ತಿಮ್ಮಪ್ಪ ದರ್ಶನ: ಘೋಷಣಾಪತ್ರ ಕಡ್ಡಾಯಗೊಳಿಸಿದ ಟಿಟಿಡಿ
1933ರಿಂದ ತಿರುಮಲ ದೇವಸ್ಥಾನದಲ್ಲಿ ಈ ಪದ್ಧತಿ ಆಚರಣೆಯಲ್ಲಿದೆ. ಅದರಂತೆ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯಬೇಕೆಂದರೆ 'ನಾನು ಹಿಂದೂಯೇತರ ಧರ್ಮದವನಾಗಿದ್ದು, ವೇಂಕಟೇಶ್ವರ ಸ್ವಾಮಿಯಲ್ಲಿ ಅಚಲ ಭಕ್ತಿ, ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದೇನೆ' ಎಂದು ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು. ಆದರೆ ಈ ಆಚರಣೆ ಜಾರಿ ಇತ್ತೀಚೆಗೆ ಸ್ವಲ್ಪ ಸಡಿಲಗೊಂಡಿತ್ತು. ಆದ್ದರಿಂದ ಮತ್ತೆ ಈ ಘೋಷಣಾ ಪತ್ರವನ್ನು ಕಡ್ಡಾಯಗೊಳಿಸಿ, ಆಂಧ್ರ ಪ್ರದೇಶ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
TTD ಜಂಟಿ ಕಾರ್ಯನಿರ್ವಹಣಾಧಿಕಾರಿ (JEO) ಕೆಎಸ್ ಶ್ರೀನಿವಾಸ ರಾಜು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಸರಕಾರಿ ಆದೇಶದ ಪ್ರಕಾರ (GO MS No. 311 of revenue endowments-1, Rule No. 136) ಹಿಂದೂಯೇತರ ಅನ್ಯಧರ್ಮೀಯರು ದೇವಸ್ಥಾನದ ವೈಕುಂಠ ಕ್ಯೂ ಕಾಂಪ್ಲೆಕ್ಸ್ ಬಳಿ ಈ ಘೋಷಣಾ ಪತ್ರಕ್ಕೆ ಸಹಿ ಹಾಕುವುದು ಕಡ್ಡಾಯವಾಗಿದೆ.
ಈ ಪದ್ಧತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವುದಕ್ಕೆ ಅನುವಾಗಲು JEO ಕಚೇರಿ ಸೇರಿದಂತೆ ತಿರುಮಲದಲ್ಲಿರುವ ಎಲ್ಲ ವಿಚಾರಣಾ ಕಂದ್ರಗಳಲ್ಲಿ declaration register ಪುಸ್ತಕಗಳನ್ನು ಸದಾ ಕಾಲ ಇಡಲಾಗುವುದು. ಈ ಘೋಷಣಾ ಪತ್ರಗಳು ತ್ರಿಪ್ರತಿಯಲ್ಲಿ ಲಭ್ಯ. ಒಂದು ಪ್ರತಿ ಯಾತ್ರಾರ್ಥಿಗೆ, ಮತ್ತೊಂದು ಪ್ರತಿ ಆರ್ಜಿತಂ ಕಚೇರಿ ಕಳಿಸಲಾಗುವುದು, ಇನ್ನೊಂದು ಪ್ರತಿ JEO ಕಚೇರಿ ದಾಖಲೆಯಲ್ಲಿ ಸೇರ್ಪಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ ಕಡಪ ಸಂಸದ ವೈ.ಎಸ್. ಜಗನ್ಮೋಹನ ರೆಡ್ಡಿ ಅವರು ಕಳೆದ ಮೇ ತಿಂಗಳಲ್ಲಿ ಹಣೆಗೆ ನಾಮವನ್ನಿಟ್ಟುಕೊಂಡು ಸುಮಾರು 60 ಬೆಂಬಲಿಗರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು.
ಆದರೆ ಅವರು ಸಂಪ್ರದಾಯದಂತೆ ಹಿಂದೂಯೇತರ ಭಕ್ತಾಧಿಗಳ ಘೋಷಣಾ ಪತ್ರಕ್ಕೆ ಸಹಿ ಹಾಕದೆ ನೇರವಾಗಿ ತಿಮ್ಮಪ್ಪನ ದರ್ಶನ ಪಡೆದಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು ಎಂಬುದು ಗಮನಾರ್ಹ.
ಈ ಹಿಂದೆ ಎಪಿಜೆ ಅಬ್ದುಲ್ ಕಲಾಂ, ಜಾಫರ್ ಷರೀಫ್, ಫಾರೂಕ್ ಅಬ್ದುಲ್ಲಾ ಸೇರಿದಂತೆ ದೇಶ-ವಿದೇಶಗಳಿಂದ ಆಗಮಿಸಿದ ಇನ್ನೂ ಅನೇಕ ಅನ್ಯ ಧರ್ಮೀಯರು ಇಂತಹ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೇವರ ದರ್ಶನ ಪಡೆದ ನಿದರ್ಶನಗಳಿವೆ. ಮದುರೈ ಮೀನಾಕ್ಷಿ ದೇವಸ್ಥಾನ, ಕಠ್ಮಂಡುವಿನ ಪಶುಪತಿನಾಥ ದೇವಾಲಯ ಸೇರಿದಂತೆ ಅನೇಕ ಪ್ರಮುಖ ಹಿಂದೂ ದೇವಸ್ಥಾನಗಳಲ್ಲಿ ಇಂತಹ ಆಚರಣೆಯೊಂದು ಅನೇಕ ವರ್ಷಗಳಿಂದ ಜಾರಿಯಲ್ಲಿದೆ.