ಸಿಎಂ ವಿವೇಚನೆ: ಜಿ ಕೆಟಗರಿ ಸೈಟಿಗೆ ಕತ್ತರಿ

ಅಂದರೆ ಮುಖ್ಯಮಂತ್ರಿಯ ವಿವೇಚನಾ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳನ್ನು ವಿಶೇಷ ಜನರಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಮೇ 19 ರಿಂದಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ಸ್ಥಗಿತಮಾಡಲಾಗಿದೆ. ಹಾಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೇ ಬುಧವಾರ ವಿಧಾನಸಭೆಗೆ ಈ ವಿಷಯ ತಿಳಿಸಿದ್ದಾರೆ.
'ಜಿ' ಕೋಟಾ ನಿವೇಶನ (G category sites) ಹಂಚಿಕೆ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದ ಬಳಿಕವೂ ನಿವೇಶನಗಳನು ವಿತರಣೆ ಮಾಡಲಾಗುತ್ತಿದೆ ಎಂದು ಪಕ್ಷೇತರ ಸದಸ್ಯ ಗೂಳಿಹಟ್ಟಿ ಡಿ. ಶೇಖರ್ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಆಗ, ಪ್ರತಿಕ್ರಿಯೆ ನೀಡಿದ ಸಿಎಂ ಶೆಟ್ಟರ್, ಹೈಕೋರ್ಟ್ ಆದೇಶದಂತೆ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದರು.
'ಬಿಡಿಎ ಬಿಡಿ ನಿವೇಶನಗಳನ್ನು 'ಜಿ' ಕೋಟಾ ಅಡಿಯಲ್ಲಿ ಹಂಚಿಕೆ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಹೈಕೋರ್ಟ್ 2010ರ ಡಿಸೆಂಬರ್ 15ರಂದು ಆದೇಶ ಹೊರಡಿಸಿತ್ತು. ಆದರೆ, ಅದಕ್ಕೂ ಹಿಂದೆಯೇ ನಿವೇಶನ ಹಂಚಿಕೆಗೆ ಸರ್ಕಾರ ಹೊರಡಿಸಿದ್ದ ಆದೇಶಗಳು ಅನುಷ್ಠಾನಕ್ಕೆ ಬಾಕಿ ಇದ್ದವು. ಇಂತಹ 48 ಆದೇಶಗಳ ಅನುಷ್ಠಾನ ಪ್ರಕ್ರಿಯೆ ಪ್ರಗತಿಯಲ್ಲಿತ್ತು' ಎಂದರು.
'ಒಂಬತ್ತು ಪ್ರಕರಣಗಳಲ್ಲಿ ಫಲಾನುಭವಿಗಳು ಬಿಡಿಎ ಖಾತೆಗೆ ಹಣ ಜಮಾ ಮಾಡಿದ್ದರು. 19 ಪ್ರಕರಣಗಳಲ್ಲಿ ಕ್ರಯಪತ್ರ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿತ್ತು. 20 ಪ್ರಕರಣಗಳಲ್ಲಿ ಫಲಾನುಭವಿಗಳು ಪರ್ಯಾಯ ನಿವೇಶನ ಕೋರಿದ್ದರು. ಈ ಪ್ರಕ್ರಿಯೆಗಳನ್ನು ಮುಂದುವರಿಸಬಹುದೇ ಎಂಬ ಪ್ರಶ್ನೆಯನ್ನು ಕಾನೂನು ಇಲಾಖೆಯ ಮುಂದಿಡಲಾಗಿತ್ತು. ಕಾನೂನು ಇಲಾಖೆ ಪ್ರಕ್ರಿಯೆ ಸ್ಥಗಿತಕ್ಕೆ ಸಲಹೆ ಮಾಡಿತ್ತು. ಅದರಂತೆ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಶೆಟ್ಟರ್ ತಿಳಿಸಿದರು.
ಈವರೆಗೂ ಸರ್ಕಾರ ಹೊರಡಿಸಿರುವ ಆದೇಶಗಳಲ್ಲಿ 325 ಪ್ರಕರಣಗಳಲ್ಲಿ ಇನ್ನೂ ಫಲಾನುಭವಿಗಳಿಗೆ ನಿವೇಶನ ನೀಡಿಲ್ಲ. ಕಾನೂನು ಇಲಾಖೆಯ ಅಭಿಪ್ರಾಯದಂತೆ ನಿವೇಶನ ಹಂಚಿಕೆ ಮಾಡದಿರುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು. ಕಳೆದ 10 ವರ್ಷಗಳಲ್ಲಿ 867 ಸೈಟುಗಳನ್ನು ವಿತರಿಸಲಾಗಿದೆ.












Click it and Unblock the Notifications