ್ ಅವರ ಕೈಮೀರಿ ಬೆಳೆದಿದ್ದು, ಪೂರ್ವನಿಗದಿಯಂತೆ ಇಲ್ಲವೇ ಕೆಲಕಾಲ ಮುಂದೂಡಿಯಾದರೂ ಶಾಸಕರು ಟೂರ್ ಹೋಗುವುದು ಖಾತ್ರಿಯಾಗಿದೆ.
19 ಶಾಸಕರ ಎರಡನೇ ತಂಡ ಸೆ. 26ರಂದು ರಷ್ಯಾ ಮತ್ತು ಯುರೋಪ್ ಖಂಡಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಸಿಎಂ ಜಗದೀಶ್ ಶೆಟ್ಟರ್ ಇದಕ್ಕೆ ತಡೆ ಒಡ್ಡಿದ್ದರು. ಆದರೆ, ಟೈಮ್ಸ್ ನೌ ವರದಿ ಪ್ರಕಾರ, 19 ಶಾಸಕರು, ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫಿನ್ಲೆಂಡ್, ರಷ್ಯಾ, ಈಜಿಪ್ಟ್, ದುಬೈ ಹಾಗೂ ಇಸ್ರೇಲ್ ಗೆ ತೆರಳಲು ಸ್ಪೀಕರ್ ಬೋಪಯ್ಯ ಒಪ್ಪಿಗೆ ಸೂಚಿಸಿದ್ದಾರೆ.
ಈ ನಡುವೆ ಹಾಲಿ ಪ್ರವಾಸ ನಿರತ 12 ಶಾಸಕರು ತಮ್ಮ ಪ್ರವಾಸ ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಾಸ್ ಆಗುವಂತೆ ಸಿಎಂ ಜಗದೀಶ್ ಶೆಟ್ಟರ್ ಆದೇಶ ಹೊರಡಿಸಿದ್ದರೂ ಶಾಸಕರು ಸ್ವದೇಶಕ್ಕೆ ಮರಳದೆ ಪ್ರವಾಸದ ಮೋಜು ಮಸ್ತಿಯಲ್ಲಿ ಮಗ್ನರಾಗಿದ್ದಾರೆ.
ರಾಜ್ಯದ 176 ತಾಲೂಕುಗಳ ಪೈಕಿ 146 ತಾಲೂಕುಗಳು ತೀವ್ರ ಬರ ಎದುರಿಸುತ್ತಿರಬೇಕಾದರೆ ಸಾರ್ವಜನಿಕರ ದುಡ್ಡಿನಲ್ಲಿ ಶಾಸಕರ ವಿದೇಶ ಪ್ರವಾಸ ಮಾಡುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
'ಶಾಸಕರ ಪ್ರವಾಸದಿಂದ ಪ್ರಪಂಚವೇನೂ ಮುಳುಗಿ ಹೋಗೊಲ್ಲ, ಉಗ್ರ ಕಸಬ್ ಗೆ ಭದ್ರತೆ ಒದಗಿಸಲು 25 ಕೋಟಿ ರು ಖರ್ಚು ಮಾಡಲಾಗುತ್ತೆ. ಶಾಸಕರು ಟೂರ್ ಹೋಗಬಾರದು ಎಂದು ಅಸಂಬಂದ್ದ ಹೇಳಿಕೆ ನೀಡಿರುವ ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ ಸಿ ಪಾಟೀಲ್ ಸೇರಿದಂತೆ 12 ಮಂದಿ ಶಾಸಕರು ಆಗಸ್ಟ್ 30ರಿಂದ ಸೆಪ್ಟಂಬರ್ 14ರ ವರೆಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಯೋಗೀಶ್ ಭಟ್ ನೇತೃತ್ವದಲ್ಲಿ ಇನ್ನೊಂದು ತಂಡ ಸೆಪ್ಟಂಬರ್ 26ರಿಂದ ಅಕ್ಟೋಬರ್ 14ರ ವರೆಗೆ ಸದ್ದಿಲ್ಲದೇ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಆದರೆ ಸ್ಪೀಕರ್ ಬೋಪಯ್ಯ ವಿದೇಶ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿರುವುದನ್ನು ಸಾಕ್ಷಿ ಸಮೇತ ಬಹಿರಂಗಪಡಿಸಲಾಗಿದೆ.












Click it and Unblock the Notifications