ಹೆಸರಘಟ್ಟ:ವಿಷದ ಮುದ್ದೆ ತಿನ್ನಿಸಿ 12 ಕೋತಿಗಳ ಹತ್ಯೆ
ಬೆಂಗಳೂರು, ಜುಲೈ 28: ಮಂಗನಿಂದ ಮಾನವನಾದವರು ಮನುಷ್ಯತ್ವ ಕಳೆದುಕೊಂಡು ಮಂಗ ಸಂತತಿಯ ದಾರುಣ ಹತ್ಯೆಗೆ ಕಾರಣವಾಗಿದ್ದಾರೆ. ರಾಗಿ ಮುದ್ದೆಯಲ್ಲಿ ಇಲಿ ಪಾಷಾಣವಿಟ್ಟು ಹಲವು ಪ್ರಾಣಿಗಳನ್ನು ಸಾಯಿಸಿರುವ ಘಟನೆ ತುಮಕೂರು ರಸ್ತೆಯಲ್ಲಿ ಹೆಸರಘಟ್ಟದ ತರಬನಹಳ್ಳಿಯಲ್ಲಿ ನಿನ್ನೆ ವರ ಮಹಾಲಕ್ಷ್ಮಿ ಹಬ್ಬದಂದು ನಡೆದಿದೆ. ಇಲ್ಲಿನ ನಿರ್ಮಲ ಆರೋಗ್ಯ ಕೇಂದ್ರದಲ್ಲಿ ವಿಷವಿಟ್ಟ ರಾಗಿ ಮುದ್ದೆಯನ್ನು ತಿಂದ 12 ಮಂಗಗಳೂ ಸೇರಿದಂತೆ ಐದು ಅಳಿಲುಗಳು ಮತ್ತು ಕೆಲವು ಪುಟ್ಟ ಪಕ್ಷಿಗಳೂ ಅಸುನೀಗಿವೆ.

ಸೋಲದೇವನಹಳ್ಳಿ ಪೊಲೀಸರು ಮತ್ತು ಅರಣ್ಯ ಇಲಾಖೆ ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಇಲಿ ಪಾಷಾಣವಿದ್ದ ರಾಗಿ ಮುದ್ದೆಗಳನ್ನು ಇಟ್ಟಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ, ವಿಚಾರಣೆಗೆ ಗುರಿಪಡಿಸಿದ್ದಾರೆ. ಆರೋಪ ಸಾಬೀತಾದಲ್ಲಿ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆಯಾಗಲಿದೆ.
'ಈ ಕೋತಿಗಳು ವನ್ಯಜೀವಿ ಸಂರಕ್ಷಣೆ ಕಾಯಿದೆ 1972ರ ಷೆಡ್ಯುಲ್ 2 ಅಡಿ ಬರುತ್ತವೆ. ಇವುಗಳನ್ನು ವಿಷವಿಕ್ಕಿ ಸಾಯಿಸುವುದು/ ಬೇಟೆಯಾಡುವುದು/ಕಿಚಾಯಿಸುವುದು ಈ ಕಾಯಿದೆಯನುಸಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಸದ್ಯಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರಣ್ಯ ಕಾನೂನುಗೆ ಅನುಸಾರವಾಗಿ ಈಗಾಗಲೇ ನಾವೂ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಇದುವರೆಗೆ 12 ಕೋತಿಗಳು ಸತ್ತಿವೆ. ಇನ್ನೂ ಕೆಲವನ್ನು CUPA ಮತ್ತು PFA ಪುನರ್ವಸತಿ ಕೇಂದ್ರಗಳಿಗೆ ಕಳಿಸಲಾಗಿದೆ' ಎಂದು ಅರಣ್ಯ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗುರುವಾರವೂ ಮೂರು ಮಂಗಗಳು ಹೀಗೇ ರಾಗಿಮುದ್ದೆಯಲ್ಲಿದ್ದ ವಿಷವುಂಡು ಅಸುನೀಗಿವೆ. ಸದರಿ ಆಸ್ಪತ್ರೆಯವರೇ ಈ ರೀತಿ ಪ್ರಾಣಿಗಳ ಸಾಮೂಹಿಕ ಹತ್ಯೆ ಮಾಡುತ್ತಿದ್ದಾರೆ. ಹೀಗ್ಯಾಕೆ ಮಾಡುತ್ತಿದ್ದಾರೋ ಅರ್ಥವೇ ಆಗುತ್ತಿಲ್ಲ. ಆದರೂ ಅಮಾಯಕ ಪ್ರಾಣಿಗಳು ಬಲಿಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಸರಿಯಾದ ತನಿಖೆ ನಡೆಸಿ, ಇನ್ನಾದರೂ ಇಂತಹ ಕ್ರೌರ್ಯಕ್ಕೆ ಬ್ರೇಕ್ ಹಾಕಲಿ' ಎಂದು ಸ್ಥಳೀಯ ನಿವಾಸಿಯೊಬ್ಬರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ತರಬನಹಳ್ಳಿಯಲ್ಲಿರು ಈ ಆರೋಗ್ಯಧಾಮವನ್ನು ಕ್ರಿಶ್ಚಿಯನ್ ಮಿಷನರಿಯೊಂದು ನಡೆಸುತ್ತಿದೆ. 10 ಹಾಸಿಗೆಗಳುಳ್ಳ ನಿರ್ಮಲ ಆರೋಗ್ಯ ಕೇಂದ್ರ ಇದು. ಈ ಆಸ್ಪತ್ರೆಯ ಮೇಲ್ಛಾವಣಿಗೆ ನುಸುಳಿ ಈ ಮಂಗಗಳು ಅಲ್ಲಿದ್ದ ಆಸ್ಪತ್ರೆಯ ಬಟ್ಟೆಗಳು ಮತ್ತು ಸೌರವಿದ್ಯುತ್ ಪರಿಕರಗಳನ್ನು ಹಾಳು ಮಾಡುತ್ತಿದ್ದವು. ಇದರಿಂದ ಕ್ಷುದ್ದಗೊಂಡ ಆಸ್ಪತ್ರೆಯ ಸಿಬ್ಬಂದಿ ರಾಗಿ ಮುದ್ದೆ ಮತ್ತು ಅನ್ನದಲ್ಲಿ ವಿಷ ಬೆರೆಸಿ ಮೇಲ್ಛಾವಣಿಯಲ್ಲಿಟ್ಟಿದ್ದಾರೆ. ಅದನ್ನು ತಿಂದ ಮಂಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಈ ಮಧ್ಯೆ, ಪುನರ್ವಸತಿ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿರುವ ಇತರೆ ಮೂರು ಕೋತಿಗಳ ಸ್ಥಿತಿಯೂ ಗಂಭಿರವಾಗಿದೆ. 10 ವರ್ಷದ ಹಿಂದೆ ಹೊಸೂರು ರಸ್ತೆಯಲ್ಲೂ ಹೀಗೆ ಪ್ರಾಣಿಗಳಮಾರಣ ಹೋಮ ನಡೆದಿತ್ತು. ಅದಾದನಂತರ ಕಳೆದ ವರ್ಷವೂ 20 ಕೋತಿಗಳನ್ನು ವಿಷವಿಟ್ಟು ಸಾಯಿಸಿರುವ ಘಟನೆ ವರದಿಯಾಗಿತ್ತು. ಇನ್ನಾದರೂ ಇಂತಹ ಅಮಾನವೀಯ ಕೃತ್ಯಕ್ಕೆ ಕಡಿವಾಣ ಬೀಳಲಿ.












Click it and Unblock the Notifications