ನಾನು ಮುಂಬರುವ ಚುನಾವಣೆ ಸ್ಪರ್ಧಿಸುವುದಿಲ್ಲ : ಯಡಿಯೂರಪ್ಪ

ನನಗೆ ರಾಷ್ಟ್ರಾಧ್ಯಕ್ಷ, ಸಿಎಂ ಸ್ಥಾನದ ಒಲವಿಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಇದು ನನ್ನ ಸಂಕಲ್ಪ. ಪಕ್ಷವನ್ನು ತೊರೆದು ಹೊಸ ಪಕ್ಷ ಕಟ್ಟುವ ಯೋಚನೆ ನನಗಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಡಿವಿಎಸ್ ಗೆ ರಾಜ್ಯಾಧ್ಯಕ್ಷ ? : ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಬೇಡ. ಇದಕ್ಕೆ ಯಾವ ಶಾಸಕರೂ ಒಪ್ಪುವುದಿಲ್ಲ. ಡಿವಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೇರಿದರೆ ಬಿಜೆಪಿಗೆ ಕೇಡುಗಾಲ ಆರಂಭ. ಹೈಕಮಾಂಡ್ ಇಂಥ ಪ್ರಮಾದ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.
ನನ್ನ ಕಾಲೆಳೆಯುವ ಯತ್ನ ಮೊದಲಿನಿಂದಲೂ ನಡೆದಿದೆ. ನನ್ನನ್ನು ಜೈಲಿಗೆ ಕಳಿಸದವರು, ನನ್ನ ವಿರುದ್ಧ ಕತ್ತಿಮಸೆಯುವವರ ವಿರುದ್ಧ ನಾನು ಡೈರಿ ಬರೆಯುತ್ತಿದ್ದೇನೆ. ಇದರಲ್ಲಿ ನನ್ನ ರಾಜಕೀಯ ಜೀವನದ ಹಲವು ವಿಷಯಗಳು ಹೊರಬರಲಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಡೈರಿ ಬರೆಯುವ ಅಭ್ಯಾಸ ಆರಂಭವಾಯಿತು. ಈಗಾಗಲೇ 12 ಡೈರಿಗಳು ಮುಗಿದಿದೆ. ಸೂಕ್ತ ಕಾಲದಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಳಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆದ್ದು ಬರುವ ವಿಶ್ವಾಸವಿದೆ.ಆದರೆ, ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಂಡು ಪ್ರಮುಖ ನಾಯಕರನ್ನು ಜನರ ಬಳಿಗೆ ಕಳಿಸಿದರೆ ಮಾತ್ತ ಜನರ ವಿಶ್ವಾಸ ಗಳಿಸಲು ಸಾಧ್ಯ. ಲಿಂಗಾಯತರು ಈಗ ಬೇಸರಗೊಂಡಿದ್ದಾರೆ. ಇದು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. ಪರಿಸ್ಥಿತಿ ಕೈ ಮೀರುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಹೈಕಮಾಂಡ್ ಏಕಾಏಕಿ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ ನಾನು ಅನ್ಯಾಯವನ್ನು ಧಿಕ್ಕರಿಸಲು ನಾನು ಪಕ್ಷ ಬಿಡುವ ಮಾತಾಡಿದ್ದೆ.ಆದರೆ, ನಾನೇ ಕಟ್ಟಿ ಬೆಳಸಿದ ಬಿಜೆಪಿಯನ್ನು ಅನಾಥಮಾಡಿದ ಪಾಪ ಪ್ರಜ್ಞೆ ಕಾಡತೊಡಗಿತು. ಅದಕ್ಕಾಗಿ ನಿರ್ಧಾರ ಬದಲಾವಣೆ ಮಾಡಿಕೊಂಡೆ ಎಂದು ಬಿಎಸ್ ವೈ ಸ್ಪಷ್ಟಪಡಿಸಿದರು.
ನ್ಯಾಯಾಲಯದ ಅನುಮತಿ ಪಡೆದು ರಾಜ್ಯ ಪ್ರವಾಸಕೈಗೊಳ್ಳುತ್ತೇನೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತೇನೆ. ವಾಸ್ತವಾಂಶ ಏನಾಯಿತು. ತಾನು ಏಕೆ ಬಲಿಪಶುವಾದೆ ಎನ್ನುವುದನ್ನೂ ವಿವರಿಸುತ್ತೇನೆ ಎಂದರು.












Click it and Unblock the Notifications