ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ ನಿಗೂಢ ಅಂತ್ಯ

Journalist Linganna Satyampet death
ಗುಲ್ಬರ್ಗಾ, ಜು.27: ಹಿರಿಯ ಪತ್ರಕರ್ತ ಹಾಗೂ ಶರಣ ಸಾಹಿತಿ ಲಿಂಗಣ್ಣ ಸತ್ಯಂಪೇಟೆ (68) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಲಿಂಗಣ್ಣ ಅವರ ಅರೆ ಬೆತ್ತಲೆ ದೇಹ ಇಲ್ಲಿನ ಪ್ರಸಿದ್ಧ ಶ್ರೀ ಶರಣ ಬಸವೇಶ್ವರ ದೇವಸ್ಥಾನದ ಮುಖ್ಯ ರಸ್ತೆಯ ಪಕ್ಕದ ಚರಂಡಿಯಲ್ಲಿ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.

ಮೃತರು ಪತ್ನಿ, ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯಲ್ಲಿ ಅವರ ಸ್ವಂತ ಊರಾದ ಯಾದಗಿರಿ ಜಿಲ್ಲೆ ಸುರುಪುರ ತಾಲೂಕಿನ ಸತ್ಯಂಪೇಟೆಯಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ಹೇಳಿದೆ.

ಗುರುವಾರ ಪತ್ತೆಯಾದ ಶವದ ಮೇಲೆ ಯಾವುದೇ ಗಾಯಗಳಿಲ್ಲ. ಮೈಮೇಲೆ ಒಳ ಚಡ್ಡಿ ಮತ್ತು ಬನಿಯನ್ ಮಾತ್ರ ಇದ್ದು, ಅವರನ್ನು ಕತ್ತುಹಿಚುಕಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಶವ ಪರೀಕ್ಷೆಯ ನಂತರ ಸಾವಿನ ಕುರಿತು ನಿಖರವಾಗಿ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ Superintendent of Police ಪ್ರವೀಣ್ ಪವಾರ್ ಹಾಗೂ ಅವರ ಸಿಬ್ಬಂದಿಗಳು ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಿಂಗಣ್ಣ ಸತ್ಯಂಪೇಟೆಯವರು ಶ್ರಾವಣಮಾಸದ ಮಾಸಿಕ ಕಾರ್ಯಕ್ರಮದ ಅಂಗವಾಗಿ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನವು ದೇವಸ್ಥಾನದ ಅನುಭವ ಮಂಟಪದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಪಾಲ್ಗೊಂಡು ಉಪನ್ಯಾಸ ನೀಡಬೇಕಾಗಿತ್ತು.

ಆದರೆ, ಕಾರ್ಯಕ್ರಮ ಪ್ರಾರಂಭವಾಗುವ ಮುನ್ನವೇ ಅವರು ನಾಪತ್ತೆಯಾಗಿದ್ದು, ಹೀಗಾಗಿ ಅವರ ಕುಟುಂಬದ ಸದಸ್ಯರು ಇಡೀ ರಾತ್ರಿ, ಹಗಲು ಅವರನ್ನು ಹುಡುಕಲು ಆರಂಭಿಸಿದ್ದರು.

ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದೇಗುಲದ ಬಳಿಯ ತೆಂಗಿನಕಾಯಿ ಮಾರಾಟ ಮಾಡುವ ಮಳಿಗೆಯ ಬಳಿಯ ಚರಂಡಿಯಲ್ಲಿ ಅವರ ಶವ ಪತ್ತೆಯಾಯಿತು.

ಸತ್ಯಂಪೇಟೆಯವರು ತಮ್ಮ ಸ್ವಂತ ವಾಹನದಲ್ಲಿ ಓಡಾಡುತ್ತಿದ್ದರೂ ಸಹ ನಗರಕ್ಕೆ ಅವರು ಬುಧವಾರ ಬಸ್‌ನಲ್ಲಿಯೇ ಬಂದಿದ್ದು, ಸಂಜೆ ಸುಮಾರು 6.30೦ರ ಸುಮಾರಿಗೆ ಅವರು ತಮ್ಮ ಸಂಬಂಧಿಕರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದರು.

ನಂತರ ಅವರ ಮೊಬೈಲ್ ಬಳಕೆಯ ಟವರ್ ಕುರಿತು ಮಾಹಿತಿ ಪಡೆದಾಗ ಅವರು ಸಂಗಮೇಶ್ವರ್ ನಗರ ಕಾಲೋನಿಯ ಟವರ್ ಪ್ರದೇಶದಲ್ಲಿಯೇ ಇರುವ ಕುರಿತು ಖಚಿತಪಟ್ಟಿತು. ಆದರೆ, ಅಲ್ಲಿ ಲಿಂಗಣ್ಣ ಅವರ ಶವ ಪತ್ತೆಯಾಗಿದ್ದರಿಂದ ಅವರ ಕುಟುಂಬ ವರ್ಗ ಹಾಗೂ ಬಂಧು-ಬಳಗ ತೀವ್ರ ಆಘಾತಕ್ಕೆ ಒಳಗಾದರು.

ಲಿಂಗಣ್ಣ ಸತ್ಯಂಪೇಟೆ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆಯವರು. ಲಿಂಗಣ್ಣ ಅವರು ಶಹಪುರಪೇಟೆಯಲ್ಲಿ ಸರ್ಕಾರಿ ಮಾದರಿ ಶಾಲೆಯಲ್ಲಿ ಶಿಕ್ಷಕರಾಗಿಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಈ ಮೊದಲು ಅವರು ಲಂಕೇಶ್ ಪತ್ರಿಕೆ, ಪ್ರಜಾವಾಣಿಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.

ನಂತರ ಅವರು ತಮ್ಮದೇ ಆದ ಅಗ್ನಿಅಂಕುರ ಹಾಗೂ ಬಸವ ಮಾರ್ಗ ಪತ್ರಿಕೆಗಳನ್ನು ಪ್ರಾರಂಭಿಸಿದ್ದರು. ಶಹಾಪುರದಲ್ಲಿ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಬ್ಯಾಂಕ್ ಸಹ ನಡೆಸುತ್ತಿದ್ದರು. ವಚನ ಸಾಹಿತ್ಯದ ಕುರಿತು ಆಳವಾದ ಅಧ್ಯಯನ ಮಾಡಿದ್ದ ಅವರು, ಬಸವೇಶ್ವರರ ಸಂದೇಶಗಳಿಗೆ ಹೆಚ್ಚು ಗೌರವ ನೀಡುತ್ತಿದ್ದರು.

ಮನೆಯಲ್ಲಿ ಮಹಾಮನೆ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಉತ್ತರ ಕರ್ನಾಟಕದಲ್ಲಿ ಭಾಗವಹಿಸಿ ಮನೆಮಾತಾಗಿದ್ದರು. 2010ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಈ ನಿಗೂಢ ಸಾವಿನ ಹಿಂದೆ ಆಸ್ತಿ ವಿವಾದವೂ ಇರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಹರಡಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+