ಲಿಂಗದ ಮೇಲೆ ಕಾಲಿಟ್ಟ ಯುವಕನ ಮೇಲೆ ಕೇಸು
ಇಂದೋರ್, ಜು.27: ಇತ್ತೀಚೆಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಸಂಚಲನ ಮೂಡಿಸಿದ್ದ 'ಶಿವಲಿಂಗದ ಮೇಲೆ ಕಾಲಿಟ್ಟ' ಯುವಕನ ಪ್ರಸಂಗಕ್ಕೆ ಹೊಸ ತಿರುವು ಸಿಕ್ಕಿದೆ. ಸ್ಥಳೀಯ ಪೊಲೀಸರು ಆರೋಪಿ ಯುವಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.ಫೇಸ್ ಬುಕ್ ನಲ್ಲೂ ಕೂಡಾ wanted dead or alive ಎಂದು ಲಕ್ಷ್ನಣ್ ಫೋಟೋ ಹಾಕಿ Against laxman johnson ಎಂಬ ಗುಂಪು ರಚಿಸಿ ಪ್ರತಿಭಟನೆ ಮುಂದುವರೆಸಲಾಗಿತ್ತು.
ಜು.25 ರಂದು ಸ್ಥಳೀಯ ಡಿವೈಎಸ್ ಪಿ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದ ಹಿಂದೂ ಸಂಘಟನೆ ಕಾರ್ಯಕರ್ತರು ಲಕ್ಷ್ಮಣ್ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ಸಲ್ಲಿಸಿದ್ದರು. ದೂರನ್ನು ಪರಿಶೀಲಿಸಿದ ಪೊಲೀಸ್ ಶುಕ್ರವಾರ ಲಕ್ಷ್ಮಣ್ ಮೇಲೆ ಐಪಿಸಿ ಸೆಕ್ಷನ್ 295 A (Deliberate and malicious acts, intended to outrage religious feelings or any class by insulting its religion or religious beliefs) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದಲ್ಲದೆ ಐಟಿ ಕಾಯ್ದೆ ಪ್ರಕಾರ ಕೂಡಾ ಲಕ್ಷ್ಮಣ್ ಮೇಲೆ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ. ಸೈಬರ್ ಸೆಲ್ ಸಹಾಯ ಪಡೆದು ಮುಂದಿನ ತನಿಖೆ ನಡೆಸಲಾಗುವುದು. ಲಕ್ಷ್ಮಣ್ ಜಾನ್ಸನ್ ಅವರ ಫೇಸ್ ಬುಕ್ ಖಾತೆ ಅಸಲಿಯೇ? ಅಥವಾ ನಕಲಿಯೇ? ಎಂದು ಪರಿಶೀಲನೆ ನಡೆಸಲಾಗುತ್ತದೆ. ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಡಿವೈಎಸ್ಪಿ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಮತಾಂತರಗೊಂಡ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವ ಲಕ್ಷ್ಮಣ್ ಜಾನ್ಸನ್ ತನ್ನನ್ನು ತಾನು ಯೇಸು ಕ್ರಿಸ್ತನ ಮಗ ಎಂದು ಕರೆದುಕೊಂಡಿದ್ದಾನೆ. ಕೇಂದ್ರ ರೈಲ್ವೇ ಪಾರ್ಸೆಲ್ ಗುತ್ತಿಗೆದಾರನಾಗಿ ಉದ್ಯೋಗದಲ್ಲಿದ್ದಾರೆ. ತಿರುಪತಿ ಮೂಲದ ಲಕ್ಷ್ಮಣ್ ಸದ್ಯಕ್ಕೆ ಮುಂಬೈ ನಿವಾಸಿಯಾಗಿದ್ದಾನೆ. ಲಕ್ಷ್ಮಣ್ ಅವರ ಮೂಲ ಊರಿನ ಮನೆಯನ್ನು ಆಕ್ರೋಶಿತ ಕಾರ್ಯಕರ್ತರು ಸುಟ್ಟು ಹಾಕಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿದೆ.
ಆದರೆ, ತಿರುಪತಿ ಅಥವಾ ಮುಂಬೈ ಪೊಲೀಸರಿಂದ ಯಾವುದೇ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಫೇಸ್ ಬುಕ್ ನಲ್ಲಿ 2,500 ರಿಂದ 3000 ಜನ ಲಕ್ಷ್ಮಣ್ ವಿರುದ್ಧ ಅಭಿಯಾನ ಮುಂದುವರೆಸಿದ್ದಾರೆ.