ಮಳೆಯ ಅಬ್ಬರಕ್ಕೆ ಇಬ್ಬರು ಬಲಿ, ಎಲ್ಲೆಡೆ ಕಟ್ಟೆಚ್ಚರ
ಶಿವಮೊಗ್ಗ ಜಿಲ್ಲೆಯ ಹೊಸ ನಗರ, ತೀರ್ಥಹಳ್ಳಿ ತಾಲೂಕು ಮಳೆಯ ಅಬ್ಬರಕ್ಕೆ ತತ್ತರಿಸಿದೆ. ಆಗುಂಬೆ ಮಾರ್ಗದ ಶಿವರಾಜಪುರ ಹಾಗೂ ಲಕ್ಕುಂದ ಸೇತುವೆಗಳು ಜಲಾವೃತಗೊಂಡಿದೆ. ಅಣ್ಣೊಳ್ಳಿ ಸೇತುವೆ ಮೇಲೆ ಬರುತ್ತಿದ್ದ ಕ್ಯಾಂಟರ್ ವಾಹನದ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸದೆ ನೇರ ನದಿಗೆ ಗಾಡಿ ಬಿಟ್ಟಿದ್ದಾನೆ.
ನದಿಗೆ ಬಿದ್ದ ಸಿಮೆಂಟ್ ಇಟ್ಟಿಗೆ ತುಂಬಿದ್ದ ಕ್ಯಾಂಟರ್ ಕೊಚ್ಚಿ ಹೋಗಿದ್ದು, ಚಾಲಕ ಹಾಗೂ ಕ್ಲೀನರ್ ನಾಪತ್ತೆಯಾಗಿದ್ದರು. ಮಂಗಳವಾರ ಸಂಜೆ ವೇಳೆ ಶಿಕಾರಿಪುರ ಮೂಲದ ಚಾಲಕನ ಶವ ಪತ್ತೆಯಾಗಿದೆ. ಮತ್ತೊಬ್ಬನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಜಿಲ್ಲೆಯ ಗಾಜನೂರು ಡ್ಯಾಮ್ ಸಂಪೂರ್ಣ ಭರ್ತಿಯಾಗಿದೆ. ಭಾರಿ ಪ್ರಮಾಣದಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಮಾಲತಿ ನದಿ ಕೂಡಾ ಉಕ್ಕಿ ಹರಿದು ರಸ್ತೆಗಳನ್ನು ಮುಳುಗಿಸುತ್ತಿರುವುದರಿಂದ ವಾಹನ ಸವಾರರಿಗೆ ರಸ್ತೆ ಗೋಚರಿಸದೆ ಅಪಘಾತಗಳು ಸಂಭವಿಸುತ್ತಿದೆ.
ಮಂಡಗದ್ದೆ ಪಕ್ಷಿಧಾಮ ಮತ್ತೊಮ್ಮೆ ಅಪಾಯದ ಅಂಚಿಗೆ ಸಿಲುಕಿದೆ. ಹೊನ್ನಾಳಿ ಬೆಂಗಳೂರು ಹೆದ್ದಾರಿ ಸಂಪೂರ್ಣ ಸ್ಥಗಿತವಾಗಿದೆ. ಮಳೆಯ ಜೊತೆಗೆ ಭಾರಿ ವೇಗದಲ್ಲಿ ಗಾಳಿ ಕೂಡಾ ಬೀಸುತ್ತಿರುವುದರಿಂದ ಹೊಲ ಗದ್ದೆಗಳು ಮುಳುಗಿದೆ.
ಚಿಕ್ಕಮಗಳೂರು ಕೊಡಗು ಗಡಗಡ: ಭಾರಿ ಮಳೆಯಿಂದ ಶೃಂಗೇರಿ, ಕೊಪ್ಪ ತಾಲೂಕಿನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ ಸೇರಿದಂತೆ ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದೆ. ಮಡಿಕೇರಿ ಸಮೀಪದ ಹಾರಂಗಿ ಜಲಾಶಯ ಭರ್ತಿಯಾಗಿದೆ. ಸಚಿವ ಅಪ್ಪಚ್ಚು ರಂಜನ್ ಅವರು ಮಂಗಳವಾರ ಬಾಗಿನ ಅರ್ಪಿಸಿ ಕಾವೇರಿ ಅಮ್ಮನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹಾಸನದ ಗೊರೂರು ಡ್ಯಾಮ್ ಭರ್ತಿಯಾಗಲು 18 ಅಡಿ ಮಾತ್ರ ಬಾಕಿ ಇದೆ. ಮೈಸೂರಿನ ಕೆಆರ್ ಎಸ್ ನೀರಿನ ಮಟ್ಟ 81 ಅಡಿ ತಲುಪಿದೆ. ಸಕಲೇಶಪುರದಲ್ಲಿ ಮಂಗಳವಾರ ಕೂಡಾ ಮಳೆ ನರ್ತನ ಮುಂದುವರೆದಿದ್ದು, ಮಂಗಳೂರು ಬೆಂಗಳೂರು ರೈಲು ಮಾರ್ಗದ ಶಿನಿವಾಗಿಲು ನಿಲ್ದಾಣದ ಬಳಿಯ ಗುಡ್ಡ ಕುಸಿದಿದೆ. ರೈಲು ಸಂಚಾರ ವ್ಯತ್ಯಯಗೊಂಡಿದೆ. ಚಾರ್ಮಾಡಿ ಘಾಟಿಯಲ್ಲಿ 3, 10 ನೇ ತಿರುವಿನಲ್ಲಿ ಭೂ ಕುಸಿತದ ನಂತರ 6ನೇ ತಿರುವಿನ ಬಳಿ ಕುಸಿತವಾಗಿದ್ದು, ಬದಲಿ ಸಂಚಾರಕ್ಕೆ ಸೂಚಿಸಲಾಗಿದೆ.
ಶಿರಾಡಿ ಘಾಟಿ, ಚಾಮಾರ್ಡಿ ಘಾಟಿ, ಆಗುಂಬೆ ಘಾಟಿ ನಂತರ ಮಲ್ಲಿಗೆ ಘಾಟಿಯತ್ತ ಮಳೆರಾಯನ ರೌದ್ರಪಡೆ ಸಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ನಿರೀಕ್ಷೆಯಿದ್ದು, ಕೊಲ್ಲೂರಿನಲ್ಲಿ 19 ಸೆಂ.ಮೀ, ಆಗುಂಬೆಯಲ್ಲಿ 17.3 ಸೆಂ.ಮೀ, ಕದ್ರಾ ಮತ್ತು ಮಾಣಿಯಲ್ಲಿ 12 ಸೆಂ.ಮೀ ಮಳೆಯಾಗಿದೆ. ಮಲೆನಾಡು, ಕರಾವಳಿ, ದಕ್ಷಿಣ ಒಳನಾಡು ಹಾಗೂ ಘಟ್ಟ ಪ್ರದೇಶದಲ್ಲಿ ಭಾರಿ ವೇಗದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.