ಗಗನಸಖಿ ಆತ್ಮಹತ್ಯೆ, ಹರ್ಯಾಣ ಸಚಿವನ ಮೇಲೆ ಕೇಸ್
ನೈಋತ್ಯ ದೆಹಲಿಯ ಅಶೋಕ್ ವಿಹಾರ್ ನ ನಿವಾಸದಲ್ಲಿ ಗೀತಿಕಾ ಶರ್ಮ ನೇಣಿಗೆ ಶರಣಾಗಿದ್ದರು. ಎಂಡಿಎಲ್ ಆರ್ ಏರ್ ಲೈನ್ಸ್ ನ ಬಾಸ್ ಗೋಪಾಲ್ ಕಂದ ಅವರ ಕಿರುಕುಳವೇ ಕಾರಣ ಎಂದು ಗೀತಿಕಾ ಕುಟುಂಬ ವರ್ಗ ಕೂಡಾ ದೂರು ನೀಡಿದೆ.
ಎಂಡಿಎಲ್ ಆರ್ ಏರ್ ಲೈನ್ಸ್ ತೊರೆದು ನೆಮ್ಮದಿಯಿಂದ ಇದ್ದ ಗೀತಿಕಾಳಿಗೆ ಸಚಿವ ಕಂದ ಕಡೆಯವರು ಪದೇ ಪದೇ ಕಾಟ ಕೊಡುತ್ತಿದ್ದರು. ಮತ್ತೆ ಏರ್ ಲೈನ್ಸ್ ಕೆಲಸಕ್ಕೆ ಸೇರುವಂತೆ ಒತ್ತಾಯಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಒಂದು ದಿನ ಗೀತಿಕಾ ಮನೆಗೂ ಬಂದಿದ್ದ ಗೋಪಾಲ್ ಅವರ ಮ್ಯಾನೇಜರ್ ಅರುಣ್ ಶರ್ಮಾ ಅವರು ಆಕೆಯನ್ನು ಮತ್ತೆ ಕೆಲಸಕ್ಕೆ ಬರುವಂತೆ ಬಲವಂತಪಡಿಸಿದ ದೊಡ್ಡ ಗಲಾಟೆ ಮಾಡಿ ಸಚಿವ ಗೋಪಾಲ್ ರನ್ನು ಹೊರಕ್ಕೆ ಕಳಿಸಿದ್ದೆವು ಎಂದು ಗೀತಿಕಾಳ ಸೋದರ ಹೇಳಿದ್ದಾರೆ.
ಎಂಡಿಎಲ್ ಆರ್ ಏರ್ ಲೈನ್ಸ್ ಬಿಟ್ಟು ಖಾಸಗಿ ಕಂಪನಿ ಸೇರಿದ್ದ ಗೀತಿಕಾ ನಂತರ ಆ ಸಂಸ್ಥೆಯನ್ನು ತೊರೆದಿದ್ದರು. ಎಂಬಿಎ ಓದುವ ಹಂಬಲದಿಂದ ಯಾವುದೇ ಉದ್ಯೋಗಕ್ಕೆ ಸೇರಿರಲಿಲ್ಲ ಎಂದು ದೀಪಿಕಾ ಸೋದರ ಗೌರವ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸಚಿವ ಗೋಪಾಲ್ ಅವರ ಕೈವಾಡದ ಬಗ್ಗೆ ಹರ್ಯಾಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗೀತಿಕಾ ಅವರ ಸೂಸೈಡ್ ನೋಟ್ ನಲ್ಲಿ ಸಚಿವ ಗೋಪಾಲ್ ಅವರ ಕಿರುಕುಳದ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ.
ಹರ್ಯಾಣ ರಾಜ್ಯದ ನಗರಾಭಿವೃದ್ಧಿ ಸಚಿವರಾಗಿದ್ದ ಗೋಪಾಲ್ ಅವರು ಎಂಡಿಎಲ್ ಆರ್ ಏರ್ ಲೈನ್ಸ್ ನ ಮುಖ್ಯಸ್ಥರಾಗಿದ್ದರು. ಗುರ್ ಗಾಂವ್ ನಲ್ಲಿ ಕೇಂದ್ರ ಕಚೇರಿ ಹೊಂದಿದ್ದ ಎಂಡಿಎಲ್ ಆರ್ ಸಂಸ್ಥೆ ಸ್ಥಳೀಯ ವಿಮಾನಯಾನ ಸೇವೆ ನೀಡುತಿತ್ತು. 2009ರಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು.