'ಅಡ್ಡವಾಣಿ' ವಿರುದ್ಧ ಕಿಡಿಕಾರಿ 'ಹಗುರ'ವಾದ ಪರಮೇಶ್ವರ್ ಜಿ
ಬುಧವಾರ ಲೋಕಸಭೆಯಲ್ಲಿ ಕೇಳಿಬಂದ ಅಡ್ಡವಾಣಿ ಮತ್ತು ತದನಂತರ ನಡೆದ ವಾಕ್ಸಮರವನ್ನು ನೆನಪಿಸಿಕೊಳ್ಳುತ್ತಾ 60ರ ಹರೆಯದ ಡಾ. ಪರಮೇಶಿ ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.
ತುಂಬು ಲಹರಿಯಲ್ಲಿದ್ದ ಪರಮೇಶಿ ಸಾಹೇಬರು ಮುಂದಿನ ಸಾಲಿನ ನಾಯಕರ ಚಪ್ಪಾಳೆಯಿಂದ ಪ್ರೇರಣೆಗೊಂಡು ಯುದ್ಧ ಗೆದ್ದ ಸಂತೋಷದಲ್ಲಿ 'ಯುಪಿಎ ಸರ್ಕಾರವನ್ನು 'ಅಕ್ರಮ ಸಂತಾನ' ಎಂದು ಹೇಳಿರುವ ಆ ಅಡ್ವಾಣಿ ಮುಂಡೆದಕ್ಕೆ ಏನು ಗೊತ್ತಿದೆ'? ಎಂದು ಓತಪ್ರೋತವಾಗಿ ಸಂಬೋಧಿಸಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದ ಪರಮೇಶಿ, 'ಅವರು ಪಾಕಿಸ್ತಾನದಿಂದ ಬಂದವರು. ದೇಶದ ಬಗ್ಗೆ ಅವರಿಗೇನು ಗೊತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಕುರಿತು ನೀಡಿದ ಪ್ರತಿಕ್ರಿಯೆ ನೋಡಿ ಅಡ್ವಾಣಿ ಪರವಾಗಿಲ್ಲ ಅಂದ್ಕೊಂಡಿದ್ದೆ. ಆದರೆ, ಈಗ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ' ಎಂದೂ ಟೀಕಿಸಿದರು.
ತಾನೊಬ್ಬ ಪುರಾತನ ಪಕ್ಷದ ನಾಯಕ, ತನ್ನ ಪಕ್ಷದಲ್ಲಿ ಆಡ್ವಾಣಿಗಿಂತ ಘನಂದಾರಿ ಮುಂಡೇವು ಇದಾವೆ, ಅಷ್ಟೇ ಏಕೆ ತಮ್ಮ ಪಕ್ಷದ ಖುದ್ದು ಆಧಿನಾಯಕಿಯೇ ವಿದೇಶದಿಂದ ಬಂದವರು ಎಂಬುದನ್ನು ಮರೆತು ಫುಲ್ ಜೋಷ್ ನಲ್ಲಿ ಅಡ್ಡವಾಣಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಅವರು ಹೀಗೆ ವ್ಯಂಗ್ಯದ ಮಾತುನಗಳನ್ನಾಡಿ 'ಹಗುರ'ವಾದರು.
ಅಂದಹಾಗೆ ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಚಳವಳಿ ಸ್ಮರಣಾರ್ಥ ಈ ಸಭೆ ನಡೆದಿತ್ತು. 1942ರಲ್ಲಿ ಬ್ರಿಟಿಷರನ್ನು ದೇಶದಿಂದ ಹೊರಗಟ್ಟಲು ಭಾರತ ರಾಷ್ಟ್ರೀಯ ಕಾಂಗ್ರೆಸ್, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭಿಸಿತ್ತು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯವರೇ ಅಧಿಕಾರದಿಂದ ತೊಲಗಿ ಎಂಬ ಕಾರ್ಯಕ್ರಮ ರೂಪಿಸಬೇಕಿದೆ' ಎಂದು ವ್ಯಾಖ್ಯಾನಿಸಿದರು.
40 ಕಡೆ ಮಲಗಿದ್ದ ಕುಮಾರಸ್ವಾಮಿ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ ಈಗ ಬರಿ ಬಿಜೆಪಿ ಕುರಿತು ಎಚ್ಚರವಾಗಿದ್ದರೆ ಸಾಲದು. ಜೆಡಿಎಸ್ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದೂ ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್ ಆಡಳಿತದ ಚುಕ್ಕಾಣಿ ಹಿಡಿದಿದ್ದಾಗ ಆ ಪಕ್ಷದ ಸಾಧನೆ ಏನೂ ಇರಲಿಲ್ಲ. ಅಪ್ಪ ಎಚ್.ಡಿ ದೇವೇಗೌಡ ಹಾಗೂ ಮಗ ಕುಮಾರಸ್ವಾಮಿ ಇಬ್ಬರೂ ಮುಖ್ಯಮಂತ್ರಿಗಳಾಗಿದ್ದರು. ಆದರೆ ರಾಜ್ಯಕ್ಕೆ ಇವರು ಕೊಡುಗೆ ಏನೂ ಇಲ್ಲ. ಎಚ್.ಡಿ ಕುಮಾರಸ್ವಾಮಿ '40 ಕಡೆ ಮಲಗಿದ್ದು' ಬಿಟ್ಟರೆ ಮತ್ತೇನೂ ಮಾಡಿಲ್ಲ. ನಾನು ಇಲ್ಲಿ ಮಲಗಿದ್ದು ಎಂದರೆ ಬೇರೆ ಅರ್ಥ ಮಾಡಿಕೊಳ್ಳಬೇಡಿ. ನಾನು ಹೇಳಿದ್ದು ಗ್ರಾಮ ವಾಸ್ತವ್ಯದ ಬಗ್ಗೆ ಎಂದರು. ಇದಕ್ಕೆ ಇಡೀ ಸಭೆ ನಗುವಿನ ಉತ್ತರ ನೀಡಿತು.