ಪಾವಗಡ ಸ್ವಾಮೀಜಿ ಸೇವೆಗೆ ಯಡಿಯೂರಪ್ಪ ಪ್ರಶಂಸೆ

ಬರಪೀಡಿತ ಪ್ರದೇಶಗಳಿಗೆ ತುಮಕೂರಿನಿಂದ ಪ್ರವಾಸ ಆರಂಭಿಸಿರುವ ಯಡಿಯೂರಪ್ಪ ಅವರು, ಆಗಸ್ಟ್ 21ರಂದು ರಾತ್ರಿ ಪಾವಗಡದ ಸ್ವಾಮಿ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ಶ್ರೀ ಸ್ವಾಮಿ ಜಪಾನಂದಜಿಯವರ ನೇತೃತ್ವದಲ್ಲಿ ಅತ್ಯಂತ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಗುಣಮಟ್ಟದ ಮೇವನ್ನು ಉಚಿತವಾಗಿ ರೈತಜನರಿಗೆ ವಿತರಿಸುತ್ತಿರುವುದನ್ನು ನೋಡಿ ಸಂತಸಪಟ್ಟರು.
ಆಗಸ್ಟ್ 21ರಂದು ಒಂದೇ ದಿನ 540 ಮಂದಿ ರೈತರು ಆಗಮಿಸಿ ಮೇವು ಪಡೆದಿರುವುದನ್ನು ಗಮನಿಸಿ, ಆಶ್ಚರ್ಯ ವ್ಯಕ್ತಪಡಿಸಿದರು. ಸುಮಾರು ಅರ್ಧ ಗಂಟೆ ಕಾಲ ವಿವೇಕಾನಂದ ಆಸ್ಪತ್ರೆಯಲ್ಲಿದ್ದ ಯಡಿಯೂರಪ್ಪ ಅವರು, ಆಶ್ರಮದ ವತಿಯಿಂದ ನಡೆಯುತ್ತಿರುವ ಯಶಸ್ವಿ ಉಚಿತ ಮೇವು ವಿತರಣಾ ಕಾರ್ಯದ ರೀತಿ-ನೀತಿಗಳ ಬಗ್ಗೆ ಶ್ರೀ ಸ್ವಾಮಿ ಜಪಾನಂದಜಿಯವರಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ, ಚಿತ್ರದುರ್ಗದ ಲೋಕಸಭಾ ಸದಸ್ಯ ಜನಾರ್ದನ ಸ್ವಾಮಿ, ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಮೊದಲಾದವರು ಇದ್ದರು. ಆ.22ರಂದು ಯಡಿಯೂರಪ್ಪನವರು ಚಿತ್ರದುರ್ಗಕ್ಕೆ ತೆರಳಿ ಅಲ್ಲಿ ಬರಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆಯಲಿದ್ದಾರೆ.
ಸ್ವಾಮೀಜಿಗೆ ಪ್ರಶಸ್ತಿ : ಮಕ್ಕಳ ಹಿತರಕ್ಷಣೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಅನುಪಮವಾದ ಸೇವೆ ಸಲ್ಲಿಸುತ್ತಿರುವ ಶ್ರೀ ಸ್ವಾಮಿ ಜಪಾನಂದಜಿ ಅವರಿಗೆ ಕೇಂದ್ರ ಸರ್ಕಾರದ 'ರಾಜೀವ್ ಗಾಂಧಿ ಮಾನವ ಸೇವಾ' ಪ್ರಶಸ್ತಿ ಲಭಿಸಿದೆ. ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಈ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿದೆ.












Click it and Unblock the Notifications