ಬರ ಪ್ರವಾಸ ಹೊರಟ ಸದಾ 'ಆನಂದ' ತಂಡ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದ ಗೌಡರ ಮಧ್ಯೆ ಪೈಪೋಟಿ ಆರಂಭವಾಗಿದೆ. ಯಡಿಯೂರಪ್ಪ ನೇತೃತ್ವದ ಬರ ಪ್ರವಾಸಕ್ಕೆ ಸಡ್ಡು ಹೊಡೆಯಲು ಸದಾನಂದ ಗೌಡ ಮಂಗಳವಾರ (ಆ.28) ದಿಂದ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ.
ಸದಾನಂದ ಗೌಡರು ಮೈಸೂರಿನ ಚಾಮುಂಡಿ ಬೆಟ್ಟ ದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದು, ಅವರೊಂದಿಗೆ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೆರಳಲಿದ್ದಾರೆ.ಮೊದಲಿಗೆ ಹುಣಸೂರು ಮತ್ತು ಎಚ್ಡಿ ಕೋಟೆ ತಾಲೂಕು ಗಳಲ್ಲಿ ಪ್ರವಾಸ ಅವರಿಬ್ಬರು ಮಾಡಲಿದ್ದಾರೆ. ನಂತರ ಪಿರಿಯಾಪಟ್ಟಣ, ನಂಜನಗೂಡು ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ.
ಮೈಸೂರು ಪ್ರವಾಸದ ಬಳಿಕ ಬುಧವಾರ ರಾಮನಗರ ಜಿಲ್ಲೆಯಲ್ಲಿ ಬರ ಪ್ರವಾಸ ಮಾಡಲಿದ್ದಾರೆ. ಸೆಪ್ಟೆಂಬರ್ 4ರಂದು ಕೊಡಗು ಜಿಲ್ಲೆ, 10ರಂದು ಗುಲ್ಬರ್ಗಾ ಮತ್ತು ಯಾದಗಿರಿ, 11ರಂದು ಬೀದರ್ ಹಾಗೂ 12ರಂದು ರಾಯಚೂರು, ನಂತರ ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಲಿದ್ದಾರೆ.
ಗುರುವಾರ ನಿಗದಿಯಾಗಿದ್ದ ಕೊಡಗು ಜಿಲ್ಲೆಯ ಪ್ರವಾಸ ಸೆ.4ಕ್ಕೆ ಮುಂದೂಡಲ್ಪಟ್ಟಿದೆ ಎನ್ನಲಾಗಿದೆ. ಜತೆಗೆ ಸೆ.8ರಿಂದ 10ರವರೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಗುಲ್ಬರ್ಗ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸದಾನಂದಗೌಡರು ಪ್ರವಾಸ ನಡೆಸಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಸಂಸತ್ ಅಧಿವೇಶನ ಮುಗಿದ ನಂತರ ಅಂದರೆ, ಸೆಪ್ಟೆಂಬರ್ ಎರಡನೇ ವಾರದಲ್ಲಿ ಬರ ಪ್ರವಾಸ ಕೈಗೊಳ್ಳಲಿದ್ದಾರೆ.
ಅನಂತಕುಮಾರ್ ಹಾಗೂ ಆರ್ ಅಶೋಕ್ ನೇತೃತ್ವದ ತಂಡ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿ ಅಧ್ಯಯನ ನಡೆಸಲಿದೆ.
ಆಡಳಿತಾರೂಢ ಬಿಜೆಪಿ ಮೂರು ತಂಡಗಳು ಕೈಗೊಂಡಿರುವ ಬರ ಪ್ರವಾಸದ ಬಗ್ಗೆ ಲೇವಡಿ ಮಾಡಿರುವ ಕಾಂಗ್ರೆಸ್ ಪಕ್ಷ ತಾನು ಕೂಡಾ ಮತ್ತೊಮ್ಮೆ ಪಾಂಚಜನ್ಯ ಮೊಳಗಿಸಿ ಬರ ಪ್ರವಾಸ ಕೈಗೊಳ್ಳುವುದಾಗಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬರ ಪ್ರವಾಸ ಆರಂಭವಾಗಿದೆ. ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿ ಅಧ್ಯಯನ ನಡೆಸಿದ್ದಾರೆ.











Click it and Unblock the Notifications