ಕೆಎಂಎಫ್ ರೆಡ್ಡಿ ಮೇವು ಹಗರಣ ಬರೀ 10 ಕೋಟಿ

ಬೇಲ್ ಗಾಗಿ ಡೀಲ್ ಪ್ರಕರಣ ಹಾಗೂ ಕೆಎಂಎಫ್ ಮೇವು ಹಗರಣ ಆರೋಪ ಹೊತ್ತಿರುವ ಸೋಮಶೇಖರ್ ರೆಡ್ಡಿ ಅವರನ್ನು ತಕ್ಷಣವೇ ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಅಧ್ಯಕ್ಷ ಎಸ್ ಆರ್ ಹಿರೇಮಠ್ ಆಗ್ರಹಿಸಿದ್ದಾರೆ.
ಕಳಪೆ ಗುಣಮಟ್ಟದ ಜಾನುವಾರುಗಳ ಹಿಂಡಿ ಖರೀದಿ ಮೂಲಕ ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಅವರು 10 ಕೋಟಿ ರು. ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕೆಎಂಎಫ್ಗೆ ಪ್ರತಿ ತಿಂಗಳು 3,500 ಮೆಟ್ರಿಕ್ ಟನ್ ಹತ್ತಿಬೀಜದ ಹಿಂಡಿಯ ಅಗತ್ಯವಿದೆ. ಸಾಮಾನ್ಯವಾಗಿ ಜಾನುವಾರುಗಳ ಮೇವಿನ ಉತ್ಪಾದನೆಗೆ ಹತ್ತಿಬೀಜದ ಹಿಂಡಿಯನ್ನು ಬಳಸಲಾಗುತ್ತದೆ.
ಆದರೆ, ಲಭ್ಯ ಮಾಹಿತಿ ಪ್ರಕಾರ ಅಗತ್ಯಕ್ಕಿಂತ ಸುಮಾರು 8 ಪಟ್ಟು ಹೆಚ್ಚು ಮೇವನ್ನು ಕೆಎಂಎಫ್ ಖರೀದಿಸಿದೆ. ಕಳೆದ ಜುಲೈ ತಿಂಗಳನಲ್ಲೇ ಆಂಧ್ರ ಪ್ರದೇಶ ಮೂಲದ ವಿತರಕರಿಗೆ 30 ಕೋಟಿ ರು. ಪಾವತಿಸಿ ಸುಮಾರು 28,000 ಮೆಟ್ರಿಕ್ ಟನ್ ಹತ್ತಿಬೀಜದ ಹಿಂಡಿಯನ್ನು ಖರೀದಿಸಲಾಗಿದೆ.
ಬಿ.ಜೆ.ಪುಟ್ಟಸ್ವಾಮಿ ಪ್ರತಿಕ್ರಿಯೆ: ಹಗರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಬಿಜೆ ಪುಟ್ಟಸ್ವಾಮಿ, ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸಂಬಂಧಿಸಿದಂತೆ ಇದು ಮೊದಲ ಅತಿದೊಡ್ಡ ಹಗರಣವಾಗಿದೆ, ಹೆಚ್ಚು ಬೆಲೆಗೆ ಕೆಎಂಎಫ್ ಮೇವನ್ನು ಖರೀದಿಸಿರುವುದಕ್ಕೆ ಸಂಬಂಧಿಸಿದಂತೆ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.ದಾಖಲೆಗಳ ಪ್ರಕಾರ ಅವ್ಯಹಾರ ಕಂಡು ಬಂದರೆ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕೆಎಂಎಫ್ನ ನಿರ್ದೇಶಕರಾಗಿರುವ ಪಿ.ನಾಗರಜು,ಜಿ.ಪಿ.ರೇವಣ್ಣ ಸಿದ್ದಪ್ಪ,ಎಸ್.ಸಿ.ಅಶೋಕ್ ಪ್ರಕಾರ, ಪ್ರತಿ ಮೆಟ್ರಿಕ್ ಟನ್ ಹತ್ತಿಬೀಜದ ಹಿಂಡಿಗೆ ಅಂದಾಜು ರೂ. 11,000ದಿಂದ ರೂ. 14,000ವಿದೆ. ಆದರೆ ಜುಲೈ 27ರಂದು ಪ್ರತಿ ಟನ್ ಹಿಂಡಿಗೆ ರೂ. 27,000ದಂತೆ 14,000 ಮೆಟ್ರಿಕ್ ಟನ್ ಮತ್ತು ಜುಲೈ 12ರಂದು ಪ್ರತಿ ಟನ್ಗೆ ರೂ. 20,650ರಂತೆ 14,000 ಮೆಟ್ರಿಕ್ ಟನ್ ಹಿಂಡಿಯನ್ನು ಖರೀದಿಸಲಾಗಿದೆ
ಈ ವರ್ಷದ ಮೊದಲ ನಾಲ್ಕು ತಿಂಗಳು ಒಕ್ಕೂಟದ ನಿಯಮಗಳಂತೆ ಮೇವು ಖರೀದಿಸಲಾಗಿದೆ. ಆದರೆ ಜುಲೈ ತಿಂಗಳೊಂದರಲ್ಲಿಯೇ ಕಳಪೆ ಗುಣಮಟ್ಟದ ಹಿಂಡಿಯನ್ನು ದುಬಾರಿ ಬೆಲೆಗೆ ಖರೀದಿಸಲಾಗಿದ್ದು, ಇದರಲ್ಲಿ ರೂ. 10 ಕೋಟಿ ಕಿಕ್ಬ್ಯಾಕ್ ಬಂದಿರುವ ಸಾಧ್ಯತೆಗಳಿವೆ ಎಂದು ನಾಗರಾಜು ಆರೋಪಿಸಿದ್ದಾರೆ.
ಕೆಎಂಎಫ್ ವಾರ್ಷಿಕವಾಗಿ ಹತ್ತಿಬೀಜದ ಹಿಂಡಿಯ ಸಂಸ್ಕರಣೆಗೆ ರೂ. 30 ಕೋಟಿ ವಿನಿಯೋಗಿಸುತ್ತದೆ. ಆದರೆ ಈ ವಿವಾದಾತ್ಮಕ ವ್ಯವಹಾರದಿಂದ ಒಕ್ಕೂಟ ಕೇವಲ ಜುಲೈ ತಿಂಗಳೊಂದರಲ್ಲಿಯೇ ಹೆಚ್ಚವರಿಯಾಗಿ ರೂ. 30 ಕೋಟಿ ತೆತ್ತಿರುವುದು ಒಕ್ಕೂಟಕ್ಕಿದ್ದ ಹೆಸರನ್ನು ಕೆಡಿಸಿದೆ ಎಂದು ನಿರ್ದೇಶಕ ನಾಗರಾಜು ಹೇಳಿದರು.
ಬೆಂಗಳೂರು, ಕೆಎಂಎಫ್, ಧಾರವಾಡ, ಗುಬ್ಬಿ ಮತ್ತು ಹಾಸನದಲ್ಲಿ ಉತ್ತಮ ಗುಣಮಟ್ಟದ ಪಶು ಆಹಾರ ತಯಾರಿಕಾ ಘಟಕಗಳನ್ನು ಹೊಂದಿದ್ದು, ಹತ್ತಿಬೀಜದ ಹಿಂಡಿಯ ಹಗರಣಕ್ಕೆ ಸಂಬಂಧಿಸಿದಂತೆ ಮೇವು ಉತ್ಪಾದನೆಗೆ ಬಳಸುವ ಇತರೆ ವಸ್ತುಗಳ ಖರೀದಿಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಒಕ್ಕೂಟದ ನಿರ್ದೇಶಕರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಜನಾರ್ದನ ರೆಡ್ಡಿ ಬೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ ಕೆಎಂಎಫ್ ಅಧ್ಯಕ್ಷರೂ ಆಗಿರುವ ಸೋಮಶೇಖರ ರೆಡ್ಡಿ ಅವರ ಸಹಿ ಬಿದ್ದ ಮೇಲೆ ಮೇವು ಖರೀದಿಯಾಗಿರುವುದರಿಂದ ಸರ್ಕಾರ ಈ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸೋಮಶೇಖರ ರೆಡ್ಡಿ ಕೆಳಗಿಳಿಯಬೇಕು ಎಂದು ಪುಟ್ಟಸ್ವಾಮಿ ಅವರು ಈ ಮುಂಚೆ ಹೇಳಿಕೆ ನೀಡಿ ನಂತರ ನಾನು ಹಾಗೆ ಹೇಳೇ ಇಲ್ಲ ಎಂದು ಕೈ ಬಾಯಿ ಆಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.











Click it and Unblock the Notifications