ಆತ್ಮಹತ್ಯೆ ಬೆದರಿಕೆ ಎಸ್ಎಂಎಸ್: ಆಕಾಶ್ ನಾಪತ್ತೆ
ಇಷ್ಟೇ ಅಲ್ಲ, "ನನ್ನ ಬೈಕ್ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದೆ. ದಯವಿಟ್ಟು ಅದನ್ನು ತೆಗೆದುಕೊಂಡು ಹೋಗಿ. ಪಾರ್ಕಿಂಗ್ ಬಿಲ್ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲಿನ ಕವರ್ ನಲ್ಲಿದೆ. ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ. ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ. ಎಲ್ಲರಿಗೂ ಗುಡ್ ಬೈ..."
ನನ್ನನ್ನು ಮೂರ್ಖ ಎಂದು ಬೇಕಾದರೂ ಕರೆಯಿರಿ. ಇದು ನಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಟೈಪ್ ಮಾಡಿದ್ದು. ನಾನು ಜೀವನವನ್ನು ಕೊನೆಗೊಳಿಸಿಕೊಳ್ಳಲು ಸ್ಕಂದಗಿರಿಗೆ ಹೋಗುತ್ತಿದ್ದೇನೆ." ಹೀಗೆ ಇಷ್ಟುದ್ದದ ಮೆಸೇಜ್ ತನ್ನ ಪೋಷಕರಿಗೆ ಕಳಿಸಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಚಿಕ್ಕಬಳ್ಳಾಪುರದ ಆಕಾಶ್. ಇಷ್ಟೆಲ್ಲಾ ನಡೆದಿರುವುದು ಶನಿವಾರ ಅಂದರೆ ಜುಲೈ 28, 2012 ರಂದು.
ಸಹಜವಾಗಿ ಆತಂಕಕ್ಕೆ ಸಿಲುಕಿರುವ ಪೋಷಕರು ಚಿಕ್ಕಬಳ್ಳಾಪುರ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಸ್ಕಂದಗಿರಿ ಬೆಟ್ಟವನ್ನೆಲ್ಲಾ ಜಾಲಾಡಿ ಸುಸ್ತಾಗಿದ್ದಾರೆ. ಆದರೆ ಆಕಾಶ್ ಅಕ್ಷರಶಃ ನಾಪತ್ತೆಯಾಗಿದ್ದಾರೆ. ಆಕಾಶ್ ಗಾಗಿ ಹುಡುಕಾಡಿರುವ ಪೊಲೀಸರಿಗೆ ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಸುಳಿವು ಸ್ಕಂದಗಿರಿ ಬೆಟ್ಟದಲ್ಲಿ ಸಿಕ್ಕಿಲ್ಲ. ಬಳಿಕ ಪೋಲಿಸರ ಪತ್ತೆ ಜಾಡು ಬದಲಾಗಿದೆ.
ಆಕಾಶ್ ಬಳಸುತ್ತಿದ್ದ ಮುಬೈಲ್ ಸಿಮ್ ಕಂಪನಿಯನ್ನು ಸಂಪರ್ಕಿಸಿ ನೆಟ್ ವರ್ಕ್ ಯಾವ ವೇಳೆಗೆ ಯಾವ ಸ್ಥಳದಲ್ಲಿತ್ತು ಎಂಬುದನ್ನು ಪರಿಶೀಲಿಸಿದಾಗ ತಿಳಿದು ಬಂದಿದ್ದು ಇಷ್ಟು. ಶನಿವಾರ ಬೆಳಿಗ್ಗೆ 8.30 ರ ಸಮಯದಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ 10.30 ರ ಸುಮಾರಿನಲ್ಲಿ ಬೆಂಗಳೂರಿನ ಗಾಂದಿನಗರದಲ್ಲಿ ಆಕಾಶ್ ಮೊಬೈಲ್ ನೆಟ್ ವರ್ಕ್ ಪತ್ತೆಯಾಗಿದೆ.
ಬಳಿಕ ಆಕಾಶ್ ಪೋಷಕರು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯಕ್ಕೆ ಆಕಾಶ್ ಏನಾಗಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಆದರೆ ಸ್ಕಂದಗಿರಿಗೆ ಹೋಗಿಲ್ಲ ಎಂಬುದಷ್ಟೇ ಸ್ಪಷ್ಟವಾಗಿದೆ. ಮುಂದಿನ ವಿಷಯವೇನೆಂಬುದು ಇನ್ನೂ ನಿಗೂಢವಾಗಿಯೇ ಇದೆ.