ಬಿಜೆಪಿ ಪಟ್ಟ: ನಳಿನ್ ಕುಮಾರ್ ಆಯ್ತು ಈಗ ಪ್ರಹ್ಲಾದರು
ಬೆಂಗಳೂರು, ಜುಲೈ 19: ರಾಜ್ಯ ವಿಧಾನಸಭೆಯ 14ನೆ ಅಧಿವೇಶನ ಇಂದಿನಿಂದ (8 ದಿನಗಳ ಕಾಲ) ಆರಂಭವಾಗಲಿದೆ. ಒಂದೆಡೆ ಮುಕ್ಕಾಲು ಪಾಲು ನಾಡು ಬರದ ದವಡೆಯಲ್ಲಿದ್ದರೆ ನಾಡಪ್ರಭುಗಳು ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದು ಇಂದಿನ ನಿತ್ಯಸತ್ಯ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ನಾನಾ ಬಣಗಳ ಶಾಸಕರು ಬಹಿರಂಗವಾಗಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ ಪ್ರತಿಪಕ್ಷಗಳು ಅವರವೇ ಕಿತ್ಲಾಡಿಕೊಂಡು, ಮತದಾನ ಪ್ರಭುವಿನ ಬಳಿ ಹೋದರೆ ಸಾಕಪ್ಪಾ ಎಂದು 'ಕೈ'ಕಟ್ಟಿ ಕುಳಿತಿದ್ದಾರೆ. ಒಂದು ಪ್ರತಿಪಕ್ಷವಂತೂ ಇಂತಹ ಭಿನ್ನಮತದ ನಾಯಕರನ್ನು ತನ್ನ ತಲೆಯ ಮೇಲೆ ಹೊರೆಸಿಕೊಳ್ಳುವುದು ಹೇಗಪ್ಪಾ ಎಂಬ ಚಿಂತೆಯಲ್ಲಿದೆ.
ಈ ಮಧ್ಯೆ ಅಧಿವೇಶನಕ್ಕೆ ಮುನ್ನ ನಡೆಯುವ ಸಾಂಪ್ರದಾಯಿಕ ಶಾಸಕಾಂಗ ಸಭೆ ಇದೀಗ ತಾನೇ ಆರಂಭವಾಗಿದೆ. ಸಭೆಯಲ್ಲಿ ಸದಾನಂದ ಗೌಡರ ಬಣದ ಜಾರಕಿಹೊಳಿ ಟೀಂ ಮತ್ತು ಕರುಣಾಕರ ರೆಡ್ಡಿ ನೇತೃತ್ವದ ಬಂಡಾಯ ಶಾಸಕರು Absent ಆಗಿರುವುದು ಪ್ರಮುಖವಾಗಿ ಗೋಚರಿಸುತ್ತಿದೆ.
ಇದು ಸರಕಾರಿ ಸುದ್ದಿಯಾದರೆ ಇನ್ನು ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ದೊಂಬರಾಟವೂ ಕಡಿಮೆಯೇನಿಲ್ಲ. ಕೆಎಸ್ ಈಶ್ವರಪ್ಪ ಎಂಬ ಮೇರು ಪುರುಷರೊಬ್ಬರು ರಾಜ್ಯಾಧ್ಯಕ್ಷ ಸ್ಥಾನದಿಂದ ಕಳಚಿಕೊಂಡು ಕಂದಾಯ ಕಟ್ಟುತ್ತಿದ್ದರೆ ಆ ಸ್ಥಾನವನ್ನು ಅಲಂಕರಿಸಲು ನಾಮುಂದು ತಾಮುಂದು ಎಂದು ಬಿಜೆಪಿ ಮಂದಿ ಹವಣಿಸುತ್ತಿದ್ದಾರೆ.
ಈ ಮಧ್ಯೆ, ನಳಿನ್ ಕುಮಾರ್ ಕಟೀಲ್ ಎಂಬ ಪಕ್ಷದ dark horse ರಾಜ್ಯಾಧ್ಯಕ್ಷ ಸ್ಥಾನದ ಮೆಲೆ ಟವಲ್ ಹಾಕಿದ ವೇಗದಲ್ಲೇ ಅದನ್ನು ವಾಪಸ್ ಎಳೆದುಕೊಂಡಿದೆ. ಈಗ ಸದ್ಯಕ್ಕೆ ಮುಖ್ಯಮಂತ್ರಿ ತವರಿನ ಪ್ರಹ್ಲಾದ ಜೋಶಿ ರಾಜ್ಯಾಧ್ಯಕ್ಷ ಖುರ್ಚಿ ಮೇಲೆ ತಮ್ಮ ಹೆಸರನ್ನು ತೇಲಿಬಿಟ್ಟಿದ್ದಾರೆ. ತಾನು ಪಕ್ಕಕ್ಕೆ ಸರಿಯುವ ಮೂಲಕ ಇಂತಹ ಬೆಳವಣಿಗೆಗಳಿಗೆಲ್ಲ ಕಾರಣವಾದ ಸದಾನಂದ ಗೌಡರು ಅದೆಲ್ಲವನ್ನೂ side wingನಿಂದ ನೋಡುತ್ತಿದ್ದು, ನಾನೇ ರಾಜ್ಯಾಧ್ಯಕ್ಷನಾಗುವುದು ನೋಡುತ್ತಿರಿ ಎಂದು ಯಕ್ಷಗಾನದಲ್ಲಿ ತಲ್ಲೀನರಾಗಿದ್ದಾರಂತೆ.
ಈಗಾಗಲೇ ಕರಾವಳಿ ದಕ್ಷಿಣ ಕನ್ನಡಕ್ಕೆ ಅನ್ಯಾಯವಾಗಿದೆ ಎಂಬ ಕೂಗನ್ನು ಮುಂದಿಟ್ಟುಕೊಂಡು ಸಂಸದ ನಳಿನ್ ಕುಮಾರ್ ಕಟೀಲ್ ಪಕ್ಷದ ರಾಜ್ಯಾಧ್ಯಕ್ಷರಾಗಲು ಪ್ರಯತ್ನಿಸಿದರಾದರೂ ಹುಬ್ಬಳ್ಳಿಯಾಂವ ರಾಜ್ಯಾಧ್ಯಕ್ಷ ಕುರ್ಚಿಯ ಮೇಲೆ ಟವಲ್ ಹಾಕುತ್ತಿದ್ದಂತೆ ಹಿಂದೆ ಸರಿದಿದ್ದಾರೆ.
ಇಬ್ಬರೂ ಆರ್ ಎಸ್ಎಸ್ ಮೂಲದವರೇ ಆದರೂ ಪ್ರಹ್ಲಾದ ಜೋಶಿಗೆ ಸಾಕ್ಷಾತ್ ಮುಖ್ಯಮಂತ್ರಿಗಳ ಬೆಂಬಲವಿದೆ. ಜತೆಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅನಂತ ಕುಮಾರ್ ಸದಾ ಅವರ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದನ್ನು ಅರಿತ ಕಟೀಲ್ ಮುಂದಾಲೋಚನೆಯಿಂದ ರಾಜ್ಯಾಧ್ಯಕ್ಷ ಕುರ್ಚಿ ರೇಸಿನಲ್ಲಿ ತಾನಿಲ್ಲ ಎಂದು ಪ್ರಕಟಿಸಿದ್ದಾರೆ. ಪ್ರಧಾನವಾಗಿ, ಯಡಿಯೂರಪ್ಪ ಅವರನ್ನು ಕಂಡರೆ ಅಷ್ಟಕ್ಕಷ್ಟೇ ಎನ್ನುವ ಪ್ರಹ್ಲಾದ ಜೋಶಿ ರಾಷ್ಟ್ರೀಯ ವರಿಷ್ಠರಿಗೂ ಸಮ್ಮತವಾಗಬಹುದು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬಂದಿದೆ.