ಜಸ್ಟ್ ಡಯಲ್ ಹೆಸರಿನಲ್ಲಿ ವಂಚನೆ: ಐವರ ಬಂಧನ

ಕುತೂಹಲದ ಸಂಗತಿಯೆಂದರೆ ಅಮಾಯಕ ಜನರನ್ನು ಯಾಮಾರಿಸಲು ತಂಡವನ್ನೇ ಕಟ್ಟಿಕೊಂಡು ಕಾರ್ಯಾಚರಣೆಗಿಳಿಯುತ್ತಿದ್ದ ಪೊಲೀಸ್ ಅಧಿಕಾರಿಯ ಪುತ್ರರತ್ನ ಖಾನಾಪುರದ ಅಮಿತ್ ಕುಮಾರ್ ಸಿಂಗ್ ನನ್ನು ಬಂಧಿಸಲು ನಮ್ಮ ಪೊಲೀಸರಿಗೆ ಇನ್ನೂ ಸಾಧ್ಯಾವಾಗಿಲ್ಲ.
ಆದರೆ ಖದೀಮ ತಂಡದ ಒಬ್ಬೊಬ್ಬರನ್ನೂ ಬಂಧಿಸಿ, ಹೆಡೆಮುರಿಗೆ ಕಟ್ಟಿದ್ದಾರೆ. ಪರಾರಿಯಾಗಿರುವ ಅಮಿತ್ ಕಗ್ಗದಾಸಪುರದಲ್ಲಿ 2.5 ಕೋಟಿ ರು. ಮೌಲ್ಯದ ಬಂಗಲೆ ಹೊಂದಿದ್ದಾನೆ ಎನ್ನಲಾಗಿದೆ.
ಕೋಲಾರದ ಕೆಜಿಎಫ್ ತಾಲೂಕಿನ ವಿಮಲ್ ಕುಮಾರ್ (25), ಬಂಗಾರಪೇಟೆಯ ರಕ್ಷಿತ್ ಶ್ರೀಧರ್ (25), ಪಿ. ಶ್ರೀನಾಥ್ (27), ಸಿವಿ ರಾಮನ್ ನಗರದ ಸಿ ಮುನಿರಾಜು (36) ಹಾಗೂ ದೀನು ಹಿಮಾಚಲ್ (25) ಬಂಧಿತ ಚೋರರು. ಇವರೆಲ್ಲ ಇಂಜಿನಿಯರಿಂಗ್ ಪದವೀಧರರು. ಬಂಧಿತರಿಂದ 70 ಟಿವಿ, ನೂರಾರು ಸ್ಟೀರಿಯೋ ಸೆಟ್ ಸೇರಿದಂತೆ ಸುಮಾರು 40 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
just dial ಸಂಪರ್ಕ ಸೇತುವೆ ಮೂಲಕ ಇವರೆಲ್ಲ ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ ಮಾಡಿಕೊಡುವ ಸೋಗಿನಲ್ಲಿ ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು. ಗ್ರಾಹಕರನ್ನು ವಂಚಿಸಲೆಂದೇ ಚಾಮರಾಜಪೇಟೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಅಂಗಡಿಯನ್ನೂ ತೆಗೆದಿದ್ದರು. just dial ನಲ್ಲಿ ತಮ್ಮ ಅಂಗಡಿಯನ್ನು ನೋಂದಾಯಿಸಿಕೊಂಡಿದ್ದರು.
ಅದರ ಮೂಲಕ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ, ಗ್ರಾಹಕರ ಮನೆಗಳಿಗೆ ತೆರಳಿ ಟಿವಿ ಸೇರಿದಂತೆ ದುಬಾರಿ ಬೆಲೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿಗೆ ಪಡೆದು ಆನಂತರ ಅವುಗಳನ್ನು ಹಿಂದಿರುಗಿಸದೆ ಬೇರೆ ಯಾರಿಗೋ ಮಾರಾಟ ಮಾಡಿ ನಾಪತ್ತೆಯಾಗುತ್ತಿದ್ದರು. ಇನ್ನು ಕೆಲವು ಮನೆಗಳಿಗೆ ರಿಪೇರಿ ನೆಪದಲ್ಲಿ ಹೋಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು ದೋಚುತ್ತಿದ್ದರು. ನಾಲ್ಕು ವರ್ಷಗಳಿಂದ ತಂಡವು ದಂಧೆಯಲ್ಲಿ ನಿರತವಾಗಿತ್ತು.
just dial ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರು ಈ ಸಂಬಂಧ just dial ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿದ್ದು, ನೋಟಿಸ್ ಜಾರಿಗೊಳಿಸಿದ್ದಾರೆ.












Click it and Unblock the Notifications