ಗಗನಸಖಿ ಆತ್ಮಹತ್ಯೆ, ಸಚಿವ ಗೋಪಾಲ್ ನಾಪತ್ತೆ

ಹರ್ಯಾಣದ ಮುಖ್ಯಮಂತ್ರಿ ಭೂಪೆಂದರ್ ಸಿಂಗ್ ಅವರು ಸಚಿವ ಗೋಪಾಲ್ ಮೇಲೆ ಕ್ರಮ ಜರುಗಿಸಲು ಗ್ರೀನ್ ಸಿಗ್ನಲ್ ನೀಡಿದ ಮೇಲೆ ದೆಹಲಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಬುಧವಾರ ಸಚಿವರ ಮೇಲೆ ಸಮನ್ಸ್ ಜಾರಿ ಮಾಡಿದ್ದ ದೆಹಲಿ ಪೊಲೀಸರು, ವಿಚಾರಣೆಗೆ ದೆಹಲಿ ಕೇಂದ್ರ ಕಚೇರಿಗೆ ಬರುವಂತೆ ಸೂಚಿಸಿದ್ದರು. ಆದರೆ, ಸಚಿವ ಗೋಪಾಲ್ ಗೈರು ಹಾಜರಿ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಗೋಪಾಲ್ ಅವರ ಆಪ್ತ, ಎಂಡಿಎಲ್ ಆರ್ ಉದ್ಯೋಗಿ ಅರುಣ್ ಚಡ್ಡಾ ಅವರನ್ನು ಬಂಧಿಸಲಾಗಿದೆ. ನಂತರ ಮತ್ತೊಬ್ಬ ಉದ್ಯೋಗಿ ಮನ್ ಪ್ರೀತ್ ಸಿಂಗ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮನ್ ಪ್ರೀತ್ ತನ್ನ ಹೆಸರಿನಲ್ಲಿ ಸಿಮ್ ತೆಗೆದುಕೊಂಡು ಸಚಿವ ಗೋಪಾಲ್ ಗೆ ನೀಡಿದ್ದ. ಆ ಸಿಮ್ ಬಳಸಿ ಸಚಿವ ಗೋಪಾಲ್ ಗೀತಿಕಾಗೆ ಪದೇ ಪದೇ ಕರೆ ಮಾಡಿರುವುದು ಪತ್ತೆಯಾಗಿದೆ. ಕರೆ ದಾಖಲೆಗಳನ್ನು ಪರಿಶೀಲಿಸಿರುವ ಪೊಲೀಸರು ಗೀತಿಕಾಗೆ ಗೋಪಾಲ್ ಕರೆ ಮಾಡಿ ಹಿಂಸಿಸಿರುವುದನ್ನು ದೃಢಪಡಿಸಿದ್ದಾರೆ.
23 ವರ್ಷದ ಗೀತಿಕಾ ಶರ್ಮ ತನ್ನ ಸೂಸೈಡ್ ನೋಟ್ ನಲ್ಲಿ ಸಚಿವ ಗೋಪಾಲ್ ಹಾಗೂ ಅರುಣ್ ಅವರ ಹೆಸರು ಉಲ್ಲೇಖಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಚಿವ ಸ್ಥಾನ ಗೋಪಾಲ್ ರಾಜೀನಾಮೆ ನೀಡಿದ ಮೇಲೆ ಪರಾರಿಯಾಗಿದ್ದಾರೆ.
ಗೀತಿಕಾಗೆ ಭರ್ಜರಿ ಗಿಫ್ಟ್ : ಗೀತಿಕಾ ಎಂಬಿಎ ಓದಲು 7 ಲಕ್ಷ ನೀಡಿದ್ದ ಗೋಪಾಲ್ ಆಕೆಗೆ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಗಿಫ್ಟ್ ನೀಡಿದ್ದ. ಆದರೆ, ಗೀತಿಕಾ ಕಾರನ್ನು ಹಿಂತಿರುಗಿಸಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಗೀತಿಕಾ ಹಾಗೂ ಗೋಪಾಲ್ ನಡುವೆ ಸ್ನೇಹಕ್ಕೆ ಮೀರಿದ ಸಂಬಂಧ ಇರುವ ಶಂಕೆ ಕೂಡಾ ವ್ಯಕ್ತವಾಗಿದೆ. ಇಬ್ಬರು ಶಿರಡಿ, ಮುಂಬೈನಲ್ಲಿ ಓಡಾಡಿದ ಫೋಟೋಗಳು ಸಿಕ್ಕಿದೆ. ಗೀತಿಕಾ ಎಂಬಿಎಗೆ ಧನಸಹಾಯ ಮಾಡಿದ ಗೀತಿಕಾಳ ಸಂಬಂಧಿಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಎಂಡಿಎಲ್ ಆರ್ ಏರ್ ಲೈನ್ಸ್ ನ 23 ವರ್ಷದ ಮಾಜಿ ಉದ್ಯೋಗಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣದ ಸಚಿವ ಗೋಪಾಲ್ ಕಂಡಾ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ನನ್ನ ಸಾವಿಗೆ ಹರ್ಯಾಣ ಸಚಿವ ಗೋಪಾಲ್ ಅವರ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದರು.
ಈ ಪ್ರಕರಣದಲ್ಲಿ ಸಚಿವ ಗೋಪಾಲ್ ಅವರ ಕೈವಾಡದ ಬಗ್ಗೆ ಹರ್ಯಾಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗೀತಿಕಾ ಅವರ ಸೂಸೈಡ್ ನೋಟ್ ನಲ್ಲಿ ಸಚಿವ ಗೋಪಾಲ್ ಅವರ ಕಿರುಕುಳದ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ.
ಹರ್ಯಾಣ ರಾಜ್ಯದ ನಗರಾಭಿವೃದ್ಧಿ ಸಚಿವರಾಗಿದ್ದ ಗೋಪಾಲ್ ಅವರು ಎಂಡಿಎಲ್ ಆರ್ ಏರ್ ಲೈನ್ಸ್ ನ ಮುಖ್ಯಸ್ಥರಾಗಿದ್ದರು. ಗುರ್ ಗಾಂವ್ ನಲ್ಲಿ ಕೇಂದ್ರ ಕಚೇರಿ ಹೊಂದಿದ್ದ ಎಂಡಿಎಲ್ ಆರ್ ಸಂಸ್ಥೆ ಸ್ಥಳೀಯ ವಿಮಾನಯಾನ ಸೇವೆ ನೀಡುತಿತ್ತು. 2009ರಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು.












Click it and Unblock the Notifications