ಬಸ್ಸಿನಲ್ಲಿದ್ದ ರಂಧ್ರದಿಂದ ಬಿದ್ದು ಶಾಲಾ ಬಾಲಕಿ ಸಾವು
ಇದು ನಡೆದಿದ್ದು ಮಹಾನಗರಿಯಲ್ಲಿ ಮದಿಚೂರು ಬಳಿ ತಂಬರಂನಲ್ಲಿ ನಿನ್ನೆ ಬುಧವಾರ. ಕೋಪ್ರೋದ್ರಿಕ್ತ ಜನ ಬಸ್ಸಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ತಕ್ತಪಡಿಸಿದ್ದಾರೆ. ಎರಡನೆಯ ಕ್ಲಾಸಿನಲ್ಲಿ ಓದುತ್ತಿದ್ದ ಶ್ರುತಿ ಬಸ್ಸಿನಲ್ಲಿ ಮುಂಭಾಗದಿಂದ ಆರನೆ ಸಾಲಿನ ಸೀಟಿನಲ್ಲಿ ಕುಳಿತಿದ್ದಳು. ಸಂಜೆ ನಾಲ್ಕು ಗಂಟೆಯಾಗಿತ್ತು. ಇನ್ನೇನು ತಾನು ಇಳಿಯುವ ಸ್ಥಳ ಬಂದಿತೆಂದು ಮಗು ಸೀಟು ಬಿಟ್ಟು ಎದ್ದಿದ್ದಾಳೆ. ಆದರೆ
ಸೀಟಿನಡಿಯಿದ್ದ ಚಿಕ್ಕದಾದ ಕಂದಕದೊಳಕ್ಕೆ ಕಾಲೂರಿ ಜಾರತಿ ಬಿದ್ದಿದ್ದಾಳೆ. ಅಷ್ಟೇ ಮಗು ಸೀದಾ ಬಸ್ ಕೆಳಗಿನ ರಸ್ತೆಗೆ ಬಿದ್ದಿದ್ದಾಳೆ. ಅದೇ ಬಸ್ ಮಗುವಿನ ಮೇಲೆ ಚಲಿಸಿದೆ. ಕಂದಮ್ಮನ ಪ್ರಾಣ ಪಕ್ಷಿ ಅದೇ ಸ್ಥಳದಿಂದ ಹಾರಿಹೋಗಿದೆ. ಬಸ್ಸಿಬಲ್ಲಿದ್ದ ಶ್ರುತಿಯ ಸಹಪಾಠಿಗಳು ಕೂಗಿಕೊಂಡಿದ್ದಾರಾದರೂ ಅಚಾತುರ್ಯ ಚಾಲಕನ ಗಮನಕ್ಕೆ ಬರುವಷ್ಟರಲ್ಲಿ ಬಸ್ಸಿನ ಹಿಂಬದಿಯ ಚಕ್ರಗಳು ಅವರ ಮೇಲೆ ಹರಿದಿತ್ತು.
ಕಣ್ಣೆದುರೇ ರಸ್ತೆ ಮೇಲೆ ಇಂತಹ ಭೀಕರ ಘಟನೆ ಕಂಡ ಜನ ರೊಚ್ಚಿಗೆದ್ದಿದ್ದಾರೆ. ಬಸ್ಸಿನಲ್ಲಿದ್ದ ಚಾಲಕ ಮತ್ತು ಕಂಡಕ್ಟರನನ್ನು ಬಾರಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ರಕ್ಷಿಸಿದ್ದಾರೆ. ಸ್ಥಳದಲ್ಲಿ ಗುಂಪುಗೂಡಿದ ಮತ್ತಷ್ಟು ಜನ ವಾಹನಕ್ಕೆ ಬೆಂಕಿಹಚ್ಚಿದ್ದಾರೆ (ಚಿತ್ರ ನೋಡಿ). 4.30ರ ವೇಳೆಗೆ ಇಡೀ ಬಸ್ಸು ಸುಟ್ಟುಕರಕಲಾಗಿದೆ.
ಆದರೆ ತನ್ನ ಮಗುವಿಗೆ ಏನಾಗಿದೆಯೆಂಬುದನ್ನು ಅರಿಯದ ಶ್ರುತಿಯ ತಾಯಿ ಪ್ರಿಯಾ ಅವರು ಎಷ್ಟು ಹೊತ್ತಾದರೂ ಬಸ್ಸು ಬರಲಿಲ್ಲವಲ್ಲಾ ಎಂದು ತಮ್ಮ ಮನೆಯ ಮುಂದೆ ಶ್ರುತಿಗಾಗಿ ಕಾದು ನಿಂತಿದ್ದರು. ವಿಷಯ ತಿಳಿದ ಇತರೆ ಪೋಷಕರು ತಕ್ಷಣ ಶ್ರುತಿಯ ಮನೆಗೆ ದೌಡಾಯಿಸಿದರು.
ರಸ್ತೆಯಲ್ಲಿದ್ದ ತಾಯಿ ಪ್ರಿಯಾರನ್ನು ಮನೆಯೊಳಕ್ಕೆ ಕರೆದೊಯ್ದು ವಿಷಯ ತಿಳಿಸಿ, ಸಮಾಧಾನ ಮಾಡಿದರು. ಶ್ರುತಿಯ (ಮುದ್ದಿನ ಹೆಸರು ಮಾಲಾ) ತಂದೆ ಸೇತುಮಾಧವನ್ ಮಾರುತಿ ಒಮ್ನಿ ಮತ್ತು ಆಟೋ ರಿಕ್ಷಾ ಹೊಂದಿದ್ದು, ಶಾಲಾ ಮಕ್ಕಳನ್ನು ಕರೆದೊಯ್ಯುವ ಉದ್ಯೋಗದಲ್ಲಿದ್ದಾರೆ.
ಆರು ತಿಂಗಳ ಹಿಂದಷ್ಟೇ ಬಸ್ಸಿಗೆ 'ಸಾಮರ್ಥ್ಯ ಪತ್ರ' ನೀಡಲಾಗಿತ್ತು. ಆದರೆ ಸಾರಿಗೆ ಇಲಾಖೆಯಲ್ಲೇ ಇಂತಹ ತೂತುಗಳು ಸಾಕಷ್ಟು ಇರುವಾಗ fitness certificate ನೀಡಿದ ಅಧಿಕಾರಿ ಸೀಟಿನ ಕೆಳಗೆ ಹೋಗಿ ಅಲ್ಲಿ ತೂತು ಇದೆಯಾ ಎಂದು ಏಕೆ ನೋಡಿರುತ್ತಾನೆ? ಎಂದು ದುರ್ಘಟನೆಯನ್ನು ಕಂಡ ಹಿರಿಯ ವ್ಯಕ್ತಿಯೊಬ್ಬರು ಹೇಳಿದ್ದು ಭ್ರಷ್ಟ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿತ್ತು.
ಮಂಡ್ಯ- ಮರಳು ಲಾರಿ ಹರಿದು ಶಾಲಾ ಬಾಲಕಿ ಸಾವು: ಇಂದು (ಗುರುವಾರ) ಬೆಳಗ್ಗೆ ಮಂಡ್ಯ ಜಿಲ್ಲೆಯಲ್ಲೂ ಇಂತಹ ದುರ್ಘಟನೆಗೆ ಶಾಲಾ ಮಗು ಪ್ರಾಣ ತೆತ್ತಿದೆ. ಟಿ. ನರಸೀಪುರ ತಾಲೂಕಿನ ಮಾದಾಪುರದಲ್ಲಿ ಮರಳು ತುಂಬಿದ್ದ ಲಾರಿಯೊಂದು 8 ವರ್ಷದ ಶಾಲಾ ಬಾಲಕಿ ಸ್ಫೂರ್ತಿಯ ಮೇಲೆ ಹರಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.