ಸ್ವತಂತ್ರ ದಿನಾಚರಣೆ ಯಡಿಯೂರಪ್ಪ ಧ್ವಜಾರೋಹಣ

ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಯಡಿಯೂರಪ್ಪ ಅವರು ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ. ಆದರೆ, ಈ ಶುಭ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಮಾತ್ರ ಗೈರು ಹಾಜರಾಗುವುದು ಖಾತ್ರಿಯಾಗಿದೆ. ಬಿಜೆಪಿ ಕಚೇರಿ ಪ್ರಕಟಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಹೆಸರು ನಾಪತ್ತೆಯಾಗಿದೆ.
ಇದು ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಪರಿಗಣಿಸಲು ಸದಾನಂದ ಗೌಡರ ಬೆಂಬಲಿಗರು ಸಿದ್ಧರಿಲ್ಲ. ಯಡಿಯೂರಪ್ಪ ಅವರ ಅಣತಿಯಂತೆ ಬಿಜೆಪಿ ರಾಜ್ಯ ಘಟಕ ಮಾಡಿರುವ ಅಪಮಾನ ಎಂದೇ ಭಾವಿಸಿದ್ದಾರೆ.
ಸಿಎಂ ಆಗಿ ಜಗದೀಶ್ ಶೆಟ್ಟರ್ ಅವರು ಮೊದಲ ಬಾರಿಗೆ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಉಳಿದಂತೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ತ್ರಿವರ್ಣ ಧ್ವಜಕ್ಕೆ ವಂದಿಸಲಿದ್ದಾರೆ.
ತಾಲೀಮು ಪೂರ್ಣ: ಸ್ವತಂತ್ರ ದಿನದ ಅಂಗವಾಗಿ ನಡೆಯಲಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ಪೂರ್ಣಗೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಒದಗಿಸಲಾಗಿದೆ. ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಪರೀಶೀಲಿಸಲು ಸೋಮವಾರ(ಆ.13) ಸಂಜೆ ಬಿಬಿಎಂಪಿ ಆಯುಕ್ತ ಶಂಕರ ಲಿಂಗೇಗೌಡ, ಮೇಯರ್ ವೆಂಕಟೇಶ್ ಮೂರ್ತಿ ಹಾಗೂ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಪೆರೇಡ್ ಮೈದಾನವನ್ನು ವೀಕ್ಷಿಸಿದರು.
ಜಗದೀಶ್ ಶೆಟ್ಟರ್ ಅವರು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ. ನಂತರ ಪಥ ಸಂಚಲನ ನಡೆಯಲಿದೆ. ಶೆಟ್ಟರ್ ಅವರು ವಂದನೆ ಸ್ವೀಕರಿಸಲಿದ್ದಾರೆ. 2,500ಕ್ಕೂ ಅಧಿಕ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ 2000 ಪೊಲೀಸರನ್ನು ನಿಯೋಜಿಲಾಗಿದೆ. ಸಂಚಾರ ದಟ್ಟಣೆ ತಡೆಗಟ್ಟಲು 750 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಹೇಳಿದರು.
ಮೈದಾನದ ಸುತ್ತಲೂ 38 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭಯೋತ್ಪಾದನೆ ಚಟುವಟಿಕೆ ಬಗ್ಗೆ ಗುಪ್ತಚರ ಮಾಹಿತಿ ಹೊರಬಿದ್ದಿಲ್ಲ ಆದರೂ, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ತುರ್ತು ಸೇವೆ ಒದಗಿಸಲು 30 ಆಸ್ಪತ್ರೆಗಳು, 90 ನರ್ಸ್ ಗಳ ಸೇವೆಯನ್ನು ಪಡೆಯಲಾಗಿದೆ. 15 ಬ್ಲಡ್ ಬ್ಯಾಂಕ್ ಗಳ ಜೊತೆ ಸಂಪರ್ಕ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಅಯ್ಯಪ್ಪ ಅವರು ಹೇಳಿದರು.












Click it and Unblock the Notifications