ಒಂದು ವೇಳೆ ಅಣ್ಣಾ ತಂಡ ಅಧಿಕಾರಕ್ಕೆ ಬಂದರೆ!

ಜೊತೆಗೆ, ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರಾಗಿರುವ ರಾಜಕೀಯಕ್ಕೆ, ಭ್ರಷ್ಟಾಚಾರವನ್ನು ಹೋರಾಟ ನಡೆಸಿರುವ ಅಣ್ಣಾ ತಂಡ ಸೇರುತ್ತಿರುವ ಬಗ್ಗೆ ಜನರು ಆಘಾತ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಇರಲಿ, ಮೊದಲು ಭಿನ್ನಮತವಿಲ್ಲದ ಬಲಿಷ್ಠ ತಂಡ ಕಟ್ಟಲಿ. ರಾಜಕೀಯಕ್ಕೆ ಕಾಲಿಟ್ಟರೆ ಅಣ್ಣಾ ತಂಡ ಕೂಡ ಹಣದ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂಬ ಮಾತುಗಳು ನಾಗರಿಕರಿಂದ ಕೇಳಿಬರುತ್ತಿವೆ.
ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಯುಪಿಎ ಸರಕಾರ ಅಣ್ಣಾ ತಂಡದ ಈ ನಡೆಯನ್ನು ವಾಚಾಮಗೋಚರವಾಗಿ ಟೀಕಿಸಿದೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸಿದ ಹೋರಾಟವೆಲ್ಲ ಬರೀ ಢೋಂಗಿ. ಹೋರಾಟ ಮಾಡಿದ್ದೆಲ್ಲ ಬರೀ ಪ್ರಚಾರಕ್ಕೆ ಮತ್ತು ಅಧಿಕಾರದ ಆಸೆಗೆ ಎಂಬುದು ಈಗ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಅಂಬಿಕಾ ಸೋನಿ ವ್ಯಾಖ್ಯಾನಿಸಿದ್ದಾರೆ.
ನಾಲ್ಕನೇ ರಂಗ ಅಧಿಕಾರಕ್ಕೆ ಬಂದರೆ 65 ವರ್ಷಗಳಲ್ಲಿ ಮಾಡಲಾಗದಿದ್ದುದನ್ನು 3 ವರ್ಷದಲ್ಲಿ ಮಾಡುವುದಾಗಿ ಅಣ್ಣಾ ಹಜಾರೆ ಹೇಳಿದ್ದಕ್ಕೆ ಪ್ರತಿಯಾಗಿ, 3 ವರ್ಷಗಳಲ್ಲಿ ಬದಲಾವಣೆ ತರುವುದಿರಲಿ, ಪಕ್ಷಕ್ಕೆ ಸ್ಥಿರ ಅಡಿಪಾಯ ಹಾಕಲೇ 10 ವರ್ಷಗಳು ತಗಲುತ್ತವೆ. ಹಣದ ಬೆಂಬಲವಿಲ್ಲದೆ, ಒಗ್ಗಟ್ಟಿನ ಬೆಂಬಲವಿಲ್ಲದೆ 3 ವರ್ಷಗಳಲ್ಲಿ ಬದಲಾವಣೆ ತರುವುದು ಹೇಗೆ ಸಾಧ್ಯ? ಅಣ್ಣಾ ತಂಡ ಪ್ರಾಕ್ಟಿಕಲ್ ಆಗಿ ಚಿಂತಿಸುವುದನ್ನು ಕಲಿಯಲು ಎಂದು ಓದುಗರೊಬ್ಬರು ಎಚ್ಚರಿಕೆಯ ನುಡಿಗಳನ್ನು ಆಡಿದ್ದಾರೆ.
ಅಣ್ಣಾ ತಂಡದ ರಾಜಕೀಯ ಪ್ರವೇಶದ ಬಗ್ಗೆ ಪರವಿರೋಧದ ಮಾತುಗಳು ಒಂದೆಡೆಯಾದರೆ, ಟ್ವಿಟ್ಟರಿನಲ್ಲಿ ಅನೇಕ ತಮಾಷೆಯ ಸಂದೇಶಗಳು ಹರಿದಾಡುತ್ತಿವೆ. ಅಣ್ಣಾ ತಂಡವನ್ನು ಉತ್ತೇಜಿಸುವ ಬದಲಾಗಿ ಸಂದೇಶಗಳಲ್ಲಿ ಗೇಲಿಯೇ ಹೆಚ್ಚಾಗಿದೆ. ಜೊತೆಗೆ ರಾಜಕೀಯ ಪಕ್ಷ ರಚಿಸುವುದು, ಹಣಬಲವಿಲ್ಲದೆ ಬಲಾಢ್ಯ ಪಕ್ಷಗಳ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದು ಹುಡುಗಾಟಿಕೆಯ ಮಾತಲ್ಲ ಎಂಬ ಸಂದೇಶವನ್ನು ಕೂಡ ರವಾನಿಸಿದ್ದಾರೆ. ಅವುಗಳಲ್ಲಿ ಕೆಲವು ಕೆಳಗಿನಂತಿವೆ :
* ಅಣ್ಣಾ ತಂಡ ಅಧಿಕಾರಕ್ಕೆ ಬಂದರೆ ಮದ್ಯವನ್ನು ಮೊದಲು ನಿಷೇಧಿಸುತ್ತದೆ. ಆಗ ಮದ್ಯದ ದೊರೆ ಅನಿವಾರ್ಯವಾಗಿ ಅಲ್ಕೋಹಾಲಿನ ಬದಲು ಹಾಲನ್ನು ಮಾರಾಟ ಮಾಡಬೇಕಾಗುತ್ತದೆ!
* ಮೊದಲು ರಾಜಕೀಯಕ್ಕೆ ಕಾಲಿಡಲ್ಲ ಅಂದಿದ್ದರು, ನಂತರ ರಾಜಕೀಯ ಸೇರಲ್ಲ ಆದರೆ ಪ್ರಚಾರ ಮಾಡುತ್ತೇನೆ ಅಂದರು, ಈಗ ಪ್ರಚಾರ ಮಾತ್ರವಲ್ಲ ರಾಜಕೀಯಕ್ಕೂ ಸೇರುತ್ತೇನೆ ಅನ್ನುತ್ತಿದ್ದಾರೆ. ಅಣ್ಣಾ ಪಕ್ಕಾ ರಾಜಕಾರಣಿ ತರಹ ಆಡುತ್ತಿದ್ದಾರೆ.
* ಅಣ್ಣಾ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರೂ ತಿಂಗಳಲ್ಲಿ ಒಂದು ದಿನ ಉಪವಾಸ ಮಾಡುವುದು ಕಡ್ಡಾಯವಾಗುತ್ತದೆ.
* ಅಣ್ಣಾ ತಂಡ ಚುನಾವಣೆಗೆ ನಿಂತರೆ ಕಾಂಗ್ರೆಸ್ ವಿರೋಧಿ ಮತಗಳನ್ನು ಒಡೆದು ಬಿಜೆಪಿಯನ್ನು ಗದ್ದುಗೆಯಿಂದ ದೂರವಿಡುತ್ತದೆ. ವೆಲ್ ಪ್ಲೇಯ್ಡ್ ಮಿಸೆಸ್ ಗಾಂಧಿ.
* ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರವನ್ನು ಅಣ್ಣಾ ತಂಡದ ಪ್ರಶಾಂತ್ ಭೂಷಣ್ ಸುಲಭವಾಗಿ ಪಾಕಿಸ್ತಾನಕ್ಕೆ ವರ್ಗಾಯಿಸಿಬಿಡುತ್ತಾರೆ. (ಭೂಷಣ್ ಅವರು ಕಾಶ್ಮೀರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.)
* ಬಿಜೆಪಿಗೆ ಇದು ಒಳ್ಳೆಯ ಸುದ್ದಿ. ಅವರ ಮೊದಲನೇ ಪರೀಕ್ಷೆ ಆರಂಭವಾಗುವುದೇ ಗುಜರಾತ್ನಲ್ಲಿ. ಎಲ್ಲ ಬಿಜೆಪಿ ವಿರೋಧಿ ಮತಗಳು ಅಣ್ಣಾ ಹಜಾರೆಗೆ ದೊರೆಯುತ್ತವೆ ಮತ್ತು ನರೇಂದ್ರ ಮೋದಿ ಮತ್ತೆ ಅಧಿಕಾರದಲ್ಲಿಯೇ ಉಳಿಯುವಂತೆ ಮಾಡುತ್ತದೆ.












Click it and Unblock the Notifications