ಭೂಮಾಫಿಯಾ ಮಟ್ಟಹಾಕಲು ವಿಶೇಷ ತಂಡ : ಅಶೋಕ್

ಭೂ ಮಾಫಿಯಾ ದೊರೆ ಬೆಮೆಲ್ ಕೃಷ್ಣಪ್ಪನ ಭೀಕರ ಹತ್ಯೆ ನೆಲಮಂಗಲದಲ್ಲಿ ಬುಧವಾರ ರಾತ್ರಿ ನಡೆದಿರುವ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಗುರುವಾರ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ಶಾಸಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ಭೂ ಮಾಫಿಯಾ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಆದಷ್ಟು ಬೇಗನೆ ಅದನ್ನು ಪೊಲೀಸ್ ಇಲಾಖೆ ಮಟ್ಟಹಾಕಲಿದೆ ಎಂದರು.
ನಗರದಲ್ಲಿ ಮತ್ತು ಸುತ್ತಲಿನ ಭೂಮಿಗೆ ಕೋಟಿಗಟ್ಟಲೆ ಬೆಲೆ ಬಂದಿದೆ. ಇದರಿಂದಾಗಿ ಭೂ ಮಾಫಿಯಾ ಅಳತೆಮೀರಿ ಚಿಗಿತುಕೊಂಡಿದೆ. ಈ ಕಾರಣದಿಂದಾಗಿ ಅನೇಕ ವಿವಾದಗಳು, ವೈಯಕ್ತಿಕ ದ್ವೇಷಗಳು ಹುಟ್ಟಿಕೊಂಡು ಕೊಲೆಗಳಲ್ಲಿ ಪರ್ಯವಸಾನವಾಗುತ್ತಿವೆ. ಬೆಮೆಲ್ ಕೃಷ್ಣಪ್ಪನ ಕೊಲೆ ಕೂಡ ವೈಯಕ್ತಿಕ ದ್ವೇಷ, ಅಸೂಯೆಯಿಂದ ಸಂಭವಿಸಿದೆ ಎಂದು ಅಶೋಕ್ ನುಡಿದರು.
ಆರೋಪಿಗಳು ಯಾರೇ ಇರಲಿ ಅವರನ್ನು ಶೀಘ್ರದಲ್ಲಿ ಬಂಧಿಸುತ್ತೇವೆ. ಪೊಲೀಸರು ತನಿಖೆಯನ್ನು ತ್ವರಿತಗೊಳಿಸದಿದ್ದರೆ ಅಥವಾ ಲೋಪ ಎಸಗಿದರೆ ಅಂಥವರ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳುತ್ತೇವೆ. ಆರೋಪಿಗಳು ಎಲ್ಲೇ ಅಡಗಿದ್ದರೂ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಅಶೋಕ್ ಸದನದಲ್ಲಿ ಹೇಳಿದರು.
ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಿಹಾರ ಮತ್ತು ಉತ್ತರಪ್ರದೇಶಗಳಿಗಿಂತ ಕಡೆಯಾಗಿದೆ. ಹಾಡುಹಗಲೇ ಕೊಲೆಗಳು ನಡೆಯುತ್ತಿವೆ. ಅಪರಾಧಿಗಳನ್ನು ಮಟ್ಟಹಾಕುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ರೋಶನ್ ಬೇಗ್ ಮತ್ತು ನರೇಂದ್ರ ಬಾಬು ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಪ್ರತಿಯಾಗಿ ಅಶೋಕ್ ಅವರು ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರ ನೀಡಿದರು.
ಅಂತಿಮ ಸಂಸ್ಕಾರಕ್ಕೆ ದೇವೇಗೌಡ : ಬೆಮೆಲ್ ಕೃಷ್ಣಪ್ಪನ ಹತ್ಯೆಯಿಂದ ನೆಲಮಂಗಲದ ಶಾಂತಿ ಕದಡಿಬಿಟ್ಟಿದೆ. ಇಂದು ಮಧ್ಯಾಹ್ನ ನಡೆದ ಕೃಷ್ಣಪ್ಪನ ಅಂತ್ಯ ಸಂಸ್ಕಾರದಲ್ಲಿ ಸಹಸ್ರಾರು ಜನರು ಭಾಗವಹಿಸಿದ್ದರು. ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಆಗಿ ಬಂದ್ ಮಾಡಿದ್ದರು. ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭೇಟಿ ನೀಡಿ ಅಗಲಿದ ಜೀವಕ್ಕೆ ಅಂತಿಮ ನಮನ ಸಲ್ಲಿಸಿದರು. ದುಃಖತಪ್ತ ಕೃಷ್ಣಪ್ಪನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಉದ್ವಿಗ್ನವಾಗಿದ್ದ ಸ್ಥಿತಿ ತಹಬದಿಗೆ ಬಂದಿದ್ದರೂ ಕೃಷ್ಣಪ್ಪನ ಬೆಂಬಲಿಗರು ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಹಿಂಸಾಚಾರಕ್ಕಿಳಿಯಬಹುದು, ಗಲಾಟೆ ಮಾಡಬಹುದೆಂಬ ಕಾರಣದಿಂದ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನೆಲಮಂಗಲ ಪಟ್ಟಣ, ಅರಿಶಿನಕುಂಟೆ, ಟಿ ಬೇಗೂರು, ಕೆಂಪಲಿಂಗನಹಳ್ಳಿ ಮುಂತಾದ ಪ್ರದೇಶಗಳಲ್ಲಿರುವ ಎಲ್ಲ ಶಾಲಾ ಕಾಲೇಜುಗಳಿಗೆ ಶಿಕ್ಷಣಾಧಿಕಾರಿ ಹನುಮ ನಾಯಕ್ ರಜಾ ಘೋಷಿಸಿದ್ದರು. ಶಾಲಾ ಕಾಲೇಜು ಮಾತ್ರವಲ್ಲ ಪಟ್ಟಣದ ಸುತ್ತಲಿರುವ ಕೆಲ ಫ್ಯಾಕ್ಟರಿಗಳಿಗೆ ಕೂಡ ರಜಾ ನೀಡಲಾಗಿತ್ತು.












Click it and Unblock the Notifications